ಜೀತದಾಳುಗಳಂತೆ ದುಡಿತ ಸಂಕಷ್ಟದಲ್ಲಿದ್ದ 7 ಮಂದಿಯ ರಕ್ಷಣೆ
Team Udayavani, Dec 20, 2019, 5:33 AM IST
ಪುತ್ತೂರು: ಸಕಲೇಶಪುರ ತಾಲೂಕಿನ ಹೊನ್ನೆಹಿತ್ಲುವಿನ ಎಸ್ಟೇಟ್ ಒಂದರಲ್ಲಿ ಜೀತದಾಳುಗಳಂತೆ ನಿಕೃಷ್ಟವಾಗಿ ದುಡಿತಕ್ಕಿದ್ದ ಕಡಬ ತಾಲೂಕಿನ ಏಳು ಮಂದಿಯನ್ನು ಅಲ್ಲಿಂದ ರಕ್ಷಿಸಿ ಕರೆತರುವಲ್ಲಿ ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ಮುಖಂಡರು ಯಶಸ್ವಿಯಾಗಿದ್ದಾರೆ.
ಕೋಡಿಂಬಾಳ ಗ್ರಾಮದ ಪಾಜೋವಿನ ಪರಿಶಿಷ್ಟ ಜಾತಿಯ ಈ 7 ಮಂದಿ ಸಕಲೇಶಪುರ ಹೊನ್ನೆಹಿತ್ಲುವಿನ ಎಸ್ಟೇಟ್ ಒಂದರಲ್ಲಿ 2011ರಿಂದೀಚೆಗೆ ಸುಮಾರು 8 ವರ್ಷಗಳಿಂದ ದುಡಿಯುತ್ತಿದ್ದರು. ಎಸ್ಟೇಟ್ ಮಾಲಕ ಅವರಿಗೆ ಸರಿಯಾದ ವೇತನವನ್ನೂ ನೀಡುತ್ತಿರಲಿಲ್ಲ ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದ ದ.ಕ. ಜಿಲ್ಲಾ ದಲಿತ ಸೇವಾ ಸಮಿತಿಯ ನಿಯೋಗವು ಎಸ್ಟೇಟ್ಗೆ ಭೇಟಿ ನೀಡಿ, ಸಕಲೇಶಪುರ ತಾಲೂಕಿನ ಹಿರಿಯ ಕಾರ್ಮಿಕ ಅಧಿಕಾರಿಯ ಮೂಲಕ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಡಿ.17ರಂದು ಸಂತ್ರಸ್ತರನ್ನು ಕರೆತರಲಾಯಿತು.