ಸುಬ್ರಹ್ಮಣ್ಯ: ರೈಲಿನಿಂದ ಗ್ಯಾಸ್ ಸೋರಿಕೆ… ಸಮಯಪ್ರಜ್ಞೆಯಿಂದ ತಪ್ಪಿದ ದುರಂತ
Team Udayavani, Jan 1, 2023, 1:18 AM IST
ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿನಲ್ಲಿ ಅನಿಲ ಸೋರಿಕೆ ಕಾಣಿಸಿಕೊಂಡಿದ್ದು ಲೋಕೊಪೈಲಟ್ನ ಸಮಯ ಪ್ರಜ್ಞೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಶನಿವಾರ ನಸುಕಿನ ಜಾವ ಸಂಭವಿಸಿದೆ.
ಸುಳ್ಯ, ಬೆಳ್ತಂಗಡಿ, ಮಂಗಳೂರು, ಪುತ್ತೂರು, ಅಗ್ನಿಶಾಮಕ ದಳದ ಯಂತ್ರಗಳು ಹಾಗೂ ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಅನಿಲ ಸೋರಿಕೆಯನ್ನು ತಡೆಯುವ ಕಾರ್ಯಚರಣೆ ನಡೆಸಲಾಯಿತು. ಮಂಗಳೂರಿನಿಂದ ಮಹಾರಾಷ್ಟ್ರಕ್ಕೆ ಅನಿಲ ತುಂಬಿಕೊಂಡು ಹೋಗುತ್ತಿದ್ದ ಗೂಡ್ಸ್ ರೈಲು ಸುಬ್ರಹ್ಮಣ್ಯ ರೋಡ್ ರೈಲ್ವೇ ನಿಲ್ದಾಣದಲ್ಲಿ ರಾತ್ರಿ ಗಂಟೆ 2.30ರ ಸುಮಾರಿಗೆ ಕ್ರಾಸಿಂಗ್ಗಾಗಿ ನಿಲ್ಲಿಸಲಾಗಿತ್ತು. ಈ ಸಮಯದಲ್ಲಿ ಲೋಕೊಪೈಲೆಟ್ ಕೆಳಗಿಳಿದಾಗ ಸುಮಾರು 43 ಗೂಡ್ಸ್ ಪ್ಯಾನೆಲ್ಗಳ ಪೈಕಿ ನಾಲ್ಕನೇ ಟ್ಯಾಂಕ್ನಿಂದ ಅನಿಲ ಸೋರಿಕೆಯಾಗುತ್ತಿರುವುದು ಗಮನಕ್ಕೆ ಬಂತು. ತತ್ಕ್ಷಣವೇ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ರೈಲ್ವೇ ನಿಲ್ದಾಣದಿಂದ ಪುತ್ತೂರು ಅಗ್ನಿಶಾಮಕ ದಳಕ್ಕೆ ಬಂದ ಕರೆಯಂತೆ ರಾತ್ರೋ ರಾತ್ರಿ ನೆಟ್ಟಣಕ್ಕೆ ತೆರಳಿ ಕಾರ್ಯಾಚರಣೆ ನಡೆಸಲಾಯಿತು. ಹೆಚ್ಚಿನ ಅನಾಹುತ ತಪ್ಪಿಸುವ ಸಲುವಾಗಿ ಸುಳ್ಯ, ಬೆಳ್ತಂಗಡಿ ಹಾಗೂ ಮಂಗಳೂರಿನಿಂದಲೂ ಅಗ್ನಿಶಾಮಕ ವಾಹನಗಳನ್ನು ತರಿಸಲಾಯಿತು.
ಮಂಗಳೂರು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಭರತ್ ಅವರ ನೇತೃತ್ವದಲ್ಲಿ ಪುತ್ತೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಪಿ. ಆನಂದ್, ಮುಖ್ಯ ಅಗ್ನಿಶಾಮಕ ರುಕ್ಮಯ್ಯ ಗೌಡ, ಚಾಲಕ ಯಾದವ್, ಸಿಬಂದಿ ಮಂಜುನಾಥ್, ಗೃಹ ರಕ್ಷಕ ದಳದ ಮಂಜುನಾಥ್ ಸಹಿತ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.