ವೇತನ ಹೆಚ್ಚಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ
Team Udayavani, Feb 18, 2018, 4:05 PM IST
ನಗರ: ರಾಜ್ಯ ಸರಕಾರ ಮಂಡಿಸಿದ ಬಜೆಟ್ನಲ್ಲಿ ಅಕ್ಷರ ದಾಸೋಹ ನೌಕರರಿಗೆ ಸಂಬಳ ಹೆಚ್ಚಿಸುವ ಕುರಿತು ನೀಡಲಾಗಿದ್ದ ಭರವಸೆಯು ಹುಸಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಕ್ಷರ ದಾಸೋಹ ನೌಕರರಿಗೆ ತತ್ಕ್ಷಣ ಸಂಬಳ ಹೆಚ್ಚು ಮಾಡಬೇಕೆಂದು ಒತ್ತಾಯಿಸಿ ಶನಿವಾರ ಪುತ್ತೂರು ಅಕ್ಷರ ದಾಸೋಹ ನೌಕರರ ಸಂಘದ ವತಿಯಿಂದ ಪುತ್ತೂರು ಸಿಐಟಿಯು ಮುಖಂಡ ಪಿ.ಕೆ. ಸತೀಶನ್ ನೇತೃತ್ವದಲ್ಲಿ ಸಹಾಯಕ ಕಮೀಷನರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಕಳೆದ ವಾರ ನೌಕರರ ಸಂಘಕ್ಕೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಸಂಬಳ ಹೆಚ್ಚಿಸುವ ಕುರಿತು ಭರವಸೆ ನೀಡಿದ್ದರು. ಈ ಕುರಿತು ರಾಜ್ಯ ಬಜೆಟ್ನಲ್ಲಿ ಪ್ರಸ್ತಾಪವಾಗುವ ನಿರೀಕ್ಷೆ ಇತ್ತು. ಆದರೆ ಮುಖ್ಯಮಂತ್ರಿಗಳು ಮಂಡಿಸಿದ ಬಜೆಟ್ನಲ್ಲಿ ಈ ಕುರಿತು ಯಾವುದೇ ಪ್ರಸ್ತಾಪವಾಗದಿರುವುದು ಅಕ್ಷರ ದಾಸೋಹ ನೌಕರರಲ್ಲಿ ಆತಂಕ ಮೂಡುವಂತೆ ಮಾಡಿದೆ. ಈ ನಿಟ್ಟಿನಲ್ಲಿ ನೌಕರರ ಬೇಡಿಕೆಯನ್ನು ಶೀಘ್ರ ಪರಿಗಣಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖೀಸಲಾಗಿದೆ.