ಹಲವು ಪ್ರಕರಣಗಳ ಆರೋಪಿ ಕೊಲೆಗೆ ಯತ್ನ, ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
Team Udayavani, Jun 6, 2022, 8:41 PM IST
ಸುರತ್ಕಲ್: ಕೊಲೆ ಯತ್ನ ಸಹಿತ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಕುಳಾಯಿಯ ಯುವಕ ನೊಬ್ಬನನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ಬೈಕಂಪಾಡಿಯ ಮೀನಕಳಿಯ ರಸ್ತೆಯಲ್ಲಿ ನಡೆದಿದೆ.
ರಾಜಾ ಯಾನೆ ರಾಘವೇಂದ್ರ ಬಂಗೇರ (28) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಕಿನಲ್ಲಿ ಬಂದಿದ್ದರು
ಸೋಮವಾರ ರಾತ್ರಿ 7.30ರ ಸುಮಾರಿಗೆ ಬೈಕಂಪಾಡಿ ಸುಪ್ರಿಯಾ ಬಾರ್ ಬಳಿಯಿಂದ ಮೀನಕಳಿಯ ರಸ್ತೆಯಾಗಿ ಹೋಗುತ್ತಿದ್ದಾಗ ರಾಘವೇಂದ್ರ ಅವರ ಪರಿಚಯಸ್ಥರೇ ದ್ವಿಚಕ್ರ ವಾಹನದಲ್ಲಿ ಬಂದು ಅಡ್ಡಗಟ್ಟಿ ತಲವಾರು ಮತ್ತು ಚಾಕುವಿನಿಂದ ಮುಖ, ತಲೆ, ಕೈಗೆ ಹೊಡೆದಿದ್ದು ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಬಿದ್ದಿದ್ದಾರೆೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಸ್ನೇಹಿತರೇ ಕೊಲೆಯತ್ನ ನಡೆಸಿದ ಬಗ್ಗೆ ಗಾಯಾಳು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವನ ಮೇಲೆ ಪಣಂಬೂರು ಠಾಣೆಯಲ್ಲಿ ಈ ಹಿಂದೆ ರೌಡಿಶೀಟ್ ತೆರೆಯಲಾಗಿದ್ದು, ಕೊಲೆ ಯತ್ನ, ಕೊಲೆ ಆರೋಪವಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.