“ಖಾಸಗಿ ಕಾರ್ಯಕ್ರಮವ ಜನಪ್ರಿಯತೆಗೊಳಿಸಿರುವುದು ಮಾದರಿ’
Team Udayavani, Mar 19, 2017, 2:43 PM IST
ನಗರ : ಡಾ| ಕಲಾಂ ಅವರ ಅಭಿಮಾನಿ ಶಶಿಧರ್ ಜಿ.ಎಸ್. ಮತ್ತು ತಂಡ ಖಾಸಗಿ ಕಾರ್ಯಕ್ರಮವೊಂದನ್ನು ಈ ರೀತಿ ಜನಪ್ರಿಯತೆಯ ಉತ್ತುಂಗಕ್ಕೇರಿಸಿರುವುದು ಮಾದರಿ ಎಂದು ಡಾ| ಅಬ್ದುಲ್ ಕಲಾಂ ಒಡನಾಡಿ ಜಯಪ್ರಕಾಶ್ ರಾವ್ ಬಣ್ಣಿಸಿದ್ದಾರೆ.
ಎಸೆಸೆಲ್ಸಿ ವಿದ್ಯಾರ್ಥಿಗಳಿಗಾಗಿ ಪುತ್ತೂರು ಶಿಕ್ಷಣ ಇಲಾಖೆ ಆರಂಭಿಸಿದ ಮಿಷನ್ 95+ ಯೋಜನೆಗೆ ರಾಷ್ಟ್ರಪ್ರಶಸ್ತಿ ಲಭಿಸಿ ರುವ ಹಿನ್ನೆಲೆಯಲ್ಲಿ ಪುತ್ತೂರು ಶಿಕ್ಷಣ ಇಲಾಖೆಯು ಮಾçದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರಪ್ರಶಸ್ತಿ ಮರುಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೃದಯಗಳನ್ನು ಮುಟ್ಟುವ ಕೆಲಸ ಮಾಡಬೇಕು ಎಂಬ ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಶಯದ ಪ್ರೇರಣೆಯಂತೆ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ನೇತೃತ್ವದಲ್ಲಿ ಪುತ್ತೂರಿನಲ್ಲಿ ಹುಟ್ಟಿಕೊಂಡ ಮಿಷನ್ 95+ ಕಲ್ಪನೆ ರಾಷ್ಟ್ರಮಟ್ಟಕ್ಕೂ ತಲುಪಿರುವುದು ಅತ್ಯಂತ ಶ್ಲಾಘನೀಯ. ಸರಕಾರಿ ಶಾಲೆಗಳ ಶಿಕ್ಷಕರನ್ನು ಅಭಿನಂದಿಸಿ ನೀವು ದೇಶ ಕಟ್ಟುವ ನಿಜವಾದ ಮಾರ್ಗದರ್ಶಕರು ಎಂದು ಡಾ| ಅಬ್ದುಲ್ ಕಲಾಂ ಹುರಿದುಂಬಿಸುತ್ತಿದ್ದರು ಎಂದು ಅವರು ನೆನಪಿಸಿದರು.
ಉತ್ಸಾಹ ಬೆಳೆಸಿಕೊಳ್ಳಿ
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸರಕಾರದಿಂದ ಎಲ್ಲವನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಕಿವಿ ಮಾತು ಹೇಳಿದ ಅವರು, ಶಿಕ್ಷಕರು ಸದಾ ಉತ್ಸಾಹವನ್ನು ಬೆಳೆಸಿಕೊಳ್ಳಬೇಕು. ಮಹತ್ವದ ಜವಾಬ್ದಾರಿ ಯನ್ನು ಹೊಂದಿರುವ ಶಿಕ್ಷಕರು ಉತ್ಸಾಹ ವಿದ್ದಾಗ ಮಾತ್ರ ವಿದ್ಯಾರಥವನ್ನು ಎಳೆಯಲು ಸಾಧ್ಯ ಎಂದರು.
