ಮುಂಡಾಜೆ ಗ್ರಾಮವನ್ನೇ ಮಾದರಿಯಾಗಿಸಲು ಹೊರಟಿದೆ “ನೀರಿಂಗಿಸೋಣ’ ತಂಡ
ಮನೆಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದಿಂದ ಪ್ರೇರಣೆ
Team Udayavani, Jul 11, 2019, 5:38 AM IST
ಮಹಾನಗರ: ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಮಂಗಳೂರು ಮಾತ್ರವಲ್ಲ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜನರಲ್ಲಿ ಜಲ ಜಾಗೃತಿ ಮೂಡಲು ಪ್ರೇರಣೆಯಾಗುತ್ತಿದೆ. ಇದೀಗ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎನ್ನುವ ಗ್ರಾಮವು ಪತ್ರಿಕೆಯ ಅಭಿಯಾನಕ್ಕೆ ಪೂರಕವಾಗಿ ಇಡೀ ಗ್ರಾಮವನ್ನೇ ಮಳೆನೀರು ಸಂರಕ್ಷಣೆ ಮೂಲಕ ಜಲ ಸಾಕ್ಷರತೆಯಲ್ಲಿ ಮಾದರಿಯಾಗಿಸಲು ಹೊರಟಿರುವುದು ಗಮನಾರ್ಹ.
ಉದಯವಾಣಿಯು ಒಂದು ತಿಂಗಳಿನಿಂದ ಮಳೆ ನೀರಿನ ಸಂರಕ್ಷಣೆ ಕುರಿತಂತೆ ಹಮ್ಮಿಕೊಂಡಿರುವ ಅಭಿಯಾನದಿಂದ ಜನರಲ್ಲಿ ಈಗಾಗಲೇ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಜಲ ಜಾಗೃತಿ ಮೂಡಿದೆ. ಇದರ ಪರಿಣಾಮವಾಗಿ ಮಂಗಳೂರು ನಗರ, ಹೊರ ವಲಯದ ಹಲವು ಮನೆಗಳಲ್ಲಿ ಈಗಾಗಲೇ ಮಳೆ ಕೊಯ್ಲು ಅನ್ನು ಜನರು ಸ್ವಯಂಪ್ರೇರಿತರಾಗಿ ಅಳವಡಿಸಿ ಬೇರೆಯವರಿಗೆ ಮಾದರಿಯಾಗುತ್ತಿದ್ದಾರೆ. ಇನ್ನೊಂದೆಡೆ ಮಳೆ ನಿರೀನ ಸಂರಕ್ಷಣೆಯಲ್ಲಿ ಕೇವಲ ಮನೆಗಳು ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ಕೂಡ ಈ ದಿಕ್ಕಿನಲ್ಲಿ ಕಾರ್ಯಪ್ರವೃತ್ತಗೊಂಡಿವೆ.
