ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ
Team Udayavani, Aug 8, 2017, 6:25 AM IST
ಬೆಳ್ತಂಗಡಿ: ಉಜಿರೆಯ ಆದರ್ಶ ಸೇವಾ ಸಮಿತಿ ವತಿಯಿಂದ 18ನೇ ವರ್ಷಾಚರಣೆ ಪ್ರಯುಕ್ತ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ 1. 25 ಲ. ರೂ. ಪ್ರೋತ್ಸಾಹಧನವನ್ನು ಉಜಿರೆ ಶಾರದಾ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಉಜಿರೆ ಶ್ರೀ. ಧ. ಮಂ. ಕಾಲೇಜಿನ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ| ಶ್ರೀಧರ್ ಭಟ್ ಮಾತನಾಡಿ ಶೈಕ್ಷಣಿಕ ಅವಧಿಯಲ್ಲಿ ಪಡೆಯುವ ಅಂಕಗಳು, ಮುಂದಿನ ಕಲಿಕೆಗೆ ಪೂರಕವೇ ಹೊರತು, ಅದುವೇ ಜೀವನವಲ್ಲ. ಶಿಕ್ಷಣದ ಜತೆಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತೀಯ ಜೀವ ವಿಮಾ ನಿಗಮದ ನಿವೃತ್ತ ಅಭಿವೃದ್ಧಿ ಅಧಿಕಾರಿ ಎಂ. ಜಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶೋಭಿತ್ಗೆ ಸಮ್ಮಾನ
ಈ ಸಂದರ್ಭದಲ್ಲಿ ಭಾರತೀಯ ಭೂಸೇನೆಯಲ್ಲಿ ಲೆಫ್ಟಿನೆಂಟ್ ಆಫೀಸರ್ ಆಗಿ ಆಯ್ಕೆಗೊಂಡ ಉಜಿರೆ ಕುಂಠಿನಿಯ ಶೋಭಿತ್ ಜೆ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಎಸೆಸೆಲ್ಸಿಯಲ್ಲಿ ತಾಲೂಕಿಗೆ ಅಧಿಕ ಅಂಕ ಗಳಿಸಿದ ಉಜಿರೆ ಅನುಗ್ರಹ ಆ. ಮಾ. ಶಾಲೆಯ ಜೋಯಲ್ ಆ್ಯಂಟನಿ ಅವರನ್ನು ಅಭಿನಂದಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ರಮೇಶ್ ಭಟ್ ಅತ್ತಾಜೆ, ಕಾರ್ಯದರ್ಶಿ ಜಯಂತ ಶೆಟ್ಟಿ ಕುಂಠಿನಿ, ಜತೆ ಕಾರ್ಯದರ್ಶಿ ಯು. ಚಂದ್ರಶೇಖರ, ಕೋಶಾಧಿಕಾರಿ ಬಿ. ರಾಮದಾಸ ಭಂಡಾರ್ಕಾರ್, ನಿರ್ದೇಶಕರಾದ ಶಿವಕಾಂತ ಗೌಡ, ಎಂ. ಶ್ರೀಧರ ಗೌಡ ಮರಕಡ, ಬಿ. ರಾಧಾಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಯು. ರಮೇಶ್ ಪ್ರಭು ಸ್ವಾಗತಿಸಿದರು. ಸಂಜೀವ ಕುಂಠಿನಿ ಕಾರ್ಯಕ್ರಮ ನಿರ್ವಹಿಸಿದರು. ಕೆ. ರಾಜೇಂದ್ರ ಕಾಮತ್ ವಂದಿಸಿದರು.