Panamburu ಭ್ರಷ್ಟಾಚಾರಕ್ಕೆ ದುರಾಸೆ ಕಾರಣ: ಸಂತೋಷ್ ಹೆಗ್ಡೆ
Team Udayavani, Nov 7, 2023, 11:51 PM IST
ಪಣಂಬೂರು: ಅತಿಯಾದ ದುರಾಸೆ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ದೇಶದ ಯುವ ಪೀಳಿಗೆ ಜೀವನದಲ್ಲಿ ಶಿಸ್ತು ಹಾಗೂ ಪ್ರಾಮಾಣಿಕತೆ ಅಳವಡಿಸಿಕೊಂಡು ಭ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ನಾಂದಿ ಹಾಡಬೇಕು ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ನವಮಂಗಳೂರು ಬಂದರು ಪ್ರಾಧಿಕಾರವು ಪಣಂಬೂರಿನಲ್ಲಿ ಆಯೋಜಿಸಿದ್ದ ವಿಚಕ್ಷಣ ಸಪ್ತಾಹದಲ್ಲಿ ಅವರು ಮಾತನಾಡಿದರು. ನಮ್ಮ ಜೀವನ ಪ್ರಾಮಾಣಿಕವಿದ್ದಾಗ ರಾಷ್ಟ್ರದ ಮಕ್ಕಳ ಭವಿಷ್ಯವು ಉತ್ತಮವಾಗುವುದರಲ್ಲಿ ಸಂದೇಹವಿಲ್ಲ ಎಂದರು.
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ| ಸುಭಾಷ್ ಚಂದ್ರ ಖುಂಟಿಯಾ ಅವರು ಮಾತನಾಡಿ, ಸ್ಪಷ್ಟ ನೀತಿ ಹಾಗೂ ಕಾರ್ಯವಿಧಾನಗಳ ಮೂಲಕ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎನ್ಎಂಪಿಎ ಚೇರ್ಮನ್ ಡಾ| ಎ.ವಿ. ರಮಣ ಅವರು ಮಾತನಾಡಿ, ಮಕ್ಕಳಲ್ಲಿ ನೈತಿಕ ಮೌಲ್ಯ ಬೆಳೆಸಿದಾಗ ಮುಂದೆ ದೇಶದ ನಾಗರಿಕರಾಗಿ ಜವಾಬ್ದಾರಿ ಏನು ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎನ್ಎಂಪಿಎ ಭ್ರಷ್ಟಾಚಾರ ಬೇಡ,ದೇಶಕ್ಕೆ ಬದ್ದರಾಗಿರಿ ಎಂಬ ಧ್ಯೇಯ ವಾಕ್ಯದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು. ಎನ್ಎಂಪಿಎ ಉಪಾಧ್ಯಕ್ಷ ಕೆ.ಜಿ ನಾಥ್, ಮುಖ್ಯ ವಿಚಕ್ಷಣ ಅಧಿಕಾರಿ ಪದ್ಮನಾಭಾಚಾರ್ ಮತ್ತಿತರರು ಉಪಸ್ಥಿತರಿದ್ದರು.