ಉದ್ಯಮದಲ್ಲಿ ಹೊಂದಾಣಿಕೆ ಅಗತ್ಯ: ರೈ
Team Udayavani, Jan 31, 2018, 11:24 AM IST
ಮಂಗಳೂರು: ಬೀಡಿ ಕಾರ್ಮಿಕರು ತಿಳಿವಳಿಕೆ ಕೊರತೆಯಿಂದ ಸರಕಾರದ ಸೌಲಭ್ಯ ಪಡೆಯಲು ಎಡವುತ್ತಿದ್ದು, ಗುತ್ತಿಗೆದಾರರು ಸೌಲಭ್ಯ ದೊರಕಿಸಿ ಕೊಡಲು ಸಹಾಯ ಮಾಡಬೇಕಿದೆ. ಕಾರ್ಮಿಕರು -ಗುತ್ತಿಗೆದಾರರು ಹೊಂದಾಣಿಕೆಯಿಂದ ಕೆಲಸ ಮಾಡಿದಾಗ ಬೀಡಿ ಉದ್ಯಮ ಬೆಳೆಯಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಪುರಭವನದಲ್ಲಿ ಸೌತ್ ಕೆನರಾ ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್ ಆಯೋಜಿಸಿದ್ದ ಬೀಡಿ ಕಾರ್ಮಿಕರು ಮತ್ತು ಬೀಡಿ ಗುತ್ತಿಗೆದಾರರ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕೋಟಾ³ ಕಾಯ್ದೆ-ತಂಬಾಕು ನಿಷೇಧ ಮೊದಲಾದ ವಿಚಾರಗಳಿಂದ ಬೀಡಿ ಉದ್ಯಮ ಗಣನೀಯ ಕುಸಿ ದಿರುವುದು ನಿಜ. ಆದರೆ ಜಿಲ್ಲೆಯಲ್ಲಿ ಬೀಡಿಯನ್ನೇ ನಂಬಿ ಹಲವು ಕುಟುಂಬಗಳು ವಾಸಿಸುತ್ತಿದ್ದು, ಅವ ರಿಗೆ ಉದ್ಯೋಗ ಭದ್ರತೆ ಒದಗಿಸುವುದು ಸರ ಕಾರದ ಕರ್ತವ್ಯ . ಈ ನಿಟ್ಟಿನಲ್ಲಿ ಬೀಡಿ ಉದ್ಯಮ ಉಳಿಸಲು ಪ್ರಯತ್ನಿಸುವುದಾಗಿ ಸಚಿವ ರೈ ವಿವರಿಸಿದರು.
ಉದ್ಯಮ ಉಳಿಸಲು ಯತ್ನ
ಸಮಾವೇಶವನ್ನು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದೇಶದ ಅಭಿವೃದ್ಧಿಗೆ ದ.ಕ. ಜಿಲ್ಲೆಯು ಸಾಕಷ್ಟು ಕೊಡುಗೆಯನ್ನು ನೀಡಿದ್ದು, ಅದರಲ್ಲಿ ಇಲ್ಲಿನ ಹೆಂಚು, ಗೇರು, ಬೀಡಿ ಉದ್ಯಮ ಪ್ರಮುಖವಾಗಿವೆ. ಬೀಡಿ ಉದ್ಯಮವು ಜಿಲ್ಲೆಯಲ್ಲಿ ಗುಡಿ ಕೈಗಾರಿಕೆಯಾಗಿ ಬೆಳೆದು ಬಡತನವನ್ನು ದೂರ ಮಾಡಿದೆ. ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧೂಮಪಾನ ನಿಷೇಧದ ಚರ್ಚೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬೀಡಿಯ ನಿಷೇಧ ಭೀತಿ ಇದೆ. ಆದರೆ ಈ ಉದ್ಯಮವನ್ನು ಉಳಿಸಲು ಸರಕಾರ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
ಮನವಿ ಸಲ್ಲಿಕೆ
ಕಾರ್ಯಕ್ರಮದಲ್ಲಿ ಯೂನಿಯನ್ ವತಿಯಿಂದ ಸಚಿವರು ಹಾಗೂ ಸಂಸದರಿಗೆ ವಿವಿಧ ಬೇಡಿಕೆಗಳ ಹಕ್ಕೊತ್ತಾಯ ಮನವಿಯನ್ನು ನೀಡಲಾಯಿತು. ವೇದಿಕೆ ಯಲ್ಲಿ ಮೇಯರ್ ಕವಿತಾ ಸನಿಲ್, ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಮನಪಾ ಮುಖ್ಯ ಸಚೇತಕ ಎಂ. ಶಶಿಧರ್ ಹೆಗ್ಡೆ, ಉದ್ಯಮಿ ಅಬ್ದುಲ್ಲಾ ಮೈಸೂರು, ಯೂನಿಯನ್ ಅಧ್ಯಕ್ಷ ಹರೀಶ್ ಕೆ.ಎಸ್., ಮೊಹಮ್ಮದ್ ಹನೀಫ್ ಮೊದಲಾದವರು ಉಪಸ್ಥಿತರಿದ್ದರು. ಯೂನಿಯನ್ನ ಕಾರ್ಯಾಧ್ಯಕ್ಷ ಮಹಮ್ಮದ್ ರಫಿ ಪ್ರಸ್ತಾವನೆಗೈದರು. ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್ ನಿರ್ವಹಿಸಿದರು.