ಮನೆಯ ಮುಂದೆ ಮೊಳೆ ಚುಚ್ಚಿದ ಸೌತೆಕಾಯಿ ವಾಮಾಚಾರದ ಶಂಕೆ
Team Udayavani, Aug 7, 2017, 8:35 AM IST
ಕಡಬ: ನೂಜಿಬಾಳ್ತಿಲದ ಕಲ್ಲುಗುಡ್ಡೆ ನಿವಾಸಿ ಪತ್ರಕರ್ತ ಖಾದರ್ ಸಾಹೇಬ್ ಅವರ ಮನೆಯ ಮುಂದೆ ರವಿವಾರ ಬೆಳಗ್ಗೆ ಕಬ್ಬಿಣದ ಮೊಳೆ ಚುಚ್ಚಿದ ಸೌತೆ ಕಂಡುಬಂದಿದೆ. ಯಾರೋ ವಾಮಾಚಾರ ನಡೆಸಿ ಸೌತೆಕಾಯಿಯನ್ನು ಮನೆಯ ಮುಂದಿರಿಸಿದ್ದಾರೆ ಎಂದು ಖಾದರ್ ಸಾಹೇಬ್ ಅವರ ಪತ್ನಿ ಆಮೀನಾ ಕೆ. ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ರವಿವಾರ ಮುಂಜಾನೆ ಮನೆಯಿಂದ ಹೊರಬಂದ ವೇಳೆ ಶಿಲುಬೆಯಾಕಾರದಲ್ಲಿ ಮೊಳೆ ಚುಚ್ಚಿರುವ ಸೌತೆ ಮನೆಯಂಗಳದಲ್ಲಿ ಕಂಡಿದೆ. ಯಾರೋ ನಮ್ಮ ಮೇಲೆ ವಾಮಾಚಾರ ನಡೆಸಿ ಸೌತೆಕಾಯಿಯನ್ನು ತಂದು ಮನೆಯ ಮುಂದೆ ಇಟ್ಟಿದ್ದಾರೆ. ನಮಗೂ ನಮ್ಮಿಂದ ಜಮೀನು ಖರೀದಿಸಿರುವ ನಮ್ಮ ನೆರೆಯ ವ್ಯಕ್ತಿಗೂ ಜಾಗದ ತಕರಾರು ಇದ್ದು, ಅವರೇ ಈ ಕೃತ್ಯ ನಡೆಸಿದ್ದಾರೆ ಎಂದು ಆಮೀನಾ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡುವುದಾಗಿ ಅವರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಕಡಬ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.