ಫಾ| ಮಾಡ್ತ ಅವರಿಗೆ “ಕೊಂಕಣಿ ಕುಟಮ್ ಸಾಹಿತ್ಯ ಪ್ರಶಸ್ತಿ’
Team Udayavani, Jul 6, 2018, 9:46 AM IST
ಮಂಗಳೂರು: ಕೊಂಕಣಿ ಕುಟಮ್ ಬಹ್ರೈನ್ ನೀಡುವ 2018ನೇ ಸಾಲಿನ “ಕೊಂಕಣಿ ಕುಟಮ್ ಬಹ್ರೈನ್ ಪ್ರಶಸ್ತಿ’ಗೆ ನಿಘಂಟು ರಚನಾಕಾರ, ಶಿಕ್ಷಣ ತಜ್ಞ ಫಾ| ಪ್ರಶಾಂತ್ ಮಾಡ್ತ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಚಾಲಕ ರಿಚರ್ಡ್ ಮೊರಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜು. 28ರಂದು ಸಂಜೆ 6.30ಕ್ಕೆ ಬೆಂದೂರ್ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸಾಹಿತಿ ಜಯಂತ ಕಾಯ್ಕಿಣಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೊಂಕಣಿ ಕವಿ ಮೆಲ್ವಿನ್ ರೋಡ್ರಿಗಸ್ ಅತಿಥಿಗಳಾಗಿ ಭಾಗವಹಿಸುವರು. ಪ್ರಶಸ್ತಿ 50,000 ರೂ. ನಗದು ಒಳಗೊಂಡಿದೆ ಎಂದರು.
ಮೂಲತಃ ಸುಳ್ಯದವರಾದ ಪ್ರಶಾಂತ್ ಮಾಡ್ತ ಯೇಸು ಸಭೆಯ ಧರ್ಮಗುರುವಾಗಿದ್ದಾರೆ. ಕನ್ನಡ ಪ್ರಾಧ್ಯಾಪಕ, ಸಂತ ಅಲೋಶಿಯಸ್ ಕಾಲೇಜಿನ ಮಾಜಿ ಪ್ರಾಂಶುಪಾಲರು. ಪ್ರಸ್ತುತ ಬೆಂಗಳೂರಿನ ಸೈಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್ ಆಡಳಿತಾಧಿಕಾರಿಯಾಗಿದ್ದಾರೆ. ಕೊಂಕಣಿ ಪಿಕೊಳಿಂ (ಹತ್ತು ಸಾವಿರ ಪಡೆನುಡಿಗಳ ಕೋಶ), ಪದನಿ (ಕನ್ನಡದ ಸಮಾನಾರ್ಥಕ, ವಿರುದ್ಧಾರ್ಥಕ ಥೆಸಾರಸ್) ಹಾಗೂ ಕೊಂಕಣಿ ಥೆಸಾರ್ (ಸಮಾನಾರ್ಥಕ ಪದಕೋಶ) ಪ್ರಕಟಿಸಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟಕ ಟೈಟಸ್ ನೊರೋನ್ಹಾ, ಕಾರ್ಯಕಾರಿ ಸಮಿತಿ ಸದಸ್ಯರಾದ ಸ್ಟಾನಿ ಲೋಬೋ, ಸಿರಿಲ್ ಜಿ. ಸಿಕ್ವೇರ, ವಿಕ್ಟರ್ ಮಥಾಯಸ್ ಉಪಸ್ಥಿತರಿದ್ದರು.