ಗೋರಿಗುಡ್ಡೆ: 8 ತಿಂಗಳುಗಳಿಂದ ಹೆದ್ದಾರಿ ಸಂಪರ್ಕ ಕಡಿತ
Team Udayavani, Aug 13, 2021, 3:40 AM IST
ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್-ಎಕ್ಕೂರು ನಡುವಿನ ಗೋರಿಗುಡ್ಡೆ ಎಂಬಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಅಗೆದು ಹಾಕಲಾಗಿದ್ದು ಇದರಿಂದಾಗಿ ಸ್ಥಳೀಯ ಮನೆಗಳು ಹೆದ್ದಾರಿಯಿಂದ ಸಂಪರ್ಕ ಕಳೆದುಕೊಂಡಿವೆ.
ಎಂಟು ತಿಂಗಳುಗಳ ಹಿಂದೆ ಇಲ್ಲಿ ಉದ್ದಕ್ಕೆ ಅಗೆಯಲಾಗಿತ್ತು. ಆದರೆ ಇದುವರೆಗೂ ಕಾಮಗಾರಿ ನಡೆಸಿಲ್ಲ. ಇದರಿಂದಾಗಿ ಅಕ್ಕಪಕ್ಕದ ಮನೆಗಳು ರಸ್ತೆ ಸಂಪರ್ಕ ಕಳೆದುಕೊಂಡಿವೆ. ಹೆದ್ದಾರಿ ಪಕ್ಕದಲ್ಲೇ ಮನೆ ಇದ್ದರೂ ವಾಹನ ಹೋಗಲು ದಾರಿಯಿಲ್ಲದೆ ಅನಾರೋಗ್ಯಪೀಡಿತರು, ವೃದ್ಧರನ್ನು ಎತ್ತಿಕೊಂಡೇ ಹೋಗಬೇಕಾದ ಸ್ಥಿತಿ ಇದೆ.
ಡಾಮರು ರಸ್ತೆ ಕಟ್ :
ಹೆದ್ದಾರಿ ಪಕ್ಕದಲ್ಲಿ ಉದ್ದಕ್ಕೆ ಅಗೆಯುವಾಗ ಗೋರಿಗುಡ್ಡೆ- ಸೂಟರ್ಪೇಟೆ ನಡುವಿನ ಸಂಪರ್ಕ ರಸ್ತೆಯನ್ನು(ನೆಹರೂ ರೋಡ್) ಕೂಡ ತುಂಡರಿಸಲಾಗಿದೆ. ಈ ರಸ್ತೆಯಲ್ಲಿ ಸೂಟರ್ಪೇಟೆ ಕಡೆಯಿಂದ ಹೆದ್ದಾರಿ ಕಡೆಗೆ ವಾಹನಗಳು ಬರದಂತೆ ಮಣ್ಣಿನ ರಾಶಿ ಹಾಕಲಾಗಿದೆ. ಪರಿಣಾಮವಾಗಿ ಈ ಭಾಗದ ಜನ ಸುತ್ತು ಬಳಸಿ ರಾಷ್ಟ್ರೀಯ ಹೆದ್ದಾರಿ ಭಾಗಕ್ಕೆ, ನಗರದ ಕಡೆಗೆ ಹೋಗಿಬರುವಂತಾಗಿದೆ.
ಅಪಘಾತ ಹೆಚ್ಚಳ :
ಹೆದ್ದಾರಿಯ ಅಂಚಿನಲ್ಲೇ ಉದ್ದಕ್ಕೆ ಅಗೆದು ಹಾಕಿರುವುದರಿಂದ ಉಂಟಾಗಿರುವ ಹೊಂಡದಿಂದಾಗಿ ಇಲ್ಲಿ ಅಪಘಾತಗಳು ಕೂಡ ಅಧಿಕವಾಗಿವೆ. ಎಕ್ಕೂರು ಕಡೆಯಿಂದ ಹೆದ್ದಾರಿಯಲ್ಲಿ ಬರುವ ವಾಹನಗಳು ರಸ್ತೆಯ ಬದಿಯಲ್ಲೇ ಸಂಚರಿಸಿದರೆ ಗುಂಡಿಗೆ ಬೀಳುವ ಅಪಾಯವಿದೆ. ಹಾಗಾಗಿ ವಾಹನಗಳು ನಡು ರಸ್ತೆಯಲ್ಲೇ ಸಂಚರಿಸುತ್ತವೆ.
ಹಿಂದಿನಿಂದ ಬರುವ ವಾಹನಗಳಿಗೆ ಸಂಚರಿಸಲು ಸ್ಥಳಾವಕಾಶ ಸಿಗದೆ ಹಲವು ಬಾರಿ ಅಪಘಾತಗಳು ಕೂಡ ಸಂಭವಿಸಿವೆ ಎನ್ನುತ್ತಾರೆ ಸ್ಥಳೀಯರು.
ಜನರಿಗೆ ಆಗುತ್ತಿರುವ ಅನಾನುಕೂಲದ ಬಗ್ಗೆ ಅರಿವಿದೆ. ಈ ಬಗ್ಗೆ ಹೆದ್ದಾರಿ ಕಾಮಗಾರಿ ಗುತ್ತಿಗೆದಾರರು, ಅಧಿಕಾರಿಗಳ ಗಮನಕ್ಕೆ ಈಗಾಗಲೇ ತಂದಿದ್ದೇನೆ. ಆದರೆ ಅವರು ಸಮರ್ಪಕವಾಗಿ ಸ್ಪಂದಿಸಿಲ್ಲ. ನನ್ನ ಪ್ರಯತ್ನ ಮುಂದುವರೆಸುತ್ತೇನೆ. –ಜೆಸಿಂತಾ ವಿಜಯ ಅಲ್ಫೆ†ಡ್, ಪಾಲಿಕೆ ಸದಸ್ಯೆ, ಫಳ್ನೀರ್ ವಾರ್ಡ್