ದೇರಳಕಟ್ಟೆ: ಯುವತಿ ಕೊಲೆಯತ್ನ ಆರೋಪಿ ನ್ಯಾಯಾಲಯಕ್ಕೆ ಹಾಜರು
Team Udayavani, Jul 5, 2019, 9:37 AM IST
ಸಾಂದರ್ಭಿಕ ಚಿತ್ರ
ಉಳ್ಳಾಲ: ಬಗಂಬಿಲದಲ್ಲಿ ವಿದ್ಯಾರ್ಥಿನಿಗೆ ಇರಿದು ಕೊಲೆಗೆತ್ನಿಸಿದ ಪ್ರಕರಣ ಆರೋಪಿ ಶಕ್ತಿನಗರದ ಸುಶಾಂತ್ (27) ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಆತನನ್ನು ಉಳ್ಳಾಲ ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಘಟನೆ ನಡೆದಂದಿನಿಂದ ಆತನಿಗೆ ಮಾನಸಿಕ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರವೇ ಡಿಸಾcರ್ಜ್ ಪ್ರಕ್ರಿಯೆ ಮುಗಿದಿತ್ತಾದರೂ, ರಾತ್ರಿಯಾಗಿದ್ದರಿಂದ ಗುರುವಾರಕ್ಕೆ ಮುಂದೂಡಲಾಗಿತ್ತು. ಸುಶಾಂತ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ (307) ಹಾಗೂ ಆತ್ಮಹತ್ಯೆ ಯತ್ನ (309) ಕಾಯಿದೆಗಳಡಿ ಪ್ರಕರ ದಾಖಲಾಗಿದೆ.
ದೀಕ್ಷಾ ಚೇತರಿಕೆ
ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾಳ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡು ಬಂದಿದೆ. ಐದು ದಿನಗಳ ನಿರಂತರ ಚಿಕಿತ್ಸೆ ಮತ್ತು ಆರೈಕೆಯಿಂದ ಚೇತರಿಸಿಕೊಂಡಿರುವ ಆಕೆಗೆ ಅಳವಡಿಸಿದ್ದ ವೆಂಟಿಲೇಟರ್ ಅನ್ನು ತೆಗೆಯಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಎಡಕೈಯ ಪ್ಲಾಸ್ಟಿಕ್ ಸರ್ಜರಿ ಬಾಕಿ ಉಳಿದಿದೆ. ಆಕೆ ಸಂಬಂಧಿಕರಲ್ಲಿ ಮಾತನಾಡಿದ್ದು, ಸ್ವಲ್ಪ ನೀರು ಸೇವಿಸಿದ್ದಾಳೆ ಎನ್ನಲಾಗಿದೆ.