ಸರಣಿ ರಜೆ: ಕರಾವಳಿಯ ದೇಗುಲಗಳಿಗೆ ಭಾರೀ ಸಂಖ್ಯೆಯ ಭಕ್ತರ ಭೇಟಿ
Team Udayavani, Nov 13, 2022, 10:51 PM IST
ಸುಬ್ರಹ್ಮಣ್ಯ/ಧರ್ಮಸ್ಥಳ/ಕೊಲ್ಲೂರು: ಸರಣಿ ರಜೆಯ ಹಿನ್ನೆಲೆ ಕರಾವಳಿಯ ಹೆಚ್ಚಿನ ಎಲ್ಲ ಪ್ರಮುಖ ದೇಗುಲಗಳಿಗೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾಗಣಪತಿ, ಕಟೀಲು ಶ್ರೀ ದುರ್ಗಾಪರಮೇಶ್ವರಿ, ಉಡುಪಿ ಶ್ರೀ ಕೃಷ್ಣ ದೇಗುಲ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಗಳಿಗೆ ಸಾವಿರಾರು ಭಕ್ತರು ಭೇಟಿ ನೀಡಿದ್ದಾರೆ. ಯಾತ್ರಿಗಳು ದೇಗುಲ ಭೇಟಿ ಮಾತ್ರವಲ್ಲದೆ ವಿವಿಧ ಬೀಚ್ಗಳಿಗೆ ಭೇಟಿ ನೀಡಿ ರಜೆಯ ಸಂಭ್ರಮವನ್ನು ಸವಿದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕಾಗಿ ಭಾನುವಾರ ಭಕ್ತ ಸಾಗರವೇ ಹರಿದು ಬಂದಿತ್ತು. ಶುಕ್ರವಾರ ಹಾಗೂ ಶನಿವಾರ ಕೂಡ ಭಾರೀ ಜನಸಂಖ್ಯೆಯ ಭಕ್ತರು ಭೇಟಿ ನೀಡಿದ್ದರು. ಕ್ಷೇತ್ರದಲ್ಲಿ ಆಶ್ಲೇಷಾ ಬಲಿ, ನಾಗಪ್ರತಿಷ್ಠೆ, ತುಲಾಭಾರ, ಶೇಷ ಸೇವೆ, ಕಾರ್ತಿಕ ಪೂಜೆ, ಉಳಿದಂತೆ ಮಹಾಪೂಜೆ, ಮಹಾಭಿಷೇಕ ಮತ್ತಿತರ ಸೇವೆಗಳು ಬಹಳಷ್ಟು ನೆರವೇರಿದೆ.
ಕಳೆದ ಮೂರು ದಿನಗಳಲ್ಲಿ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಭೋಜನ ಸ್ವೀಕರಿಸಿದರು. ದಾಖಲೆ ಪ್ರಮಾಣದಲ್ಲಿ ಜನರು ಸೇರಿದ್ದರೂ ಕೂಡ ದೇಗುಲದ ವತಿಯಿಂದ ವ್ಯವಸ್ಥಿತವಾಗಿ ಪ್ರಸಾದ ಹಾಗೂ ಭೋಜನ ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಭಕ್ತರಿಗೆ ಆದಿಸುಬ್ರಹ್ಮಣ್ಯ ಹಾಗೂ ದೇಗುಲದ ಷಣ್ಮುಖ ಭೋಜನಾ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.