ಮಂಕಿ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ರಿಂದ 1700 ಅಡಿಯ ಗಡಾಯಿಕಲ್ಲು ಏರುವ ಸಾಹಸ
Team Udayavani, Feb 10, 2023, 12:23 PM IST
ಬೆಳ್ತಂಗಡಿ: ದಿ ಮಂಕಿ ಮ್ಯಾನ್ ಎಂದೇ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗದ ಜ್ಯೋತಿರಾಜ್ ಅವರು ಇದೀಗ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಗಡಾಯಿಕಲ್ಲು (ಜಮಲಾಬಾದ್) ನರಸಿಂಹಘಡವನ್ನು ಏರಲು ಸಿದ್ಧತೆ ಕೈಗೊಂಡಿದ್ದಾರೆ.
ಜ್ಯೋತ ರಾಜ್ ಕರ್ನಾಟಕದ ಚಿತ್ರದುರ್ಗದ ಮೂಲದವರಾಗಿದ್ದು ಇವರು ಪರ್ವತಾರೋಹಿಯಾಗಿದ್ದಾರೆ. “ಕೋತಿ ರಾಜು” ಅಥವಾ ಮಂಕಿ ಕಿಂಗ್” ಎಂದು ಕರೆಯಲ್ಪಡುವ ರಾಜ್ ಅವರು ಚಿತ್ರದುರ್ಗ ಕೋಟೆಯನ್ನು ಸುರಕ್ಷತಾ ಪರಿಕರಗಳಿಲ್ಲದೆ ಕೇವಲ ಕೈ ಸಹಾಯದಿಂದಲೇ ಏರುವ ಮೂಲಕ ತಮ್ಮ ಅವಿರತ ಸಾಧನೆ ತೋರಿದ್ದಾರೆ.
ಇದನ್ನೂ ಓದಿ:ಸಂಪೂರ್ಣ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಿಂದ ಹೊರಬಿದ್ದ ಬುಮ್ರಾ
ಇದೀಗ ದ.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಟಿಪ್ಪು ವಶದಲ್ಲಿದ್ದ ಕೋಟೆಯಾದ 1700 ಅಡಿಯಿರುವ ಗಡಾಯಿಕಲ್ಲನ್ನು ಫೆ.12 ರವಿವಾರ ಏರಲಿದ್ದಾರೆ. ಈಗಾಗಲೆ ತಮ್ಮ 8 ಮಂದಿಯ ತಂಡದೊಂದಿಗೆ ಆಗಮಿಸಿರುವ ಅವರು ಶುಕ್ರವಾರದಿಂದಲೆ ಕಾರ್ಯೋನ್ಮುಖರಾಗಿದ್ದಾರೆ.
‘ಉದಯವಾಣಿ’ಗೆ ಪ್ರತಿಕ್ರಯಿಸಿದ ಅವರು ಗಡಾಯಿಕಲ್ಲು ಏರುವ ಬಹುದಿನದ ಕನಸಿಗೆ ಈಗ ಅವಕಾಶ ದೊರೆತಿದೆ. ಈಗಾಗಲೆ ವನ್ಯಜೀವಿ ಅರಣ್ಯ ವಿಭಾಗದಿಂದ ಅನುಮತಿ ಪಡೆಯಲಾಗಿದ್ದು, ಇದಕ್ಕೆ ಬೇಕಾದ ಪೂರ್ವ ತಯಾರಿ ನಡೆಸಿ ಕಲ್ಲು ಏರಲಿದ್ದೇನೆ. ಕಾನೂನಿನ ಚೌಕಟ್ಟಿನೊಳಗೆ ಉತ್ತರಾಭಿಮುಖವಾಗಿ ಕೈಗಳ ಸಹಾಯದಿಂದಷ್ಟೇ ಏರಲಿದ್ದೇನೆ. ಸುರಕ್ಷತೆ ದೃಷ್ಟಿಯಿಂದ ಸೊಂಟಕ್ಕೆ ರೋಪ್ ಅಳವಡಿಸಿಕೊಳ್ಳಲಾಗುವುದು. ಸ್ಕಿಪ್ ಆದರೆ ಹಗ್ಗದಲ್ಲಿ ನೇತಾಡಲಿದ್ದೇನೆ. ಗುರುವಾರ ಶಾಸಕ ಹರೀಶ್ ಪೂಂಜ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು ಮೂರು ದಿನ ಧರ್ಮಸ್ಥಳದಲ್ಲಿ ಉಳಿದುಕೊಳ್ಳುತ್ತಿದ್ದೇವೆ ಎಂದಿದ್ದಾರೆ.
ವಿಶ್ವ ಪ್ರಸಿದ್ಧ ಜೋಗ ಜಲಪಾತವನ್ನು ಹಲವಾರು ಬಾರಿ ಏರಿರುವ ಜ್ಯೋತಿರಾಜ್ ಏಕಶಿಲಾ ಕಲ್ಲನ್ನು ಏರಬೇಕೆಂಬ ಕನಸುಕಂಡಿದ್ದರು. ರವಿವಾರ ಅವರ ಸಾಹಸವನ್ನು ಜಿಲ್ಲೆಯ ಜನ ವೀಕ್ಷಿಸಬಹುದಾಗಿದೆ.
ವರದಿ: ಚೈತ್ರೇಶ್ ಇಳಂತಿಲ