ಆಶಯ ನುಡಿಗಳನ್ನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ| ಬಿ.ಜೆ. ಸುವರ್ಣ ಮಾತನಾಡಿ, ಎಸೆಸೆಲ್ಸಿ ಫಲಿತಾಂಶದಲ್ಲಿ ದ.ಕ. ಜಿಲ್ಲೆ 29ನೇ ಸ್ಥಾನಕ್ಕೆ ಇಳಿದಾಗ ಗಂಭೀರವಾಗಿ ಪರಿಗಣಿಸಿದ ಆಗಿನ ಜಿಲ್ಲಾಧಿಕಾರಿಯವರು ಮಂಗಳೂರಿನಲ್ಲಿ ಸಭೆ ನಡೆಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಅವರು ಹೊಸ ಕಲ್ಪನೆಯ ಜಾರಿಗೆ ಮುಂದಾದರು. ಈ ಯೋಜನೆಯ ಕುರಿತು ಸಾಕಷ್ಟು ವಿಮರ್ಶೆ ನಡೆಯಿತು. ಫಲಿತಾಂಶವೇ ಮುಖ್ಯವೇ ಎಂಬ ಟೀಕೆಯೂ ವ್ಯಕ್ತವಾಯಿತು. ಆದರೆ ಫಲಿತಾಂಶದ ದೃಷ್ಟಿ ಮಾತ್ರವಾಗಿರದೆ ಇದೊಂದು ನಾವಿನ್ಯ ಅಭ್ಯಾಸ ಎಂಬುದನ್ನು ಮನಗಂಡ ಕಾರಣದಿಂದಲೇ ರಾಷ್ಟ್ರ ಪ್ರಶಸ್ತಿ ಲಭಿಸಿದೆ ಎಂದರು.
ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ. ಶಿವರಾಮ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಟಿ. ನಾರಾಯಣ ಭಟ್ ಮಾತನಾಡಿ ಅಭಿನಂದನೆ ಸಲ್ಲಿಸಿದರು. ಮಿಷನ್ 95+ ಯಶಸ್ವಿ ಅಭಿಯಾನದ ಕುರಿತು ಶಿಕ್ಷಕರಾದ ನಾರಾಯಣ ಉಪ್ಪಳಿಗೆ, ದಿವಾಕರ ಆಚಾರ್, ಶೋಭಾ ನಾಗರಾಜ್, ಆಯಿಷಾ, ನಜೀರ್, ಸಹದೇವ, ಜಗನ್ನಾಥ, ಎಂ.ಐ. ತೋಮಸ್ ಮೊದಲಾದವರು ಅಭಿಪ್ರಾಯ ಹಂಚಿಕೊಂಡರು.
ದೈ.ಶಿ. ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸುರೇಶ್ ಮೊದಲಾದವರು ಪಾಲ್ಗೊಂಡರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ. ಕಾರ್ಯಕ್ರಮ ನಿರ್ವಹಿಸಿದರು.
ಮರು ಸಮರ್ಪಣೆ
ಮಿಷನ್ 95+ ಯೋಜನೆಗೆ ಲಭಿಸಿದ ರಾಷ್ಟ್ರ ಪ್ರಶಸ್ತಿಯನ್ನು ಯೋಜನೆಯ ಯಶಸ್ವಿಗೆ ಶ್ರಮಿಸಿದ ಎಲ್ಲ ಶಿಕ್ಷಕರು, ಇಲಾಖೆ ಅಧಿಕಾರಿಗಳು ಮತ್ತು ಸಿಬಂದಿ, ಶಿಕ್ಷಣ ಪ್ರೇಮಿಗಳು, ನಿವೃತ್ತ ಪ್ರಾಧ್ಯಾಪಕರು ಸೇರಿದಂತೆ ಮಿಷನ್ 95+ ಒಟ್ಟು ತಂಡಕ್ಕೆ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಸಮರ್ಪಿಸಿದರು.