‘ತುಳುನಾಡು ನಾಗದೇವರ ಆವಾಸಸ್ಥಾನ’
Team Udayavani, Jul 8, 2017, 2:30 AM IST
ಬಂಟ್ವಾಳ: ಪರಶುರಾಮ ಸೃಷ್ಟಿಯ ತುಳುನಾಡು ನಾಗದೇವರ ಆವಾಸಸ್ಥಾನ. ಇಲ್ಲಿ ಕೃಷಿ ಭೂಮಿಯ ಸ್ವಲ್ಪ ಸ್ಥಳವನ್ನು ನಾಗನ ಆರಾಧನೆಗೆ ಬಳಸುತ್ತಾರೆ. ಕೃಷಿ ಮಾಡುವ ಸ್ಥಳಕ್ಕೆ ನಾಗನ ಅಭಯ ಇರುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು. ಅವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ದೇವಸ್ಥಾನದ ನಾಗ ಸಾನ್ನಿಧ್ಯ ಪುನಃ ಪ್ರತಿಷ್ಠೆ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ನಾಗದೇವರ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಉದ್ಘಾಟನೆ ನೆರವೇರಿಸಿದರು.
ಕರ್ನಾಟಕ ರಾಜ್ಯ ಧಾರ್ಮಿಕ ಷರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕದತ್ತಿ ಇಲಾಖೆಯು ಜೀರ್ಣವಾಗಿ ಇರುವ ಎಲ್ಲ ದೇವಸ್ಥಾನಗಳ ಮೂಲ ಸೌಕರ್ಯಗಳಿಗೆ ಅನುದಾನ ನೀಡುತ್ತಿದೆ. 33 ಸಾವಿರ ದೇವಸ್ಥಾನಗಳು ಧಾರ್ಮಿಕ ದತ್ತಿ ಇಲಾಖೆಯಡಿ ಬರುತ್ತವೆ. ಉಳಿದ 40 ಸಾವಿರ ದೇವಸ್ಥಾನಗಳು ಖಾಸಗಿ ವ್ಯಕ್ತಿ / ಸಮುದಾಯಗಳ ಆಡಳಿತ ದಲ್ಲಿವೆ. ಆದರೂ ಸರಕಾರ ಅವುಗಳಿಗೂ ಸೂಕ್ತವಾದ ಅನುದಾನ ಒದಗಿಸುವುದಾಗಿ ತಿಳಿಸಿದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳು, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ವೇ|ಮೂ| ಮಹೇಶ್ ಭಟ್, ಮೋಹನದಾಸ ಪೂಜಾರಿ, ಅಣ್ಣು ನಾಯ್ಕ, ಕೆ. ಪ್ರಭಾಕರ ಶೆಟ್ಟಿ, ಎಂಜಿನಿಯರ್ ಸಂತೋಷ್ ಕುಮಾರ್ ಕೊಟ್ಟಿಂಜ ಮತ್ತಿತರರು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ. ಭಂಡಾರಿ ಸ್ವಾಗತಿಸಿದರು. ಸಮಿತಿ ಸದಸ್ಯರಾದ ಗಂಗಾಧರ ಭಟ್ ಕೊಳಕೆ ಪ್ರಸ್ತಾವನೆ ನೀಡಿದರು. ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ ವಂದಿಸಿದರು. ರಮಾ ಎಸ್. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಫಲಮಂತ್ರಾಕ್ಷತೆ ಸ್ವೀಕರಿಸಿದರು.
ಆಡಂಬರಕ್ಕೆ ಅವಕಾಶ ನೀಡದಿರಿ
ಋಷಿಮುನಿಗಳು ತಪಸ್ಸನ್ನು ಆಚರಿಸಿದ ಸ್ಥಳ, ನದಿ ತೀರ, ಸಮುದ್ರ ತಟಗಳು, ಪರ್ವತಗಳ ಶಿಖರಗಳು ದೇವಸಾನ್ನಿಧ್ಯ ಹೊಂದಿವೆ. ಧಾರ್ಮಿಕ ಕೇತ್ರಗಳ ನಾಗ ಸಾನ್ನಿಧ್ಯ ಅಭಿವೃದ್ಧಿಪಡಿಸಿದಾಗ ಕ್ಷೇತ್ರವು ಅಭಿವೃದ್ಧಿಯಾಗುತ್ತದೆ. ನಂಬಿಕೆಗಳು ಫಲ ನೀಡಬೇಕಾದರೆ ಶ್ರದ್ಧಾ ಕೇಂದ್ರಗಳು ಅಭಿವೃದ್ಧಿಯಾಗಬೇಕು. ಇದರಲ್ಲಿ ಆಡಂಬರಕ್ಕೆ ಅವಕಾಶ ನೀಡಬಾರದು. ಬಡವನೊಬ್ಬ ಸರಳವಾಗಿ ನೀಡುವ ಕಿಂಚಿತ್ ಸೇವೆಗೂ ಭಗವಂತನ ಅನುಗ್ರಹ ದೊರೆಯುತ್ತದೆ.
– ಸುಬ್ರಹ್ಮಣ್ಯ ಶ್ರೀ