ಅಂತಾರಾಷ್ಟ್ರೀಯ ಜಾಂಬೂರಿ ಜಬರ್ದಸ್ತ್: ದಕ್ಷಿಣ ಕೊರಿಯಾದ ಅಮ್ಮ-ಮಗನ ಮೆಚ್ಚುಗೆ
Team Udayavani, Dec 24, 2022, 7:15 AM IST
ಮೂಡುಬಿದಿರೆ: ಅಂತಾರಾಷ್ಟ್ರೀಯ ಜಾಂಬೂರಿ ಜಬರ್ದಸ್ತ್ ಆಗಿದ್ದು, ಆತಿಥ್ಯ ಉತ್ತಮವಾಗಿದೆ. ಹೆಸರಿಗೆ ಸಾಂಸ್ಕೃತಿಕ ಜಾಂಬೂರಿ ಹೆಸರಿಗೆ ಪೂರಕವಾಗಿ ಎಲ್ಲ ರೀತಿ ಸಾಂಸ್ಕೃತಿಕ ವೈವಿಧ್ಯಗಳನ್ನು ಹೊಂದಿದೆ ಎನ್ನುವುದು ದಕ್ಷಿಣ ಕೊರಿಯಾದಿಂದ ಬಂದಿರುವ ಲೀಸಾ ಕಿಮ್ ಮತ್ತು ಅವರ ಮಗ ಚಾ ಸುಂಗ್ ಗುಕ್ ಅವರ ಮಾತು.
ಆಳ್ವಾಸ್ ವಿದ್ಯಾಸಂಸ್ಥೆ ಆವರಣದಲ್ಲಿ ನಡೆಯುತ್ತಿರುವ ಸ್ಕೌಟ್ಸ್-ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಯನ್ನು ವೀಕ್ಷಿಸುವ ಉದ್ದೇಶದಿಂದ ಬಂದಿರುವ ಅವರು ಉದಯವಾಣಿಯೊಂದಿಗೆ ಮಾತನಾಡಿದರು.
ಭಾರತಕ್ಕೆ ಈ ಹಿಂದೆಯೂ ಭೇಟಿ ನೀಡಿದ್ದೆವು. ಸಾಂಸ್ಕೃತಿಕ ಜಾಂಬೂರಿ ಆಯೋಜಿಸಲ್ಪಡುತ್ತಿರುವ ಕುರಿತು ಮಾಹಿತಿ ತಿಳಿದು ಬಂದಿದ್ದೇವೆ. ಯಾವ ಕಡೆಗೆ ಕಣ್ಣು ಹಾಯಿಸಿದರೂ ಸಾಂಸ್ಕೃತಿಕ ವೈಭವವೇ ಕಂಡು ಬರುತ್ತಿದೆ. ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು.
ಊಟ ಉಪಾಹಾರದ ಬಗ್ಗೆ ಹೇಳುವುದಾದರೆ ಇಡ್ಲಿ-ವಡೆ ಸಾಂಬಾರ್, ಮಸಾಲೆ ದೋಸೆ ಬಹಳ ಇಷ್ಟವಾಯಿತು. ಇಷ್ಟು ಅದ್ದೂರಿಯ ಕಾರ್ಯಕ್ರಮ ನಮ್ಮ ದೇಶದಲ್ಲೂ ಕಾಣಸಿಗುವುದಿಲ್ಲ. ಇಲ್ಲಿನ ಜನರು ಸಂಸ್ಕೃತಿ ಪ್ರಿಯರೆಂದು ನೋಡಿದಾಗಲೇ ತಿಳಿಯುತ್ತದೆ. ಮುಂದೆ ಕೊರಿಯಾದಲ್ಲೂ ಜಾಂಬೂರಿ ನಡೆಯಲಿರುವುದರಿಂದ ಆಯೋಜಕರಿಗೆ ಹೆಚ್ಚು ಅದ್ದೂರಿಯಿಂದ ನಡೆಸಲು ಮನವಿ ಮಾಡಲಾಗುವುದು. ಡಾ| ಮೋಹನ ಆಳ್ವ ಅವರ ಕಾರ್ಯಕ್ರಮ ಆಯೋಜನೆಯ ರೀತಿಯೂ ವಿಭಿನ್ನವಾದುದು ಎಂದರು.
ಇಂದು
ಬೃಹತ್ ಗಾಳಿಪಟ ಅನಾವರಣ
ಮೂಡುಬಿದಿರೆ: ಟೀಂ ಮಂಗಳೂರು ಕಲಾವಿದರು 1 ತಿಂಗಳ ಶ್ರಮದಿಂದ ನಿರ್ಮಿಸಿರುವ 50 ಅಡಿಯ ಬೃಹತ್ ಗಾಳಿಪಟ ಅನಾವರಣ ಡಿ. 24ರಂದು ಬೆಳಗ್ಗೆ 11 ಗಂಟೆಗೆ ಕಲಾಮೇಳದ ಯಶೋಕಿರಣ ಕಟ್ಟಡದಲ್ಲಿ ನಡೆಯಲಿದೆ.ಗಾಳಿಪಟದಲ್ಲಿ ಕರಾವಳಿಯ ವಿವಿಧ ಸಂಸ್ಕೃತಿ, ಪರಂಪರೆ, ಜಾನಪದ ಆಟ-ಕೂಟಗಳಿಗೆ ಸಂಬಂಧಿಸಿದ ಚಿತ್ರಗಳನ್ನು ರಚಿಸಲಾಗಿದೆ. ಇದನ್ನು ಹಾರಿಸಲು ಅಸಾಧ್ಯವಾಗಿರುವ ಕಾರಣ ಜಾಂಬೂರಿಯ ಆವರಣದಲ್ಲಿ ಪ್ರದರ್ಶಿಸಲಾಗುವುದು.
