ಕರಾವಳಿಯಾದ್ಯಂತ ಸಂಭ್ರಮದ ಕ್ರಿಸ್ಮಸ್
Team Udayavani, Dec 26, 2022, 1:53 AM IST
ಮಂಗಳೂರು/ ಉಡುಪಿ: ಯೇಸು ಕ್ರಿಸ್ತರ ಜನ್ಮ ಸ್ಮರಣೆಗಾಗಿ ಆಚರಿಸುವ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ರವಿವಾರ ಸಂಭ್ರಮ, ಸಡಗರದಿಂದ ಆಚರಿಸಿದರು.
ದ.ಕ. ಜಿಲ್ಲೆಯ ಚರ್ಚ್ಗಳಲ್ಲಿ ವಿಶೇಷ ಬಲಿಪೂಜೆ, ಪ್ರಾರ್ಥನೆ ನೆರವೇರಿತು. ಬಿಷಪ್ ಧರ್ಮಪ್ರಾಂತದ ಗ್ರಾಮೀಣ ಭಾಗದ ಚರ್ಚ್ಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಈ ಬಾರಿ ಕ್ರಿಸ್ಮಸ್ ಈವ್ನ ಪೂಜೆಯನ್ನು ನಗರದ ರೊಸಾರಿಯೋ ಕೆಥೆಡ್ರಲ್ನಲ್ಲಿ ಆಚರಿಸಿದರೆ ಕ್ರಿಸ್ಮಸ್ ರವಿವಾರದ ಪೂಜೆ ಬಂಟ್ವಾಳದ ಸಣ್ಣ ಚರ್ಚ್ಗಳಲ್ಲಿ ಒಂದಾದ ಬಾಂಬೀಲ್ ನಲ್ಲಿ ಮುಂಜಾನೆಯ ಪೂಜೆಯನ್ನು ನೆರವೇರಿಸಿದರು.
ಉಡುಪಿ ಬಿಷಪ್ ಕಲ್ಯಾಣಪುರ ಕೆಥೆಡ್ರಲ್ನಲ್ಲಿ ಬಲಿಪೂಜೆ ನೆರವೇರಿಸಿ ಆಶಿರ್ವಚನ ನೀಡಿದರು.
ಕ್ರಿಸ್ಮಸ್ ಟ್ರೀ ಮತ್ತು ನಕ್ಷತ್ರಗಳು ಹಾಗೂ ಗೋದಲಿಗಳು ಆಕರ್ಷಣೆಯಾಗಿದ್ದವು. ಚರ್ಚ್ ಗಳಲ್ಲಿ ಮತ್ತು ಮನೆಗಳಲ್ಲಿ ಆಕರ್ಷಕ ಗೋದಲಿಗಳು ನಿರ್ಮಾಣ ಗೊಂಡಿದ್ದವು. ವಿಶೇಷ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ರವಿವಾರ ಬೆಳಗ್ಗೆಯಿಂದಲೇ ಶುಭಾ ಶಯಗಳ ವಿನಿಮಯ ನಡೆಯಿತು. ಕ್ರಿಸ್ಮಸ್ ಬಲಿಪೂಜೆ ಆರಂಭಕ್ಕೂ ಮುನ್ನ ಕ್ರಿಸ್ಮಸ್ ಸಂದರ್ಭದ ವಿಶೇಷ ಗೀತೆಗಳ ಕ್ಯಾರಲ್ಸ್ ನಡೆಯಿತು.
ಬಾಂಬಿಲಪದವು ಚರ್ಚ್ನಲ್ಲಿ
ಬಲಿಪೂಜೆ ಅರ್ಪಿಸಿದ ಬಿಷಪ್
ಬಂಟ್ವಾಳ, ಡಿ. 25: ಶಾಂತಿಯ ಸಂದೇಶವನ್ನು ಸಾರುವ ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ರವಿವಾರ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ರೈ| ರೆ| ಡಾ| ಪೀಟರ್ ಪಾವ್É ಸಲ್ಡಾನ್ಹಾ ಅವರು ಬಂಟ್ವಾಳದ ಬಾಂಬಿಲಪದವು ಸಂತ ಜಾನ್ ಮರಿವಿಯನ್ನೆ ಚರ್ಚ್ಗೆ ಭೇಟಿ ನೀಡಿ ಬಲಿಪೂಜೆಯನ್ನು ಅರ್ಪಿಸಿದರು.
ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಬಿಷಪ್ ಅವರು ಪ್ರತೀವರ್ಷ ಅನಿರೀಕ್ಷಿತವಾಗಿ ಸಣ್ಣ ಚರ್ಚ್ಗಳಿಗೆ ಭೇಟಿ ನೀಡುತ್ತಿದ್ದು, ಅದೇ ರೀತಿ ಈ ಬಾರಿ ಬಾಂಬಿಲಪದವು ಚರ್ಚ್ಗೆ ಭೇಟಿ ನೀಡಿದ್ದರು. ಚರ್ಚ್ನ ಧರ್ಮಗುರು ವಂ| ನವೀನ್ ಡಿ’ಸೋಜಾ ಸೇರಿದಂತೆ ಚರ್ಚ್ನ ವ್ಯಾಪ್ತಿಯ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.