ಕಡಲ ಸಂಪನ್ಮೂಲ ಅನ್ವೇಷಣೆಗೆ ಕರಾವಳಿಯಲ್ಲಿ ಕೇಂದ್ರ
ತಿಂಗಳ ಒಳಗೆ ಕಾರ್ಯಾರಂಭ ನಿರೀಕ್ಷೆ ; ಸ್ಟಾರ್ಟ್ ಅಪ್ ಸ್ಥಾಪನೆಗೆ ಉತ್ತೇಜನ
Team Udayavani, Dec 13, 2022, 7:00 AM IST
ಮಂಗಳೂರು: ಕರಾವಳಿಯನ್ನು ನೀಲಿ ಆರ್ಥಿಕತೆ (ಬ್ಲೂ ಎಕಾನಮಿ) ಮಾಡುವ ಸಂಕಲ್ಪದ ಬಗ್ಗೆ ಪ್ರಧಾನಿ ಮೋದಿ ಘೋಷಿಸಿದ ಕೆಲವೇ ತಿಂಗಳ ಅಂತರದಲ್ಲಿ ಈಗ ಕಡಲ ಜೈವಿಕ ಸಂಪನ್ಮೂಲ ಕೇಂದ್ರ ಸ್ಥಾಪನೆಗೆ ಮಂಗಳೂರಿನ ಮೀನುಗಾರಿಕೆ ಕಾಲೇಜು ಮುಂದಡಿ ಇರಿಸಿದೆ.
ಕಡಲಾಳದಲ್ಲಿನ ಮೀನು ಮತ್ತು ಸಾಗರ ಸಸ್ಯಗಳ ಜೈವಿಕ ಸಂಯುಕ್ತಗಳಿಂದ ಹೊಸ ಆಹಾರ ಉತ್ಪನ್ನ ತಯಾರಿಸಲು ಸಾಧ್ಯವೇ ಎಂದು ಸಂಶೋಧನೆ ಕೈಗೊಳ್ಳಲು ಕಾಲೇಜು ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಒಂದು ತಿಂಗಳ ಒಳಗೆ ಈ ಕೇಂದ್ರ ಕಾರ್ಯರೂಪಕ್ಕೆ ಬರಲಿದೆ. ವಿದೇಶಗಳಲ್ಲಿ ಕಡಲಿನ ಜೈವಿಕ ಅಂಶಗಳನ್ನು ಸಂಶೋಧಿಸಿ ಹೊಸ ಉತ್ಪನ್ನ ತಯಾರಿಸಲಾಗುತ್ತಿದೆ. ಅಲ್ಲಿ ಔಷಧ ಮತ್ತಿತರ ಕ್ಷೇತ್ರಗಳಲ್ಲಿ ಸಮುದ್ರ ಉತ್ಪನ್ನಗಳ ಪಾಲು ಗಮನಾರ್ಹವಾಗಿದೆ. ಆದರೆ ಭಾರತದಲ್ಲಿ ಸಂಶೋಧನೆ ಅಷ್ಟಾಗಿ ನಡೆದಿಲ್ಲ.
ನವೋದ್ಯಮಕ್ಕೆ ಉತ್ತೇಜನ ನೀಡುವ ರಾಜ್ಯ ಸರಕಾರದ ಕರ್ನಾಟಕ ಇನ್ನೋವೇಶನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿ (ಕಿಟ್ಸ್) ಮೂಲಕ ದೊರೆಯುವ 6 ಕೋ.ರೂ. ಅನುದಾನದಲ್ಲಿ ಕೇಂದ್ರವನ್ನು ಆರಂಭಿಸಲಾಗುತ್ತದೆ. ಕೇಂದ್ರ ಸರಕಾರದ ಭೂವಿಜ್ಞಾನ ಸಚಿವಾಲಯ ಈ ಹಿಂದೆ ಪ್ರಕಟಿಸಿದ ಬ್ಲೂ ಎಕಾನಮಿ ನೀತಿಯಲ್ಲಿ ಪ್ರಸ್ತಾವವಾಗಿರುವ “ಮರೈನ್ ಬಯೋಟೆಕ್ ಕೇಂದ್ರ’ದ ಮಾದರಿಯಲ್ಲಿ ಈ ಕೇಂದ್ರ ನಿರ್ಮಾಣವಾಗಬೇಕಿದೆ.
ಕೇಂದ್ರದಲ್ಲಿ ಏನಿರಲಿದೆ?
4,200 ಚದರಡಿ ವಿಸ್ತೀರ್ಣದ ಇನ್ಕುಬೇಶನ್ ಸೆಂಟರ್ನಲ್ಲಿ ಪ್ರಯೋಗಾಲಯ, ತರಬೇತಿ ಕೇಂದ್ರ ಮತ್ತು ಕಚೇರಿ ಇರಲಿದೆ. 3 ವರ್ಷಗಳಲ್ಲಿ 100 ಸ್ಟಾರ್ಟ್ಅಪ್ಗ್ಳು ತಲೆಯೆತ್ತಲಿವೆ. ಸ್ಟಾರ್ಟ್ ಅಪ್ಗ್ಳಿಗೆ ಸಹಾಯಧನವೂ ಸಿಗಲಿದೆ.
ಕೊಚ್ಚಿಯ ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆ ಸಹಿತ ಹಲವು ಸಂಸ್ಥೆಗಳ ಪಾಲ್ಗೊಳ್ಳುವಿಕೆಯ ಮೂಲಕ ಕಡಲ ಜೈವಿಕ ಸಂಪನ್ಮೂಲ ಕೇಂದ್ರವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ನಿರ್ಧಾರ ಈಗ ಸರಕಾರದ ಅಂತಿಮ ಹಂತದಲ್ಲಿದೆ. ಕಡಲಿನ ಜೈವಿಕ ಸಂಯುಕ್ತಗಳಿಂದ ಹೊಸ ಆಹಾರ ತಯಾರಿ ಸಂಶೋಧನೆ, ಸ್ಟಾರ್ಟ್ ಅಪ್ ಸ್ಥಾಪಿಸಲು ಅವಕಾಶವಿದೆ.
– ಡಾ| ಶಿವಕುಮಾರ್ ಮಗದ, ಡೀನ್, ಮೀನುಗಾರಿಕೆ ಕಾಲೇಜು
ಕೇಂದ್ರದಿಂದ
ಆಗುವ ಲಾಭವೇನು?
-ಕರಾವಳಿ ತಟದಲ್ಲಿರುವ ಸೀವೀಡ್ (ಸಮುದ್ರ ಕಳೆ) ಮೂಲಕ ಹೊಸ ಉತ್ಪನ್ನ ಸೃಷ್ಟಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ
-ಕೈಗಾರಿಕೆಗಳಿಗೆ ಬಳಸುವ ಹಲವು ರಾಸಾಯನಿಕಗಳ ಸಂಶೋಧನೆ
-ಪ್ರಾಣಿ ಆಹಾರ ಸಂಶೋಧನೆ-ಉತ್ಪಾದನೆ
-ಬಯೋ ಇಂಧನ ಕುರಿತ ಸಂಶೋಧನೆ
-ಉಪ್ಪು ನೀರು ಸಂಸ್ಕರಣೆ
- ದಿನೇಶ್ ಇರಾ