ಗಡಾಯಿಕಲ್ಲಿಗೆ ಒದಗಿದೆ ಅಪಾಯ ತುಳುನಾಡಿನ ಕೋಟೆಗೆ ಹಾನಿ!
Team Udayavani, Jan 2, 2018, 11:24 AM IST
ಬೆಳ್ತಂಗಡಿ: ತಾಲೂಕಿನ ನಡ ಗ್ರಾಮದಲ್ಲಿರುವ ಗಡಾಯಿಕಲ್ಲು ಸ್ಮಾರಕ ಕಿಡಿಗೇಡಿಗಳಿಂದ ಹಾನಿಗೀಡಾಗುತ್ತಿದೆ. ಇದರ ರಕ್ಷಣೆಗೆ ಮುತು ವರ್ಜಿ ವಹಿಸದಿದ್ದಲ್ಲಿ ಮುಂದೊಂದು ದಿನ ಬರೀ ಕಲ್ಲು ಮಾತ್ರ ಉಳಿಯಬಹುದು ಎಂಬ ಆತಂಕ ವ್ಯಕ್ತವಾಗಿದೆ. ನರಸಿಂಹಗಢ ಎಂದೇ ಸರಕಾರಿ ದಾಖಲೆಗಳಲ್ಲಿ ಉಲ್ಲೇಖೀತವಾಗಿರುವ ಗಡಾಯಿ ಕಲ್ಲು ಅಥವಾ ಜಮಲಾಬಾದ್ ಕೋಟೆ ಟಿಪ್ಪು ಸುಲ್ತಾನನ ಯುದ್ಧ ಕೇಂದ್ರವಾಗಿತ್ತು.
ಕರಾವಳಿ ಭಾಗದ ಐತಿಹಾಸಿಕ ತಾಣಗಳಲ್ಲೊಂದಾಗಿರುವ ಗಡಾಯಿಕಲ್ಲು ಸಮುದ್ರ ಮಟ್ಟದಿಂದ 1,788 ಅಡಿ ಎತ್ತರದಲ್ಲಿದೆ. ಈ ಬೃಹತ್ ಗಾತ್ರದ ಬಂಡೆಯ ಮೇಲೆ ಕೋಟೆ, ಫಿರಂಗಿ, ಕೆರೆಗಳಿವೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಬಂಡೆಯನ್ನೇರುವುದು ಒಂದು ಸಾಹಸ. ಅದು ಇದೀಗ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯೊಳಗೆ ಇರುವುದರಿಂದ ವನ್ಯಜೀವಿ (ಅರಣ್ಯ) ಇಲಾಖೆಯ ನಿಯಂತ್ರಣದಲ್ಲಿದೆ.
ತುಳುನಾಡ ಕೋಟೆ
ಗಡಾಯಿಕಲ್ಲಿನ ಮೇಲೆ ಬಂಗಾಡಿ ಅರಸ ನರಸಿಂಹ ಕಟ್ಟಿಸಿದ ಕೋಟೆ ನರಸಿಂಹಗಢವೆಂದು ಪ್ರಸಿದ್ಧ. 1794ರಲ್ಲಿ ಟಿಪ್ಪು ಸುಲ್ತಾನ್ ಆಕ್ರಮಿಸಿ ಕೊಂಡ ಬಳಿಕ ಕೋಟೆಗೆ ತನ್ನ ತಾಯಿಯ ನಾಮ ಕರಣ ಮಾಡಿದ್ದರಿಂದ ಅದು ಜಮಲಾಬಾದ್ ಕೋಟೆ ಯಾಯಿತು. ಇಲ್ಲಿರುವ ಪಾಶಿ ಗುಂಡಿ (ಟಿಪ್ಪು ಡ್ರಾಪ್)ಗೆ ಅಪರಾಧಿಗಳನ್ನು ತಳ್ಳಿ ಕೊಲ್ಲ ಲಾಗುತ್ತಿತ್ತು. ಕೋಟೆಯ ಕೊಠಡಿಯಲ್ಲಿ ಈ ಮೌಲ್ಯಯುತ ವಸ್ತುಗಳನ್ನು ಇರಿಸಲಾಗುತ್ತಿತ್ತು. ಇಲ್ಲೇ ಪಹರೆಯವರಿಗಾಗಿ ಕೊಠಡಿ, ಕೆರೆ, ಫಿರಂಗಿ, ಕಾವಲು ತಾಣ ಇತ್ಯಾದಿ ನಿರ್ಮಿಸಲಾಗಿತ್ತು. 1799 ರಲ್ಲಿ ಈ ಕೋಟೆ 4ನೇ ಮೈಸೂರು ಯುದ್ಧ ದಲ್ಲಿ ಬ್ರಿಟಿಷರ ವಶವಾಯಿತು ಎಂದು ಇತಿಹಾಸಜ್ಞ ಡಾ| ವೈ. ಉಮಾನಾಥ ಶೆಣೈ ತಿಳಿಸಿದ್ದಾರೆ.