ಜಲ ಸಂರಕ್ಷಣೆ ಬಗ್ಗೆ ಕಾಳಜಿ ಹೊಂದಿರುವ ಒಂದಷ್ಟು ಪ್ರಜ್ಞಾವಂತ ನಾಗರಿಕರು ಒಟ್ಟುಗೂಡಿ ಒಂದೆರಡು ವಾರದಿಂದ ಮುಂಡಾಜೆ ಗ್ರಾಮದ ಪ್ರತಿಯೊಂದು ಮನೆಗೂ ಭೇಟಿ ನೀಡಿ ಮಳೆಕೊಯ್ಲು, ಮಳೆ ನೀರು ಇಂಗಿಸುವುದು, ಬತ್ತಿ ಹೋಗಿರುವ ಬೋರ್ವೆಲ್ಗಳನ್ನು ಮರುಪೂರಣಗೊಳಿ ಸುವುದು ಹೇಗೆ ಎಂಬ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಅದರಂತೆ ಇಂಗು ಗುಂಡಿ, ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ “ನೀರಿಂಗಿಸೋಣ’ ಎಂಬ ತಂಡ ಕಟ್ಟಿಕೊಂಡಿದ್ದಾರೆ. ಉತ್ಸಾಹಿ ಹಿರಿಯರು-ಕಿರಿಯರನ್ನು ಒಳಗೊಂಡಿರುವ ಈ ಗುಂಪು ಗ್ರಾಮದಲ್ಲಿ ನೀರಿಂಗಿಸುವ ಆಲೋಚನೆಯೊಂದಿಗೆ ಮುಂದಡಿ ಇಟ್ಟಿದೆ. “ಉದಯವಾಣಿ’ ಸಹಯೋಗದಲ್ಲಿ ಈ ವರ್ಷದ ಮಳೆಗಾಲ ಮುಗಿಯುವರೆಗೂ ಇಡೀ ಗ್ರಾಮದಲ್ಲಿ “ನೀರಿಂಗಿಸೋಣ’ ತಂಡವು ಹಲವು ಜಲ ಸಾಕ್ಷರತಾ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಮುಂಡಾಜೆಯ ಈ ನೀರಿಂಗಿಸೋಣ ತಂಡದೊಂದಿಗೆ ಗ್ರಾಮ ವಿಕಾಸ ಸಮಿತಿ ಮುಂಡಾಜೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮುಂಡಾಜೆ ಮತ್ತು ಮುಂಡಾಜೆ ಗ್ರಾಮ ಪಂಚಾಯತ್ಗಳೂ ಕೈ ಜೋಡಿಸಿವೆ.
ಮಳೆಗಾಲ ಪೂರ್ತಿ ಕಾರ್ಯಕ್ರಮ
ಗ್ರಾಮಾದ್ಯಂತ ಸಾಧ್ಯವಾದಷ್ಟು ಜನರನ್ನು ತಲುಪಿ ನೀರಿಂಗಿಸುವಂತೆ ಮನವಿ ಮಾಡುವುದು, ಪ್ರಾತ್ಯಕ್ಷಿಕೆ ನೀಡುವುದು, ಇಂಗುಗುಂಡಿ ರಚನೆ, ಮಳೆಕೊಯ್ಲು ಅಳವಡಿಕೆ, ಜಲಮರುಪೂರಣ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವುದು ಈ ತಂಡದ ಉದ್ದೇಶ. ಅಲ್ಲದೆ, ಇಂಗುಗುಂಡಿಗಳ ರಚನ ಕಾರ್ಯದಲ್ಲೂ ತೊಡಗಲಿದೆ. ಅದಕ್ಕಾಗಿ ಈ ಮಳೆಗಾಲ ಪೂರ್ತಿ ಪ್ರತಿ ವಾರವೂ ತಂಡ ಕಾರ್ಯೋನ್ಮುಖವಾಗಲಿದೆ. ಹೆಚ್ಚು ಮನೆಗಳಿರುವ ಜಾಗದಲ್ಲಿ ಜನರನ್ನು ಒಂದೆಡೆ ಸೇರಿಸಿ, ಮತ್ತು ಕೆಲವೇ ಮನೆಗಳಿರುವಲ್ಲಿ ಆ ಮನೆಗಳಿಗೇ ತೆರಳಿ ಜನರನ್ನು ನೀರಿಂಗಿಸುವಲ್ಲಿ ಪ್ರೇರೇಪಿಸುವ ಉದ್ದೇಶ ವನ್ನು ತಂಡ ಹೊಂದಿದೆ. ಇಂಗುಗುಂಡಿ, ಮಳೆಕೊಯ್ಲು ರಚನೆ ಬಗ್ಗೆ ಆಸಕ್ತಿ ಇರುವವರನ್ನು ಜತೆ ಸೇರಿಸಿಕೊಂಡು ತಂಡದ ಸದಸ್ಯರು ಮುನ್ನಡೆಯಲಿದ್ದಾರೆ.
ಇಂಗುಗುಂಡಿ ರಚನೆ
ಜು. 13ರಂದು ಪಿಲಿಂಗಾರು ಗುಡ್ಡೆ ಎಂಬ ಎತ್ತರದ ಪ್ರದೇಶದಲ್ಲಿ ಇಂಗು ಗುಂಡಿಗಳ ರಚನೆ ನಡೆಯಲಿದೆ. ಇದಕ್ಕೆ ಈ ನಾಲ್ಕು ಸಂಸ್ಥೆಗಳೊಂದಿಗೆ ಸ್ಥಳೀಯ ಕಾಲೇಜುಗಳ ಸುಮಾರು 70 ಎನೆಸ್ಸೆಸ್ ವಿದ್ಯಾರ್ಥಿಗಳೂ ಸಹಕರಿಸಲಿದ್ದಾರೆ. ಆ ಮೂಲಕ ಎತ್ತರದ ಗುಡ್ಡದಲ್ಲಿ ಸಾಧ್ಯವಾಗುವಷ್ಟು ಇಂಗು ಗುಂಡಿಗಳನ್ನು ಮಾಡಿ ಮಳೆ ನೀರು ಇಂಗಿಸಲು ಪ್ರಯತ್ನಿಸಲಾಗುತ್ತದೆ ಎಂದು ನೀರಿಂಗಿಸೋಣ ತಂಡದ ಗಜಾನನ ವಝೆ ತಿಳಿಸಿದ್ದಾರೆ.
ಅಭಿಯಾನಕ್ಕೆ ಒಂದು ತಿಂಗಳು: ಜನಾಭಿಪ್ರಾಯ
ಪತ್ರಿಕೆಗೆ ಧನ್ಯವಾದ
ಮಳೆಕೊಯ್ಲು ಪ್ರಸ್ತುತ ಪಡಿಸಿದ “ಉದಯ ವಾಣಿ’ ಪತ್ರಿಕೆಗೆ ಧನ್ಯವಾ ದಗಳು. ಜನರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಿರುವುದು ಮತ್ತು ಜನರು ಈ ಅಭಿಯಾನಕ್ಕೆ ಸ್ಪಂದಿಸಿರುವ ರೀತಿ ನಿಜಕ್ಕೂ ಶ್ಲಾಘನೀಯ. ಪಾಲಿಕೆಯು ಇದೇ ರೀತಿಯ ಮುಂದಾಳತ್ವ ವಹಿಸಿಕೊಂಡು ನಗರದ ಎಲ್ಲ ಸರಕಾರಿ ಬಾವಿಗಳಿಗೆ ಮಳೆಕೊಯ್ಲು ವ್ಯವಸ್ಥೆ ಮಾಡಿದರೆ ಹೆಚ್ಚು ಉಪಯೋಗವಾಗಬಹುದು.
- ಭವ್ಯಾ ಪ್ರಥಮೇಶ್,
ಕಾಪಿಗುಡ್ಡ ಆಕಾಶಭವನ
ಪಾಲಿಕೆ ಪ್ರಯತ್ನ ನಡೆಸಲಿ
ಜನರಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಿ ಮಳೆಕೊಯ್ಲು ಅಳವಡಿಸಿ ಕೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ “ಉದಯವಾಣಿ’ ಮಾಡುತ್ತಿರುವ ಕೆಲಸ ಅಭಿನಂದನೀಯ. ಈ ಕಾರ್ಯಕ್ರಮ ಹಲವು ಸಮಯಗಳವರೆಗೆ ಮುಂದುವರಿಯಬೇಕು. ಪಾಲಿಕೆಯು ಮಳೆಕೊಯ್ಲು ಅಳವಡಿಸುವ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ನಡೆಸಲಿ. ವಾಣಿಜ್ಯ ಕಟ್ಟಡ, ಮನೆಗಳಲ್ಲಿ ಮಳೆಕೊಯ್ಲು ಕಡ್ಡಾಯ ಮಾಡಬೇಕು.
- ಡಾ| ಶಿವರಾಮ ರೈ,
ವೈದ್ಯರು ಮಂಗಳೂರು
ಸಂಘಟನಾತ್ಮಕ ಕೆಲಸ
ಮಳೆನೀರು ಇಂಗಿಸುವುದರಿಂದ ಭವಿಷ್ಯದಲ್ಲಿ ನೀರಿಗೆ ಸಮಸ್ಯೆಯಾಗದು. ಆದರೆ ಇದನ್ನು ಒಬ್ಬರು, ಇಬ್ಬರು ಮಾಡುವುದಲ್ಲ; ಸಂಘಟನಾತ್ಮಕವಾಗಿ ಮಾಡಬೇಕು. ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು.ಈ ನಿಟ್ಟಿನಲ್ಲಿ “ಉದಯವಾಣಿ’ಯ ಅಭಿಯಾನ ಪ್ರೇರಣದಾಯಿ.
- ಮಮತಾ ಶೆಟ್ಟಿ, ಕೊಡಿಯಾಲ್ಗುತ್ತು
ಪ್ರೇರಣೆ ನೀಡಿದ ಅಭಿಯಾನ
ನೀರಿಂಗಿಸಿ ಜಲಸಂಪತ್ತು ರಕ್ಷಿಸುವ ಯೋಚನೆಯೊಂದಿಗೆ ಜಲತಜ್ಞ ಶ್ರೀಪಡ್ರೆಯವರಿಂದ ಮಾಹಿತಿ ಪಡೆದುಕೊಂಡೆ. ಬಳಿಕ ನಾಲ್ಕಾರು ಮಂದಿ ಕುಳಿತು ಗ್ರಾಮದಲ್ಲಿ ಇಂತಹದೊಂದು ಪ್ರೇರಣಾದಾಯಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಚಿಂತಿಸಿದೆವು. ಅಲ್ಲಿ ದೊರೆತ ಸ್ಫೂರ್ತಿ ಇನ್ನಷ್ಟು ಸಂಘ – ಸಂಸ್ಥೆ, ಕಾಲೇಜುಗಳನ್ನು ತಲುಪಲು ಸಾಧ್ಯವಾಯಿತು. ಈ ಎಲ್ಲ ಯೋಚನೆ-ಪ್ರಯತ್ನಕ್ಕೆ ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನ ಮತ್ತಷ್ಟು ಪ್ರೇರಣೆ ನೀಡಿದ್ದು, ಈ ಮಳೆಗಾಲವಿಡೀ ನೀರಿಂಗಿಸುವ ಚಟುವಟಿಕೆಗಳಿಗೆ ಸಮಯ ಮೀಸಲಿಡಲಿದ್ದೇವೆ.
– ಗಜಾನನ ವಝೆ,ನೀರಿಂಗಿಸೋಣ ತಂಡದ ಪ್ರತಿನಿಧಿ
ನೀವು ಅಭಿಪ್ರಾಯ ಹಂಚಿಕೊಳ್ಳಿ
ಉದಯವಾಣಿಯ “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನವು ಒಂದು ತಿಂಗಳು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಓದುಗರು ಕೂಡ ಈ ಯಶಸ್ವಿ ಅಭಿಯಾನದ ಕುರಿತಂತೆ ತಮ್ಮ ಅಭಿಪ್ರಾಯ, ಅನಿಸಿಕೆ ಅಥವಾ ಸಲಹೆಗಳನ್ನು ಪತ್ರಿಕೆ ಜತೆಗೆ ಹಂಚಿಕೊಳ್ಳಬಹುದು. ಆ ಮೂಲಕ ಈ ಅಭಿಯಾನವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವುದಕ್ಕೆ ಉತ್ತೇಜನ ನೀಡಬಹುದು. ಆಸಕ್ತರು ತಮ್ಮ ಹೆಸರು, ಸ್ಥಳದ ಜತೆಗೆ ಸಂಕ್ಷಿಪ್ತ ಬರೆಹಗಳನ್ನು ನಿಮ್ಮ ಫೋಟೋ ಸಹಿತ ನಮಗೆ ಕಳುಹಿಸಬಹುದು. ಸೂಕ್ತ ಅಭಿಪ್ರಾಯ-ಸಲಹೆಗಳನ್ನು ಪ್ರಕಟಿಸಲಾಗುವುದು.
9900567000
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!