ಜೋಮ್ಲು ತೀರ್ಥ: ಸುರಕ್ಷತೆಗೆ ಇರಲಿ ಆದ್ಯತೆ
Team Udayavani, Jun 19, 2018, 6:00 AM IST
ಬ್ರಹ್ಮಾವರ: ಕಳೂ¤ರು ಸಂತೆಕಟ್ಟೆ ಸಮೀಪದ ಜೋಮ್ಲು ತೀರ್ಥ ಪ್ರಾಕೃತಿಕ ಸೌಂದರ್ಯದ ನಡುವಿನ ಸುಂದರ ಜಲಪಾತ. ಆದರೆ ಅಷ್ಟೇ ಅಪಾಯಕಾರಿಯಾದ್ದರಿಂದ ಸುರಕ್ಷತೆಯೂ ಅತ್ಯಗತ್ಯ.
ಹೆಬ್ರಿ ಸಮೀಪದ ಕಳೂ¤ರು ಸಂತೆಕಟ್ಟೆಯಿಂದ ಸುಮಾರು 6 ಕೀ.ಮಿ. ದೂರದಲ್ಲಿದೆ ಜೋಮ್ಲು ಜಲಪಾತ. ಮಳೆಗಾಲದಲ್ಲಿ ಭೋರ್ಗರೆಯುತ್ತಾ ಬರುವ ಸೀತೆ ಸುಮಾರು 30 ಅಡಿ ಆಳಕ್ಕೆ ಧುಮುಕುವ ಸ್ಥಳವಾಗಿದೆ. ಶ್ರೀ ಬೊಬ್ಬರ್ಯ ಆರಾಧ್ಯ ಸ್ಥಳವಾದ ಇದು ಜೋಮ್ಲು ತೀರ್ಥವೆಂದೇ ಪ್ರಸಿದ್ಧವಾಗಿದೆ. ಪ್ರತಿ ವರ್ಷ ಎಳ್ಳಮವಾಸ್ಯೆಯಂದು ಜಾತ್ರೆ ಜರಗುತ್ತದೆ.
ಸುರಕ್ಷತೆ ಅಗತ್ಯ
ಸಂತೆಕಟ್ಟೆಯಿಂದ ಬಹುತೇಕ ಕಾಡು ದಾರಿಯಲ್ಲೇ ಸಾಗಬೇಕಿದೆ. ಕಾಡುಕೋಣ, ಜಿಂಕೆ ಮೊದಲಾದ ಪ್ರಾಣಿಗಳು ಸಂಚರಿಸುವ ಸ್ಥಳವಾದ್ದರಿಂದ ಜಾಗರೂಕರಾಗಿಬೇಕು.
ನೋಡಲಷ್ಟೇ ಚಂದ
ನೀರು ಧುಮುಕುವ ಸ್ಥಳ ತೀರಾ ಅಪಾಯಕಾರಿಯಾದ್ದರಿಂದ ನೋಡಲಷ್ಟೆ ಚಂದ. ಕೊರಕಲು ಕಲ್ಲುಗಳ ನಡುವೆ ಎಚ್ಚರ ತಪ್ಪಿದರೆ ಅವಘಡ ನಿಶ್ಚಿತ. ಮಳೆಗಾಲದ ಸಮಯ ಜಲಪಾತದ ಆಸುಪಾಸು ಸಹ ನೀರಿಗಿಳಿಯುವುದು ಸುರಕ್ಷಿತವಲ್ಲ.
ಸಾಕಷ್ಟು ಅಭಿವೃದ್ಧಿ
ಇತ್ತೀಚಿನ ದಿನಗಳಲ್ಲಿ ಚಾರಾ ವಿವೇಕಾನಂದ ಯುವ ವೇದಿಕೆ, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ. ಸಹಯೋಗದಲ್ಲಿ ಸಾಕಷ್ಟು ಅಭಿವೃದ್ಧಿಗೊಳಿಸಲಾಗಿದೆ. ಜಲಪಾತಕ್ಕೆ ತೆರಳುವ ದಾರಿ ದುರಸ್ತಿಗೊಳಿಸಿ, ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಪರಿಸರ ಸಂರಕ್ಷಣೆಯ ಫಲಕಗಳನ್ನು ಅಳವಡಿಸಲಾಗಿದೆ.
ಕುದುರೆಮುಖ ವನ್ಯಜೀವಿ ಸಂರಕ್ಷಣಾ ವಿಭಾಗಕ್ಕೆ ಒಳಪಟ್ಟ ಜೋಮ್ಲು ತೀರ್ಥದಲ್ಲಿ ಸುರಕ್ಷತೆಗಾಗಿ ಓರ್ವ ಸಿಬಂದಿಯನ್ನು ನೇಮಿಸಲಾಗಿದೆ.