ಕುಸಿಯುತ್ತಿದೆ
ಈಗ ಗಡಾಯಿಕಲ್ಲಿನ ಕೋಟೆ, ಬುರುಜು ನಿರ್ವಹಣೆ ಇಲ್ಲದೆ ಕುಸಿಯುತ್ತಿವೆ. ಕೋಟೆಗಾಗು ತ್ತಿರುವ ಹಾನಿಯಲ್ಲಿ ನೈಸರ್ಗಿಕ ಕಾರಣಗಳ ಜತೆಗೆ ಕಿಡಿಗೇಡಿ ಚಾರಣಿಗರ ಕೊಡುಗೆಯೂ ಇದೆ. ವಿಕೃತ ಬರಹಗಳನ್ನು ಬರೆಯುವುದರ ಜತೆಗೆ ಗೋಡೆ ಕೆಡಹುವ ಮೂಲಕ ಐತಿಹಾಸಿಕ ಸ್ಮಾರಕದ ನಾಶ ನಡೆಯುತ್ತಿದೆ.
ಇಲಾಖೆಯಿಂದ ಶುಲ್ಕ
ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗವು ಇಲ್ಲಿಗೆ ತೆರಳುವ ಹಿರಿಯರಿಗೆ 20 ರೂ., ವಿದ್ಯಾರ್ಥಿ ಗಳಿಗೆ 10 ರೂ. ಶುಲ್ಕ ವಸೂಲು ಮಾಡು ತ್ತದೆ. ಮೊದಲು ಪ್ರತಿಯೊಬ್ಬರಿಗೂ ಟಿಕೆಟ್ ನೀಡ ಲಾಗು ತ್ತಿತ್ತು, ಈಗ ತಂಡಕ್ಕೊಂದು ಸಿಂಪ್ಯೂಟರ್ ಮೆಶಿನ್ ಟಿಕೆಟ್ ಕೊಡಲಾಗುತ್ತಿದೆ. ನವೆಂಬರ್ ತಿಂಗಳಲ್ಲಿ 230 ಮಕ್ಕಳು, 475 ಹಿರಿಯರು ಗಡಾಯಿಕಲ್ಲಿಗೆ ತೆರಳಿದ್ದು, ಪ್ರತೀ ತಿಂಗಳು ಸುಮಾರು 12,000 ರೂ. ಸಂಗ್ರಹವಾಗುತ್ತದೆ. ಅನೇಕರು ಅರಣ್ಯ ಇಲಾಖೆಯ ಗಮನಕ್ಕೆ ಬಾರದಂತೆ ಈ ಅಪಾಯಕಾರಿ ತಾಣಕ್ಕೆ ತೆರಳುವ ದುಸ್ಸಾಹಸ ಮಾಡುತ್ತಾರೆ. ಹೆಜ್ಜೆàನು ಗಳಿಂದ ಇಲ್ಲಿ ಅಪಾಯ ಸಂಭವಿಸಿದ ಉದಾ ಹರಣೆ ಗಳೂ ಇವೆ. ಕೆಲವು ದಿನ ಗಳಲ್ಲಿ ಇಲ್ಲಿನ ಸಿಬಂದಿ ಖಾಲಿ ಪುಸ್ತಕ ವೊಂದರಲ್ಲಿ ವಿಳಾಸ ಬರೆಸಿ ಕೊಂಡು ಹಣ ಸಂಗ್ರಹಿಸು ತ್ತಾರೆ; ರಶೀದಿ ನೀಡು ತ್ತಿಲ್ಲ ಎಂಬ ಆರೋಪವೂ ಚಾರಣಿಗರಿಂದ ಕೇಳಿಬರುತ್ತಿದೆ.
