‘ಡಿ’ ಗ್ರೂಪ್ ನೌಕರರ ಸೇವೆ ಆದರ್ಶ’
Team Udayavani, Dec 18, 2017, 9:38 AM IST
ಮಹಾನಗರ: ದೇಶದ ಅಭಿವೃದ್ಧಿಯ ನೆಲೆಯಲ್ಲಿ ‘ ಡಿ’ ಗ್ರೂಪ್ ನೌಕರರು ಸೇವೆ ಅತ್ಯಂತ ಆದರ್ಶ ಎಂದು ಶ್ರೀ ಕ್ಷೇತ್ರ
ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಮಂಗಳೂರು ಪುರಭವನದಲ್ಲಿ ರವಿವಾರ ದಕ್ಷಿಣ ಕನ್ನಡ ಜಿಲ್ಲಾ ಡಿ ವರ್ಗ ನೌಕರರ ಸಂಘದ ವಜ್ರಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ರಾಜ್ಯ ಸರಕಾರಿ ಗ್ರೂಪ್ ‘ಡಿ’ ನೌಕರರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ‘ಡಿ’ ಗ್ರೂಪ್ ನೌಕರರು ಸರಕಾರಿ ವ್ಯವಸ್ಥೆಯ ಮತ್ತು ದೇಶದ ಅಭಿವೃದ್ಧಿಗೆ ಜತೆಯಾಗುವವರು ಎಂದರು.
ಸೇವೆಯಿಂದ ಅಭಿವೃದ್ಧಿ
ತ್ಯಾಗ ಮತ್ತು ಸೇವೆ ಇದ್ದಾಗ ಮಾತ್ರ ಪ್ರಗತಿ ಸುಲಭ. ಸೇವೆಯಿಂದಷ್ಟೇ ದೇಶದ ಅಭಿವೃದ್ಧಿ ಸೇವೆಯಿಂದ ಮಾತ್ರ ಸಾಧ್ಯ. ‘ಡಿ’ ಗ್ರೂಪ್ ನೌಕರರ ಸಂಘಟನೆ ಸಮಾಜಮುಖೀತಯಾಗಿದೆ ಎನ್ನುವುದಕ್ಕೆ ಸಂಘಟನೆಯ ಕಾರ್ಯಗಳೇ ಸಾಕ್ಷಿ. ನೌಕರರು ಕೆಲಸವನ್ನು ಇನ್ನಷ್ಟು ಉತ್ತಮವಾಗಿ ಮಾಡಲು ಸರಕಾರದ ಖಾಲಿ ಹುದ್ದೆಗಳನ್ನು ತುಂಬುವ ಕಾರ್ಯ ಮಾಡಬೇಕಿದೆ. ಇದು ಸಾಧ್ಯವಾದರೆ, ವ್ಯವಸ್ಥೆಯ ಕಾರ್ಯ ಕ್ಷಮತೆ ಹೆಚ್ಚುತ್ತದೆ. ಪ್ರತೀವರ್ಷ ಕಾರ್ಯಕ್ರಮಗಳನ್ನು ಆಯೋಜಿಸುವ ಜತೆಗೆ ಸಿಂಹಾವಲೋಕನವೂ ಅಗತ್ಯ ಎಂದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಜನಾಬ್ ಹಾಜಿ ಅಬ್ದುಲ್ ರಶೀದ್, ಸರಕಾರದ ಸಕಲ ವ್ಯವಸ್ಥೆಗಳನ್ನು, ಹಿರಿಯ ಅಧಿಕಾರಿಗಳ ಮನಸ್ಥಿತಿಯನ್ನು ಜವಾನ, ಗುಮಾಸ್ತನಂಥ ಸಿಬಂದಿ ಮಾತ್ರ ಅರ್ಥಮಾಡಿಕೊಳ್ಳಬಲ್ಲರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಜೆಪ್ಪು ಅಂತ ಅಂತೋನಿ ಆಶ್ರಮದ ನಿರ್ದೇಶಕ ರೆ|ಫಾ| ಓನಿಲ್ ಡಿ’ಸೋಜಾ, ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎಂ. ನಟರಾಜು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಮಂಜೇಗೌಡ, ನಟ ರೂಪೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಉಳಾಯಿಬೆಟ್ಟುವಿನಲ್ಲಿ ನಡೆದಿದ್ದ ಬಸ್ ದುರಂತದಲ್ಲಿ ಜೀವರಕ್ಷಕನಾಗಿ ಕೆಲಸಮಾಡಿದ್ದ ಪಿ.ಕೆ. ಸುಧಾಕರ್ ಅವರಿಗೆ ವಜ್ರಜವಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ನಿವೃತ್ತ ಸೈನಿಕರಾದ ರಾಮಶೇಷ ಶೆಟ್ಟಿ, ಕೆ.ಕೃಷ್ಣ ಶೆಟ್ಟಿ. ಪ್ರದೀಪ್ ಕುಮಾರ್, ಅಶುತಾ ಕೆ. ಮುಂತಾದವರನ್ನು ಗೌರವಿಸಲಾಯಿತು. ನಿವೃತ್ತ ಸಿಬಂದಿಗೆ ಸಮ್ಮಾನ, ಸಾಧಕರಿಗೆ ಗೌರವ, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ಸಂಘಟನೆಯ ‘ವಜ್ರಜವಾನ’ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆ ಮಾಡಿದರು. ಆರ್ಥಿಕವಾಗಿ ಹಿಂದುಳಿದ ನಿರಾಶ್ರಿತರಿಗೆ ಅಕ್ಕಿ ಮತ್ತು ವಸ್ತ್ರ ರೂಪದಲ್ಲಿ ದಾನ ನಡೆಯಿತು. ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಮುಖ ಪಾತ್ರ
‘ಡಿ’ ಗ್ರೂಪ್ ಸಿಬಂದಿ ಎಂದಿಗೂ ಸರಕಾರಿ ವ್ಯವಸ್ಥೆಯ ಆತ್ಮೀಯ ವರ್ಗ. ಸರಕಾರಿ ಸೇವೆಯಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ‘ಡಿ’ ಗ್ರೂಪ್ನ ಸಹಕಾರವಿಲ್ಲದೆ ಸೇವೆ ವೇಗವಾಗಿ ನಡೆಯಲು ಸಾಧ್ಯವಿಲ್ಲ. ಕುಟುಂಬದಂತೆ ಜತೆಗಿದ್ದು ಕೆಲಸ ಮಾಡುವವರು.
– ಶಶಿಕಾಂತ್ ಸೆಂಥಿಲ್
ದ.ಕ. ಜಿಲ್ಲಾಧಿಕಾರಿ