ಸೆ. 8: ವಿವೇಚನಾ ರಜೆಗೆ ಜಿಲ್ಲಾಧಿಕಾರಿ ನಿರ್ದೇಶನ
Team Udayavani, Sep 7, 2018, 10:07 AM IST
ಮಂಗಳೂರು: ಕೆಥೋಲಿಕ್ ಕ್ರೈಸ್ತರ ತೆನೆ ಹಬ್ಬದ ಹಿನ್ನೆಲೆಯಲ್ಲಿ ಸೆ. 8ರಂದು ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆ ಮತ್ತು ಶಾಲೆಗಳಿಗೆ ತಮ್ಮ ವಿವೇಚನಾಧಿಕಾರ ಬಳಸಿ ರಜೆಯನ್ನು ನೀಡಬಹುದು ಎಂದು ದ.ಕ. ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಕ್ರೈಸ್ತರ ತೆನೆ ಹಬ್ಬದ ಪ್ರಯುಕ್ತ ಸೆ. 8ರಂದು ಸಾರ್ವತ್ರಿಕ ರಜೆ ಘೋಷಿಸಬೇಕೆಂದು ಕೆಥೋಲಿಕ್ ಸಭಾ ಮನವಿ ಸಲ್ಲಿಸಿದ್ದು, ಅದನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿ ಕೊಡಲಾಗಿದೆ. ಅಲ್ಲದೆ ಸೆ. 8ರಂದು ರಜೆ ನೀಡಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಂದಲೂ ಬೇಡಿಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ವಿವೇಚನಾಧಿಕಾರ ಬಳಸಿ ಶಾಲಾ, ಕಾಲೇಜುಗಳಿಗೆ ರಜೆ ನೀಡಬಹುದೆಂದು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ನಿರ್ದೇಶನ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟನೆ ತಿಳಿಸಿದೆ.
ಸ್ಥಳೀಯ ಹಾಗೂ ಅಗತ್ಯಕ್ಕನುಗುಣವಾಗಿ ವರ್ಷದಲ್ಲಿ ನಾಲ್ಕು ದಿನಗಳ ರಜೆ ನೀಡಲು ವಿವೇಚನಾಧಿಕಾರವಿದ್ದು, ಅದನ್ನು ಬಳಸಿಕೊಂಡು ರಜೆ ನೀಡಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ. ಜಿಲ್ಲೆಯಲ್ಲಿ ಸೆ. 8ರಂದು ಶಾಲಾ ಕಾಲೇಜುಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿಲ್ಲ; ಬದಲಾಗಿ ಸ್ಥಳೀಯ ಹಾಗೂ ಅಗತ್ಯಕ್ಕನುಗುಣವಾಗಿ ತಮ್ಮ ವಿವೇಚನಾ ಧಿಕಾರ ಬಳಸಿಕೊಂಡು ಅಂದು ರಜೆ ನೀಡಬಹುದು ಎಂದು ಡಿಡಿಪಿಐ ಶಿವರಾಮಯ್ಯ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.
ಉಡುಪಿ: ಜಿಲ್ಲೆಯಲ್ಲಿ ವಿವೇಚನಾಧಿಕಾರದಂತೆ ರಜೆ ನೀಡಲು ಶಾಲೆಗಳಿಗೆ ಅಧಿಕಾರವಿದೆ ಎಂದು ಉಡುಪಿ ಡಿಡಿಪಿಐ ತಿಳಿಸಿದ್ದಾರೆ.