ಶಿಕ್ಷಾರ್ಹ ಅಪರಾಧ!
ರಾಷ್ಟ್ರೀಯ ಸ್ಮಾರಕ ಎಂಬುದಾಗಿ ಕೋಟೆಯಲ್ಲಿ ಪ್ರಾಚ್ಯವಸ್ತು ಇಲಾಖೆ ಫಲಕವೊಂದನ್ನು ಅಳವಡಿ ಸಿದ್ದು, ಇದರನ್ವಯ ಸ್ಮಾರಕಕ್ಕೆ ಹಾನಿ ಎಸಗುವುದು ಶಿಕ್ಷಾರ್ಹ ಅಪರಾಧ. ಆದರೆ ಈ ವರೆಗೆ ಯಾರನ್ನೂ ಶಿಕ್ಷಿಸಿದ ಉದಾಹರಣೆಯಿಲ್ಲ.
ಸ್ವಚ್ಛತಾ ಆಂದೋಲನ
ನವೆಂಬರ್ ತಿಂಗಳಲ್ಲಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ವತಿಯಿಂದ ಇಲ್ಲಿ ಸ್ವತ್ಛತಾ ಆಂದೋ ಲನ ನಡೆಸಲಾಗಿದೆ. ಚಾರಣಿಗರು ಬಾಟಲಿ, ಪ್ಲಾಸ್ಟಿಕ್, ತ್ಯಾಜ್ಯ ಎಸೆಯುತ್ತಿದ್ದು ಎಷ್ಟೇ ಜಾಗೃತಿ ಮೂಡಿಸಿದರೂ ನಿಯಂತ್ರಣ ಸಾಧ್ಯ ವಾಗು ತ್ತಿಲ್ಲ. ಆದ್ದರಿಂದ ನಾವೇ ಆಗಾಗ ಸ್ವತ್ಛತಾ ಆಂದೋ ಲನ ನಡೆಸುತ್ತಿದ್ದೇವೆ. ಸಂಗ್ರಹಿಸಿದ ತ್ಯಾಜ್ಯದ ದೊಡ್ಡ ರಾಶಿಯೇ ಇಲ್ಲಿನ ಪ್ರವೇಶದ್ವಾರದ ಬಳಿ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬಂದಿ.
ಕೋಟೆ ಇಲ್ಲಿದೆ
ಬೆಳ್ತಂಗಡಿಯಿಂದ ಲಾೖಲ – ಕಿಲ್ಲೂರು ರಸ್ತೆ ಯಲ್ಲಿ 5 ಕಿ.ಮೀ. ಸಾಗಿದರೆ ಗಡಾಯಿಕಲ್ಲು ರಸ್ತೆ ಸಿಗುತ್ತದೆ. ಇಲ್ಲಿಂದ 3 ಕಿ.ಮೀ. ಸಾಗಿದರೆ ಚಾರಣ ತಾಣ ಆರಂಭ. ಅಕ್ಟೋಬರ್ನಿಂದ ಫೆಬ್ರವರಿ ಸೂಕ್ತ ಸಮಯ. ಮುಂಜಾನೆ ಅಥವಾ ಸಂಜೆ ಉತ್ತಮ. ರಾತ್ರಿ ವಾಸ್ತವ್ಯ ಹೂಡುವಂತಿಲ್ಲ. ನೀರು, ಆಹಾರ ಕೊಂಡೊಯ್ಯಬೇಕು. ಕಲ್ಲೇರುವ ಎದೆಗಾರಿಕೆ ಇದ್ದವರಿಗಷ್ಟೇ ಚಾರಣ ಸಾಧ್ಯ. ಎತ್ತರದ ಗಡಾಯಿಕಲ್ಲು ಏರಿದರೆ ಕಾಣುವ ನೋಟ ವಿಹಂಗಮ.
