“ಅವಸರವೇ ಅಪಘಾತಕ್ಕೆ ಕಾರಣ’
Team Udayavani, Aug 10, 2017, 8:40 AM IST
ಸುರತ್ಕಲ್: ಸರಾಸರಿ ಶೇ. 80ರಷ್ಟು ಅಪಘಾತಗಳು ಅವಸರದಿಂದಲೇ ಆಗುತ್ತಿವೆ ಎಂದು ಮಂಗಳೂರು ಉತ್ತರ ಸಂಚಾರಿ ಠಾಣಾ ಇನ್ಸ್ಪೆಕ್ಟರ್ ಮಂಜುನಾಥ್ ಹೇಳಿದರು.
ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣ ಗುರು ವಿದ್ಯಾ ಸಂಸ್ಥೆಯಲ್ಲಿ ಲಯನ್ಸ್ ಕ್ಲಬ್ ಕಾಟಿಪಳ್ಳ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ಸಾರಿಗೆ ನಿಯಮ ಪಾಲನೆ ಕುರಿತ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ಯುವ ಸಮೂಹ ಅತಿ ವೇಗದ ಚಾಲನೆ, ಮೊಬೈಲ್ ಬಳಕೆ ಮತ್ತಿತರ ವಿವೇಚನಾ ರಹಿತ ಚಾಲನೆಯಿಂದ ಹೊರಬಂದು ಸುರಕ್ಷಿತ ಚಾಲನೆಗೆ ಆದ್ಯತೆ ನೀಡ ಬೇಕು. ಪ್ರತಿಯೊಬ್ಬರ ಪ್ರಾಣವೂ ಅಮೂಲ್ಯವಾಗಿದ್ದು, ನಮ್ಮ ಸುರಕ್ಷತೆಯಲ್ಲಿ ನಾವಿರುವ ಮೂಲಕ ಎಚ್ಚರದಿಂದ ಸಂಚಾರ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಸುಮಾರು 350ಕ್ಕಿಂತಲೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಶಾಲಾ ಮುಖ್ಯ ನಿರ್ದೇಶಕ ಸಾಧು ಪೂಜಾರಿ, ಸಂಚಾಲಕ ಅರುಣ್ ಕುಮಾರ್, ಪ್ರಾಂಶುಪಾಲ ಉಮೇಶ್, ಮುಖ್ಯೋಪಾಧ್ಯಾಯಿನಿ ತಾರಾ, ಜ್ಯೋತಿ, ಲಯನ್ಸ್ ಸದಸ್ಯರಾದ ಪದ್ಮನಾಭ ಎಲ್.ಶೆಟ್ಟಿ, ಉರ್ಬನ್ ಡಿ’ ಸೋಜಾ, ರಾಜರಾಮ್ ಸಾಲ್ಯಾನ್, ಶಿವಪ್ರಸಾದ್, ಸೀತರಾಮ ರೈ ಮತ್ತಿತರರು ಉಪಸ್ಥಿತರಿದ್ದರು. ಕಾಟಿಪಳ್ಳ ಲಯನ್ಸ್ ಕ್ಲಬ್ ಅಧ್ಯಕ್ಷ ಜಿ. ದಯಾನಂದ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿ ಮಾಧವ ಶೆಟ್ಟಿ ವಂದಿಸಿದರು.