ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸದಿರಿ: ಬಾವಾ
Team Udayavani, Mar 16, 2018, 3:00 PM IST
ಸುರತ್ಕಲ್ : ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಉತ್ತುಂಗ ಕ್ಕೇರಿಸಿ ಮತದಾರರ ಬೇಡಿಕೆ ಈಡೇರಿ ಸಲು ಕಟಿಬದ್ಧನಾಗಿದ್ದೇನೆ. 162 ಕೋ.ರೂ. ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ಆಗುತ್ತದೆ, ಈ ಬಗ್ಗೆ ಸಂಶಯ ಬೇಡ. ವ್ಯಾಪಾರಿಗಳಿಗೆ ಎಲ್ಲ ಸಹಕಾರ ನೀಡಿದ್ದೇನೆ. ಆದರೆ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸದಿರಿ ಎಂದು ತಮ್ಮ ವಿರೋಧಿಗಳಿಗೆ ಶಾಸಕ ಮೊದಿನ್ ಬಾವಾ ಪರೋಕ್ಷ ಎಚ್ಚರಿಕೆ ನೀಡಿದರು. ಸುರತ್ಕಲ್ನಲ್ಲಿ ಗುರುವಾರ ಬೃಹತ್ ಮಾರುಕಟ್ಟೆ ಸಂಕೀರ್ಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಈ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಯು. ಶ್ರೀನಿವಾಸ ಮಲ್ಯ ಅವರ ಅಭಿವೃದ್ಧಿ ಮಾದರಿಗಳನ್ನು ಮುಂದಿಟ್ಟುಕೊಂಡು ದೂರದೃಷ್ಟಿಯುಳ್ಳ ಅಭಿವೃದ್ಧಿ ಯತ್ತ ಹೆಜ್ಜೆ ಇರಿಸಿದ್ದೇನೆ. ಬೃಹತ್ ಕಂಪೆನಿಗಳಿರುವ ಈ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ವಾಹನಗಳ ದಟ್ಟಣೆ, ಜನದಟ್ಟಣೆ ಏರುವ ಸಾಧ್ಯತೆಗಳು ನಿಚ್ಚಳ ವಾಗಿವೆ. ಈ ನಿಟ್ಟಿನಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣ, ಬ್ಯಾಂಕುಗಳ ಏಕಕಿಂಡಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾದರಿಯಾಗಿ ರೂಪಿಸುವ ಆಶಯದಿಂದ ಮಾರುಕಟ್ಟೆ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಇದರಲ್ಲಿ ಲಂಚ ಪಡೆದಿ ದ್ದಾರೆ ಎಂಬ ಆರೋಪ ಗಳಿದ್ದು, ಆರೋಪ ಸಾಬೀತಾದರೆ ರಾಜೀನಾಮೆ ನೀಡಲೂ ಹಿಂಜರಿಯಲಾರೆ. ಮಾದರಿ ಕ್ಷೇತ್ರ ರೂಪಿಸಲು ಹಲವು ಅಡ್ಡಿ ಆತಂಕ ಸಹಜ. ಮತ ದಾರರು ಅಭಿವೃದ್ಧಿ ಬಯಸಿ ದ್ದಾರೆ. ಇದನ್ನು ಈಡೇರಿ ಸಲು ಕಳೆದ ನಾಲ್ಕೂ ಮುಕ್ಕಾಲು ವರ್ಷಗಳಲ್ಲಿ ಗರಿಷ್ಠ ಪ್ರಯತ್ನ ಪಟ್ಟಿದ್ದೇನೆ. ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿ ಗರಿಷ್ಠ ಅನುದಾನ ತಂದಿದ್ದೇನೆ ಎಂದರು.
ಮೇಯರ್ ಭಾಸ್ಕರ್ ಕೆ., ಉಪಮೇಯರ್ ಮೊಹಮ್ಮದ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಪೊರೇಟರ್ಗಳಾದ ಪ್ರತಿಭಾ ಕುಳಾ, ಅಶೋಕ್ ಶೆಟ್ಟಿ, ಬಶೀರ್ ಅಹ್ಮದ್, ಅಯಾಝ್ ಕೃಷ್ಣಾಪುರ, ಕುಮಾರ್ ಮೆಂಡನ್, ಗುರುರಾಜ್ ಆಚಾರ್ಯ, ಧರ್ಮಗುರುಗಳಾದ ಪೌಲ್ ಪಿಂಟೋ, ಕೆಡಿಪಿ ಸದಸ್ಯ ಗೋವರ್ಧನ್ ಶೆಟ್ಟಿಗಾರ್, ಆಯುಕ್ತ ನಝೀರ್, ಲೋಕೋಪಯೋಗಿ ಇಲಾಖೆ ಅಧಿ ಕಾರಿ ಕಾಂತರಾಜು, ನಗರಾಭಿವೃದ್ಧಿ ಇಲಾಖೆಯ ರಂಗನಾಥ್, ವಲಯ ಆಯುಕ್ತ ರವಿಶಂಕರ್, ಎಂಜಿನಿಯರ್ಗಳಾದ ಕೃಷ್ಣಮೂರ್ತಿ ರೆಡ್ಡಿ, ಖಾದರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಮೊದಿನ್ ಬಾವಾ ಅವರ ಹುಟ್ಟುಹಬ್ಬದ ಪ್ರಯುಕ್ತ ಶುಭಾಶಯ ಕೋರಿ ಕಾರ್ಯಕರ್ತರು ಕೇಕ್ ಕತ್ತರಿಸಿ ಸಂಭ್ರಮಿಸಿದರು.
ವಿವಿಧ ಕಾಮಗಾರಿಗಳಿಗೆ ಚಾಲನೆ
ಈಗ 2.75 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ, ಗುಡ್ಡೆಕೊಪ್ಲ ರಸ್ತೆಗೆ 1.13 ಕೋ.ರೂ. ವೆಚ್ಚದಲ್ಲಿ ಶಿಲಾನ್ಯಾಸ, 40 ಲಕ್ಷ ರೂ. ವೆಚ್ಚದ ಒಳರಸ್ತೆ, 8 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಬೀದಿದೀಪ ಉದ್ಘಾಟನೆ ನಡೆಸಲಾಗಿದೆ. ಪ್ರಥಮ ಹಂತದಲ್ಲಿ 62 ಕೋ.ರೂ. ವೆಚ್ಚದಲ್ಲಿ ಮಾರುಕಟ್ಟೆ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಬೈಲಾರೆ ತೋಡು ನಿರ್ಮಾಣಕ್ಕೆ 2 ಕೋ. ರೂ., ಕಟ್ಲ ಚರಂಡಿ ನಿರ್ಮಾಣಕ್ಕೆ 2 ಕೋ. ರೂ., ಸುರತ್ಕಲ್ ವಲಯ ಕಚೇರಿಗೆ 2.25 ಕೋ.ರೂ., ಮೀನಕಳಿಯ ಕಡಲ್ಕೊರೆತ ತಡೆಗೆ 4.70 ಕೋ.ರೂ. ಮತ್ತಿತರ ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಹಂತದಲ್ಲಿವೆ ಎಂದು ಶಾಸಕ ಮೊದಿನ್ ಬಾವಾ ಹೇಳಿದರು.