ಇಲಾಖೆ ಗಮನ ಹರಿಸಲಿ
ಫಿರಂಗಿ, ಕೋಟೆಗೆ ಹಾನಿಯಾಗುತ್ತಿದ್ದು ಕುಸಿಯುವ ಆತಂಕದಲ್ಲಿದೆ. ಕೆರೆ ನೀರು ಕಲುಷಿತ ವಾಗುತ್ತಿದೆ. ಆದರೂ ಇಲಾಖೆಗಳು ಗಮನ ಹರಿಸಿಲ್ಲ. 225 ವರ್ಷಗಳ ಹಿಂದೆ ನಿರ್ಮಿಸಿದ ಕೋಟೆಯನ್ನು ರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಹೇಳಹೆಸರಿಲ್ಲದಂತಾದೀತು. ಕುಸಿತ ಈಗಲೇ ಪ್ರಾರಂಭವಾಗಿದ್ದು, ಗೋಡೆಯಲ್ಲಿ ಭಾರೀ ಗಾತ್ರದ ಬಿರುಕು, ರಂಧ್ರಗಳಿವೆ. ಗೋಡೆಯ ಕಲ್ಲುಗಳನ್ನು ಪ್ರವಾಸಿಗರು ಕೀಳುತ್ತಿದ್ದಾರೆ. ಪ್ರಾಚ್ಯವಸ್ತು ಇಲಾಖೆ ಇಲ್ಲಿ ಯಾವುದೇ ಸೌಕರ್ಯ ಕಲ್ಪಿಸಿಲ್ಲ. ಅರಣ್ಯ ಇಲಾಖೆ ಶುಲ್ಕ ಸಂಗ್ರಹಿಸುತ್ತದೆ ಆದರೆ ಮೂಲ ಸೌಕರ್ಯದ ಕಡೆಗೆ ಗಮನ ಕೊಟ್ಟಿಲ್ಲ.
ವಿಕೃತ ಚಾರಣಿಗರು
ಈಚೆಗೆ ಎರಡು ವರ್ಷಗಳಿಂದ ವಿಕೃತ ಮನಸ್ಸಿನ ಚಾರಣಿಗರು ಬರುತ್ತಿದ್ದಾರೆ. ಪ್ರಕೃತಿ ಪ್ರೀತಿ ಯಿಂದ ಆರಾಧಿಸುವವರ ಬದಲು ಮೋಜು ಮಸ್ತಿಗಾಗಿ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇದು ಕಳವಳಕಾರಿ. ಇಂಥವ ರಿಂದಲೇ ಪ್ರಕೃತಿ ನಾಶ, ಸ್ಮಾರಕ ನಾಶ, ಕಾಡ್ಗಿಚ್ಚು ಮೊದಲಾದ ಅನಾಹುತ ಸಂಭವಿಸುವುದು.
ದಿನೇಶ್ ಹೊಳ್ಳ , ಚಾರಣಿಗ
ರಕ್ಷಿಸಬೇಕು
ಇತಿಹಾಸದ ದೃಷ್ಟಿಯಿಂದ ರಕ್ಷಿಸ ಬೇಕಾದ ಸ್ಮಾರಕ. ಬಂಗಾಡಿ ಅರಸರು ಕಟ್ಟಿದ ಈ ಕೋಟೆಯನ್ನು ಟಿಪ್ಪು ವಶಕ್ಕೆ ತೆಗೆದು ಕೊಂಡದ್ದು ಮಾತ್ರವಲ್ಲದೆ ಒಂದಷ್ಟು ಹೊಸ ನಿರ್ಮಾಣಗಳನ್ನು ಇಲ್ಲಿ ನಡೆಸಿದ್ದಾನೆ.
ಡಾ| ವೈ. ಉಮಾನಾಥ ಶೆಣೈ,ಇತಿಹಾಸಜ್ಞರು
ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