ಮಳೆಕೊಯ್ಲು ಅಳವಡಿಸಿರುವ ಹಲವೆಡೆ ಧನಾತ್ಮಕ ಪರಿಣಾಮ
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Sep 12, 2019, 5:19 AM IST
ಲಯನ್ಸ್ನಿಂದ ಮಳೆಕೊಯ್ಲು ಮಾಹಿತಿ
ಲಯನ್ಸ್ ಕ್ಲಬ್ ಮಂಗಳೂರು ಮತ್ತು ಲಿಯೋ ಕ್ಲಬ್ ಮಂಗಳೂರು ವತಿಯಿಂದ ಮಳೆಕೊಯ್ಲು ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ಲಯನ್ಸ್ ಸೇವಾ ಮಂದಿರದಲ್ಲಿ ಆಯೋಜಿಸಲಾಯಿತು.
ಸಂಪನ್ಮೂಲ ವ್ಯಕ್ತಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ರಾವ್ ಕಲ್ನಾವಿ ಮಾಹಿತಿ ನೀಡಿ, ಮಳೆಕೊಯ್ಲು ಅಳವಡಿಕೆಯ ಅಗತ್ಯ, ಭವಿಷ್ಯದಲ್ಲಿ ನೀರಿನ ಅಭಾವ ನೀಗಿಸುವಲ್ಲಿ ಮಳೆಕೊಯ್ಲು ಪ್ರಾಮುಖ್ಯತೆ ಮುಂತಾದ ವಿಷಯಗಳಲ್ಲಿ ಮಾಹಿತಿ ನೀಡಿದರು.
ನಿಕಟಪೂರ್ವ ಅಧ್ಯಕ್ಷ ವಿಜಯ ವಿಷ್ಣು ಮಯ್ಯ, ಪ್ರಾಂತೀಯ ಅಧ್ಯಕ್ಷ ವೆಂಕಟೇಶ್ ಎನ್. ಬಾಳಿಗ, ವಲಯಾಧ್ಯಕ್ಷ ಸೈಮನ್ ಲೋಬೋ, ಖಜಾಂಚಿ ನ್ಯಾನ್ಸಿ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ಲಯನ್ ಅಧ್ಯಕ್ಷ ಎಂ. ಶೇಖರ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ವರದರಾಜ್ ಬಾಳಿಗ ವಂದಿಸಿದರು.
ಒಂದೇ ತಿಂಗಳಲ್ಲಿ ನೀರು ಹೆಚ್ಚಳ
ಚಂದ್ರಮೌಳಿ ಶೆಣೈ ಅವರು ರಥಬೀದಿ ಮಾರ್ಕೆಟ್ ರಸ್ತೆಯಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಅಳವಡಿಸಿದ ಒಂದೇ ತಿಂಗಳಲ್ಲಿ ಬಾವಿಯಲ್ಲಿ ನೀರು ಹೆಚ್ಚಾಗಿರುವುದನ್ನು ಗಮನಿಸಿದ್ದಾರೆ.
ಮನೆಯಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಇರಲಿಲ್ಲ. ಆದರೂ ಮುಂದೆ ಸಮಸ್ಯೆ ಬಾರದಿರಲಿ ಎಂಬ ನಿಟ್ಟಿನಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಮನೆಯ ಛಾವಣಿ ನೀರನ್ನು ಹಿಡಿದಿಟ್ಟು ಪೈಪ್ ಮುಖಾಂತರ ಬಾವಿಗೆ ಬಿಡುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. “ಉದಯವಾಣಿ’ಯ ಮನೆಮನೆಗೆ ಮಳೆಕೊಯ್ಲು ಅಭಿಯಾನ ಓದುತ್ತಿದ್ದೆ. ಜಿಲ್ಲಾ ಪಂಚಾಯತ್ನಲ್ಲಿ ನಡೆದ ಕಾರ್ಯಾಗಾರಕ್ಕೂ ಆಗಮಿಸಿದ್ದೆ. ಇದು ಮಳೆಕೊಯ್ಲು ಅಳವಡಿಸಲು ಪೂರಕವಾಯಿತು ಎನ್ನುತ್ತಾರೆ ಚಂದ್ರಮೌಳಿ ಶೆಣೈ.
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳಲ್ಲಿ
ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000