ಆಹಾರ ಮರೆಯಬೇಡಿ
ತಿನ್ನಲು, ಕುಡಿಯಲು ಏನು ಬೇಕಿದ್ದರೂ ಸುಮಾರು 6 ಕಿ.ಮೀ. ದೂರದ ಸಂತೆಕಟ್ಟೆ ಅಥವಾ ಮುದ್ದೂರಿಗೆ ತೆರಳಬೇಕು. ಆದ್ದರಿಂದ ಜೋಮ್ಲು ತೀರ್ಥಕ್ಕೆ ಹೋಗುವುದಾದರೆ ಆಹಾರ ವಸ್ತುಗಳನ್ನು ಕೊಂಡೊಯ್ಯಲು ಮರೆಯಬೇಡಿ.
ಯಾವ ಯಾವ ದಾರಿಗಳು ?
ಉಡುಪಿಯಿಂದ ಬ್ರಹ್ಮಾವರ ಮೂಲಕ ಕಳೂ¤ರು ಸಂತೆಕಟ್ಟೆ 30 ಕಿ.ಮೀ. ಅಥವಾ ಹೆಬ್ರಿ ಮೂಲಕ ಕಳೂ¤ರು ಸಂತೆಕಟ್ಟೆ 38 ಕಿ.ಮೀ. ತಲುಪಬಹುದು. ಅಲ್ಲಿಂದ 5 ಕಿ.ಮೀ. ಡಾಮರು ರಸ್ತೆ ಹಾಗೂ ಸುಮಾರು 1 ಕಿ.ಮೀ. ಮಣ್ಣು ರಸ್ತೆಯಲ್ಲಿ ಕ್ರಮಿಸಿದರೆ ಜೋಮ್ಲು ತೀರ್ಥ ತಲುಪುತ್ತದೆ. ಮಂದಾರ್ತಿ, ಕೊಕ್ಕರ್ಣೆ ಭಾಗದವರು ಮುದ್ದೂರು ಮೂಲಕ 4 ಕಿ.ಮೀ. ತೆರಳಿದರೆ ಜೋಮ್ಲು ಸಿಗುತ್ತದೆ. ನಿರ್ಜನ ಪ್ರದೇಶವಾದ್ದರಿಂದ ತಂಡವಾಗಿ ತೆರಳುವುದು ಸುರಕ್ಷಿತ.
ಪ್ರಸ್ತಾವನೆ ಸಲ್ಲಿಕೆ
ಸುರಕ್ಷತೆ ದೃಷ್ಟಿಯಿಂದ ಇಲಾಖೆಯ ಸಿಬಂದಿ ಇರುತ್ತಾರೆ. ಮಳೆಗಾಲದಲ್ಲಿ ಹಾಗೂ ವಾರಾಂತ್ಯದಲ್ಲಿ ಹೆಚ್ಚುವರಿ ಸಿಬಂದಿ ಕರೆಯಿಸಿಕೊಳ್ಳಲಾಗುತ್ತದೆ. ಮುಂದೆ ಟಿಕೆಟ್ ದರ ನಿಗದಿಪಡಿಸಿ, ಇನ್ನಷ್ಟು ಸೌಲಭ್ಯ ಕಲ್ಪಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
– ವಾಣಿಶ್ರೀ ಹೆಗ್ಡೆ
ರೇಂಜ್ ಫಾರೆಸ್ಟರ್, ಸೋಮೇಶ್ವರ ವಲಯ
ತಪಾಸಣೆ ಅಗತ್ಯ
ಜೋಮ್ಲುವಿಗೆ ಬರುವ ಪ್ರವಾಸಿಗರ ಮಾಹಿತಿ ದಾಖಲಿಸುವ, ತರುವ ವಸ್ತುಗಳನ್ನು ಪರಿಶೀಲಿಸುವ ಕೇಂದ್ರ ತೆರೆಯಬೇಕು. ಟಿಕೆಟ್ ದರ ನಿಗದಿಪಡಿಸಿ ಸುರಕ್ಷತೆ ಒದಗಿಸಬೇಕು.
– ಮಿಥುನ್ ಶೆಟ್ಟಿ ಚಾರಾ
ವಿವೇಕಾನಂದ ಯುವ ವೇದಿಕೆ
– ಪ್ರವೀಣ್ ಮುದ್ದೂರು