ಅರಂತೋಡು – ತೊಡಿಕಾನ ರಸ್ತೆ ಕುಸಿಯುವ ಭೀತಿ
Team Udayavani, Aug 13, 2017, 1:37 PM IST
ಬೆಳ್ಳಾರೆ: ಸುಳ್ಯ ತಾಲೂಕಿನ ಅರಂತೋಡು – ತೊಡಿಕಾನ ರಸ್ತೆಯ ತೊಡಿಕಾನ ಕಲ್ಲಂಬಳದಲ್ಲಿ ಮೋರಿ ಬದಿ ಕುಸಿದು ರಸ್ತೆ ಸಂಪರ್ಕ ಕಡಿತಕೊಳ್ಳುವ ಭೀತಿ ಎದುರಾಗಿದೆ. ಈ ರಸ್ತೆ ತೊಡಿಕಾನ ಗ್ರಾಮ ಸಂಪರ್ಕದ ಮುಖ್ಯ ರಸ್ತೆಯಾಗಿದೆ. ಸುಮಾರು 200ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುತ್ತದೆ.
ಸುಮಾರು ಮೂರು ವರ್ಷಗಳ ಹಿಂದೆ ನಬಾರ್ಡ್ ಯೋಜನೆಯಡಿ ಅರಂತೋಡು- ತೊಡಿಕಾನ ರಸ್ತೆ ಮರುಡಾಮರು ಹಾಕಲಾಗಿತ್ತು. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಹಳೆಯ ಮೋರಿಯನ್ನು ಬದಲಾಯಿಸದೆ ಅದರ ಮೇಲೆ ಡಾಮರು ಹಾಕಿದ್ದ ಪರಿಣಾಮ ಈಗ ಮೋರಿ ಕುಸಿತಗೊಂಡಿದೆ ಎಂಬುದು ಸ್ಥಳೀಯರು ಆರೋಪ.
ಶೀಘ್ರ ದುರಸ್ತಿಗೆ ಆಗ್ರಹ
ಈ ರಸ್ತೆ ತೊಡಿಕಾನದ ಅತೀ ಪುರಾತನ ಶ್ರೀ ಮಲ್ಲಿಕಾರ್ಜುನ ದೇವಾಲಯವನ್ನು ಸಂಪರ್ಕಿಸುತ್ತದೆ. ನಿತ್ಯ ದೇವಾಲಯಕ್ಕೆ ನೂರಾರು ಭಕ್ತರು ಭೇಟಿ ನೀಡುತ್ತಿದ್ದಾರೆ. ಅಲ್ಲದೆ ದೇವಾಲಯದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಿಗೆ ಸಾವಿರಾರು ಭಕ್ತರು ಬರುತ್ತಾರೆ. ತೊಡಿಕಾನಕ್ಕೆ ಸುಳ್ಯ ತಾಲೂಕು ಕೇಂದ್ರದಿಂದ ಪ್ರತಿ ಗಂಟೆಗೆ ಒಂದು ಖಾಸಗಿ ಬಸ್ ಸಂಚಾರ ಇದೆ. ಅಲ್ಲದೆ ತೊಡಿಕಾನದಿಂದ ಅನೇಕ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ. ಕಳೆದ ವರ್ಷವೇ ಈ ರಸ್ತೆಯ ಮೋರಿ ಕುಸಿದಿದ್ದು ತತ್ಕ್ಷಣ ದುರಸ್ತಿ ಕೈಗೊಳ್ಳದಿದ್ದರೆ ರಸ್ತೆ ಸಂಪೂರ್ಣ ಸಂಪರ್ಕ ಕಡಿತಕೊಳ್ಳುವ ಸಾಧ್ಯತೆ.
ಇದರಿಂದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಹಾಗೂ ಪ್ರವಾಸಿ ಪ್ರೇಮಿಗಳಿಗೆ, ಶಾಲಾ ಮಕ್ಕಳು, ಊರವರು ಸಮಸ್ಯೆಗೊಳಾಗಾಗುವರು. ಆದ್ದರಿಂದ ದುರಸ್ತಿ ಕಾರ್ಯವನ್ನು ಶೀಘ್ರ ಕೈಗೆತ್ತಿಕೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಂಪೂರ್ಣವಾಗಿ ಕುಸಿತಗೊಂಡರೆ ಜನರಿಗೆ ಸಮಸ್ಯೆಯಾಗಲಿದೆ. ಸಂಬಂಧಪಟ್ಟವರು ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸ್ಥಳೀಯರಾದ ಜಯಪ್ರಕಾಶ್ ಪ್ರತಿಕ್ರಿಯಿಸಿದ್ದಾರೆ.
ದುರಸ್ತಿಗೆ ಒತ್ತಾಯಿಸುತ್ತೇವೆ
ಈ ಬಗ್ಗೆ ಗ್ರಾಮ ಪಂಚಾಯತ್ ವತಿಯಿಂದ ಪತ್ರ ಬರೆದು ರಸ್ತೆಯನ್ನು ದುರಸ್ತಿ ಮಾಡುವಂತೆ ಸಂಬಂಧಪಟ್ಟವರಿಗೆ ಒತ್ತಾಯಿಸುವುದಾಗಿ ಆರಂತೋಡು ಗ್ರಾ.ಪಂ. ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ ತಿಳಿಸಿದ್ದಾರೆ.
– ತೇಜೇಶ್ವರ್ ಕುಂದಲ್ಪಾಡಿ