ಇಂದಿನ ಸಾಂಸ್ಕೃತಿಕ ಕಲಾಪಗಳು
ಶನಿವಾರ ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗಿನ ಕಲಾಪಗಳು:
ಡಾ| ವಿ.ಎಸ್. ಆಚಾರ್ಯ ಸಭಾಂಗಣ: ಕರ್ನಾಟಕ ಶಾಸ್ತ್ರೀಯ ಗಾಯನ (ಮಾಧುರಿ ಕೌಶಿಕ್ ಮತ್ತು ಬಳಗ), ಯುಗಳ ಭರತನಾಟ್ಯ (ವಿದುಷಿ ಆಯನಾ ವಿ. ರಮಣ್ ಮತ್ತು ವಿದ್ವಾನ್ ಮಂಜುನಾಥ್ ಪುತ್ತೂರು), ಕನ್ನಡ ಹಾಸ್ಯ (ದೇವರಾಜ್ ಎಲಿ ಮತ್ತು ಜೀವನ್ ಸಾಬ್ ವಾಲೀಕರ್), ಭರತನಾಟ್ಯ (ಶಿವ ಪ್ರಣಾಮ್ ಕಿನ್ನಿಗೋಳಿ), ಹರಿಕಥೆ (ಸುಧಾಕರ ಕೋಟೆ ಕುಂಜತ್ತಾಯ), ಭರತನಾಟ್ಯ (ನಿರ್ದೇಶನ: ವಿದ್ವಾನ್ ಸುಬ್ರಹ್ಮಣ್ಯ ನಾವಡ ಕಾರ್ಕಳ), ಭರತನಾಟ್ಯ (ವಿದುಷಿ ಸುಮಂಗಲ ರತ್ನಾಕರ್).
ನುಡಿಸಿರಿ ವೇದಿಕೆ: ಸುಸ್ವರ ಸಂವಾದಿನೀ (ರವೀಂದ್ರ ಕಾಕೋಟಿ), ಹಾಸ್ಯ ಲಹರಿ (ಗಂಗಾಧರ ಪೂಜಾರ್, ಮಿಮಿಕ್ರಿ ರಮೇಶ್ ಬಾಬು ಮೈಸೂರು), ಕರ್ನಾಟಕ ಶಾಸ್ತ್ರೀಯ ಗಾಯನ (ಜಗನ್ನಾಥ್ ರಾಮ್ ಮತ್ತು ಬಳಗ). ದಾಸವಾಣಿ (ಶಿವಕುಮಾರ್ ಮಹಾಂತ, ಬಳಗ), ಕೊಳಲು ವಾದನ (ಮೇಧಾ ಉಡುಪ), ಮರಾಠಿ ಅಭಂಗ್ (ನಾಗೇಶ್ ಅಡ್ಗಾಂವ್ಕರ್), ನೃತ್ಯ ವೈಭವ (ವಿದುಷಿ: ವಿದ್ಯಾಶ್ರೀ ರಾಧಾಕೃಷ್ಣ ), ಭರತನಾಟ್ಯ ವೈಭವ ( ವಿದುಷಿ ಶ್ರೀವಿದ್ಯಾ ಮುರಳೀಧರ್).
ಕೃಷಿ ಸಿರಿ ವೇದಿಕೆ: ಸುಗಮ ಸಂಗೀತ (ನಾದ ಸುರಭಿ, ಧಾರವಾಡ), ಜನಪದ ಗೀತೆ (ಗಣೇಶ್ ಗಂಗೊಳ್ಳಿ, ಬಳಗ), ಯಕ್ಷ ಹಾಸ್ಯ ವೈಭವ (ಸಂಯೋಜನೆ: ರಾಕೇಶ್ ರೈ ಅಡ್ಕ), ಗಾನ ಮಂಜರಿ (ರವೀಂದ್ರ ಪ್ರಭು, ಬಳಗ). ತುಳು ಹಾಸ್ಯ ಲಹರಿ (ಕಲಾಶ್ರೀ ಬೆದ್ರ ಮತ್ತು ಸುನಿಲ್ ನೆಲ್ಲಿಗುಡ್ಡೆ ಬಳಗ)
ಪ್ಯಾಲೆಸ್ ಗ್ರೌಂಡ್: ಸಂಜೆ 4ರಿಂದ ಸುಗಮ ಸಂಗೀತ (ಪ್ರಮೋದ್ ಸಪ್ರ)
ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ: ಸಂಜೆ 5.30ರಿಂದ ಜಾಗೋ ಹಿಂದೂಸ್ತಾನಿ
(ಸ್ವರ ನಿನಾದ, ಕೊಲ್ಹಾಪುರ ಬಳಗ).