Dakshina Kannada ಅಂಗನವಾಡಿಗಳಲ್ಲಿ ಮತ್ತೆ ಅನ್ನ-ಸಾಂಬಾರು?
Team Udayavani, Apr 8, 2024, 7:35 AM IST
ಮಂಗಳೂರು: ಸರಕಾರದ ಹೊಸ ಆಹಾರ ಪಟ್ಟಿಯಂತೆ ಅಂಗನವಾಡಿಗಳಿಗೆ ಮಕ್ಕಳಿಗೆ ಗೋಧಿ ಉಪ್ಪಿಟ್ಟು ಮತ್ತು ಸಿಹಿ ಪೊಂಗಲ್ ನೀಡಲಾಗುತ್ತಿದ್ದು, ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತ ವಾಗಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಿಂದ ಜಿಲ್ಲೆಯಲ್ಲಿ ಮತ್ತೆ ಅನ್ನ – ಸಾಂಬಾರು ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ.
ಈ ಬಗ್ಗೆ ಅನುಮತಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದು, ಸರಕಾರದಿಂದಲೂ ಪೂರಕ ಸ್ಪಂದನೆ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಆದ್ದರಿಂದ ಜಿಲ್ಲೆಯಲ್ಲಿ ಈ ಹಿಂದೆ ಮಕ್ಕಳಿಗೆ ನೀಡುತ್ತಿದ್ದಂತೆ ಮುಂದಿನ ತಿಂಗಳಿಂದಲೇ ಉಪ್ಪಿಟ್ಟು – ಸಿಹಿ ಪೊಂಗಲ್ ಬದಲಿಗೆ ಅನ್ನ ಸಾಂಬಾರು ನೀಡಲಾಗುವುದು ಎಂದು ಇಲಾಖೆಯ ಅಧಿಕಾರಿ ಗಳು ತಿಳಿಸಿದ್ದಾರೆ. ಅಕ್ಕಿ, ಬೇಳೆ ಮತ್ತು ದಿನಸಿ ಸಾಮಗ್ರಿ
ಗಳನ್ನು ಪೂರೈಸುವಂತೆಯೂ ಸರಕಾರಕ್ಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹೊಸ ಮೆನುವಿನ ಪ್ರಕಾರ ಮಕ್ಕಳಿಗೆ ಗೋಧಿ ಉಪ್ಪಿಟ್ಟು ಮತ್ತು ಸಿಹಿ ಪೊಂಗಲ್ ನೀಡಲು ಆರಂಭಿಸಿ ಸುಮಾರು ಎರಡು ತಿಂಗಳಾಗಿದೆ. ಆದರೆ ಇದಕ್ಕೆ ಮಕ್ಕಳು ಅದಕ್ಕೆ ಒಗ್ಗಿಕೊಳ್ಳುತ್ತಿಲ್ಲ. ಊಟಕ್ಕೆ ಅನ್ನ-ಸಾಂಬಾರು ನೀಡುತ್ತಿದ್ದಾಗ ಎಲ್ಲರೂ ಸಂತೋಷದಿಂದ ಊಟ ಮಾಡುತ್ತಿದ್ದರು ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರ ಮಾತು. ಹೊಸ ಮೆನುವಿನಂತೆ ತಿಂಗಳಲ್ಲಿ 15 ದಿನ ಉಪ್ಪಿಟ್ಟು ಮತ್ತು 10 ದಿನ ಸಿಹಿ ಪೊಂಗಲ್ ನೀಡಲಾಗುತ್ತಿದೆ.
ಉಡುಪಿಯಲ್ಲಿ ಸಮಸ್ಯೆ ಆಗಿರಲಿಲ್ಲ
ಹೊಸ ಮೆನು ಬಂದಿತ್ತಾದರೂ ಉಡುಪಿ ಜಿಲ್ಲೆಯಲ್ಲಿ ಅಕ್ಕಿ ದಾಸ್ತಾನು ಇದ್ದ ಕಾರಣ ಮಕ್ಕಳಿಗೆ ಈವರೆಗೂ ನ್ನ – ಸಾಂಬಾರನ್ನೇ ನೀಡಲಾಗುತ್ತಿತ್ತು. ಅಕ್ಕಿ ಪೂರೈಕೆಯಲ್ಲಿ ಯಾವುದೇ ಕೊರತೆ ಆಗಿರಲಿಲ್ಲ. ಈಗ ಮತ್ತೆ ಅಕ್ಕಿ ಪೂರೈಕೆಯಾಗಿದೆ. ಆದ ಕಾರಣ ಜಿಲ್ಲೆಯ ಅಂಗನವಾಡಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ ಎಂದು ಉಡುಪಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಶ್ಯಾಮಲಾ ತಿಳಿಸಿದ್ದಾರೆ.
ಉದಯವಾಣಿ ವರದಿ
ಹೊಸ ಮೆನುವಿನಂತೆ ತಯಾರಿಸಿ ನೀಡುವ ಆಹಾರವನ್ನು ಕರಾವಳಿಯ ಮಕ್ಕಳಿಗೆ ಒಗ್ಗದಿರುವ ಬಗ್ಗೆ ಉದಯವಾಣಿಯು ಮಾ. 22ರಂದು “ಅಂಗನವಾಡಿ ಆಹಾರದ ಹೊಸ ಮೆನುವಿನಲ್ಲಿ ಅನ್ನ ನಾಪತ್ತೆ; ಒಗ್ಗದ ಹೊಸ ಆಹಾರ: ಕಿಚಡಿಗೆ ಮುಖ ಕಿವುಚುವ ಪುಟಾಣಿಗಳು’ ತಲೆಬರಹದಲ್ಲಿ ಮಾ. 22ರಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು.