“ಬಿಜೆಪಿಯಿಂದ ಭಯದ ವಾತಾವರಣ ನಿರ್ಮಾಣ’
ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
Team Udayavani, Apr 2, 2019, 9:59 AM IST
ಬೆಳ್ತಂಗಡಿ: ಹಿಂದುತ್ವದ ಆಧಾರದಲ್ಲಿ ಜನರನ್ನು ಭಯದ ವಾತಾವರಣ ದಲ್ಲಿಡುವ ಕಾರ್ಯವನ್ನು ಬಿಜೆಪಿ ಮಾಡು ತ್ತಿದೆ. ಆದರೆ ಕಾಂಗ್ರೆಸ್ ನಾವೆಲ್ಲರೂ ಒಂದು ಎಂಬಂತೆ ಪ್ರಜಾ ಪ್ರಭುತ್ವ ಉಳಿಸುವ ಕೆಲಸ ಮಾಡುತ್ತಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.
ಸೋಮವಾರ ಬೆಳ್ತಂಗಡಿಯಲ್ಲಿ ಚುನಾವಣೆಗಾಗಿ ಕಾಂಗ್ರೆಸ್ ಕಾರ್ಯ ಕರ್ತರ ಮೊದಲ ಸಮಾವೇಶವನ್ನು ಅವರು ಉದ್ಘಾಟಿಸಿದರು. ಜಿಲ್ಲೆಯ ಜನತೆಯ ಸ್ವಾಭಿಮಾನವನ್ನು ಉಳಿಸುವುದಕ್ಕಾಗಿ ಈ ಬಾರಿ ಮಿಥುನ್ ರೈ ಗೆಲ್ಲಬೇಕಿದ್ದು, ಅವರು ಗೆದ್ದು ನಾಯಕರಾಗುವ ಬದಲು ಸೇವಕರಾಗಬೇಕಿದೆ. ಈ ನಿರೀಕ್ಷೆ ಹುಸಿಗೊಳಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.
ಸಚಿವ ಯು.ಟಿ. ಖಾದರ್ ಮಾತನಾಡಿ, ಪ್ರತಿಯೊಬ್ಬ ನಾಯಕರು ಕೂಡ ಪ್ರತಿಬೂತ್ನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಗೆ ತರಬೇಕಿದೆ ಎಂದರು.
ಅಭ್ಯರ್ಥಿ ಮಿಥುನ್ ರೈ ಮಾತನಾಡಿ, ಕಾಂಗ್ರೆಸ್ ನಾಯಕರು ಇಟ್ಟಿರುವ ನಂಬಿಕೆಗೆ ತೊಂದರೆಯಾಗದ ರೀತಿಯಲ್ಲಿ ಎಲ್ಲರ ಧ್ವನಿಯಾಗಿ ಕೆಲಸ ಮಾಡಲಿದ್ದೇವೆ. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ, ಸಾಮರಸ್ಯ ಸ್ಥಾಪನೆಯೇ ತನ್ನ ಉದ್ದೇಶ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ, ಎಸ್ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿದರು. ಬೆಳ್ತಂಗಡಿ ಬಿಜೆಪಿ ಮಾಜಿ ಅಧ್ಯಕ್ಷ ರಂಜನ್ ಜಿ. ಗೌಡ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಂಡರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ನಾಯಕರಾದ ಐವನ್ ಡಿ’ಸೋಜಾ, ಗಂಗಾಧರ ಗೌಡ, ಬೆಳಪು ದೇವಿಪ್ರಸಾದ್ ಶೆಟ್ಟಿ, ಶಾಲೆಟ್ ಪಿಂಟೋ, ರಾಜಶೇಖರ ಅಜ್ರಿ, ಪ್ರವೀಣ್ಚಂದ್ರ ಜೈನ್, ಕಣಚೂರು ಮೋನು, ಕೃಪಾ ಅಮರ್ ಆಳ್ವ, ನವೀನ್ಚಂದ್ರ ಜೆ. ಶೆಟ್ಟಿ, ಬಿ.ಎಚ್. ಖಾದರ್, ಜಿ.ಎ. ಬಾವಾ, ಧನಂಜಯ ಅಡ³ಂಗಾಯ, ಪೀತಾಂಬರ ಹೇರಾಜೆ ಉಪಸ್ಥಿತರಿದ್ದರು. ಶ್ರೀನಿವಾಸ ಕಿಣಿ ಸ್ವಾಗತಿಸಿದರು. ಅಭಿನಂದನ್ ಹರೀಶ್ ವಂದಿಸಿದರು. ರಾಜಶೇಖರ ಶೆಟ್ಟಿ ಮಡಂತ್ಯಾರು ನಿರ್ವಹಿಸಿದರು.
ನಾನಾದರೆ ರಾಜೀನಾಮೆ ನೀಡುತ್ತಿದ್ದೆ: ಡಿ.ಕೆ.ಶಿ.
ಬೆಳ್ತಂಗಡಿ: ವಿಜಯ ಬ್ಯಾಂಕ್ ವಿಲೀನ ವಿಚಾರವು ದ.ಕ. ಜಿಲ್ಲೆ ಸಹಿತ ಇಡೀ ರಾಜ್ಯಕ್ಕಾದ ಅವಮಾನ. ಡಿ.ವಿ. ಸದಾನಂದ ಗೌಡ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲು ಅವರ ಸ್ಥಾನದಲ್ಲಿ ನಾನು ಇರುತ್ತಿದ್ದರೆ ಈ ವಿಚಾರ ನಿರ್ಣಯವಾದ ದಿನದಂದೇ ರಾಜೀನಾಮೆ ನೀಡುತ್ತಿದೆ ಎಂದು ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು. ಪತ್ರಕರ್ತರ ಜತೆ ಮಾತನಾಡಿದ ಅವರು, ವಿಜಯ ಬ್ಯಾಂಕನ್ನು ಮುಚ್ಚಿಸಿದ್ದೇ
ನಳಿನ್ ಅವರ ಸಾಧನೆ. ವಿಲೀನ ಮಾಡುವುದಿದ್ದರೂ ಬ್ಯಾಂಕ್ ಆಫ್ ಬರೋಡವನ್ನೇ ವಿಜಯ ಬ್ಯಾಂಕಿನಲ್ಲಿ ವಿಲೀನ ಮಾಡಬಹುದಿತ್ತು ಎಂದರು.
ಬದಲಾವಣೆ ಸನ್ನಿಹಿತ
ಬರೀ ಆಶ್ವಾಸನೆ ಮೇಲೆ ಸರಕಾರ ನಡೆಸಲು ಸಾಧ್ಯವಿಲ್ಲ. ಪ್ರಸ್ತುತ ಪ್ರಜಾಪ್ರಭುತ್ವದ ಹಬ್ಬದ ಸಮಯವಾಗಿದ್ದು, ಬದಲಾವಣೆ ನಡೆಯಬೇಕಿದೆ. ಹೊಸ ವರ್ಷದಲ್ಲಿ ಹೊಸ ಸರಕಾರ ರಚನೆಯಾಗಲಿದೆ ಎಂದರು.