ಸೆ. 25ರಂದು ಹೆಲ್ತ್ ಕೌಂಟಿ ರೆಸಾರ್ಟ್ಸ್ ಉದ್ಘಾಟನೆ
Team Udayavani, Sep 24, 2017, 3:17 PM IST
ಮಂಗಳೂರು : ಶ್ರೀಕೃಷ್ಣ ಗ್ರೂಪ್ನ ಪ್ರವರ್ತನೆಯಲ್ಲಿ ಓಶಿಯನ್ ಪರ್ಲ್ ಸಂಸ್ಥೆ ಪ್ರಗತಿ ಪಾಲುದಾರರಾಗಿ ಹುಬ್ಬಳ್ಳಿ- ಧಾರವಾಡ ಅವಳಿ ನಗರಕ್ಕೆ ಹೆಲ್ತ್ ಕೌಂಟಿ ರೆಸಾರ್ಟ್ಸ್ ಪ್ರೈ. ಲಿ. ಸಂಸ್ಥೆಯ ಹಾಸ್ಪಿಟಾಲಿಟಿ ಸೇವೆ ಲಭ್ಯವಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಸಂಜೀವಿನಿ ಪಾರ್ಕ್ ಎದುರು ಈ ರೆಸಾರ್ಟ್ಸ್ ಆ್ಯಂಡ್ ಸ್ಪಾ ಸಂಸ್ಥೆಯನ್ನು ಸೆ. 25ರ ಸಂಜೆ 5.30ಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಉದ್ಘಾಟಿಸಲಿದ್ದಾರೆ.
‘ಈ ರೆಸಾರ್ಟ್ಸ್ ಅವಳಿ ನಗರದ ಹೃದಯ ಭಾಗದಲ್ಲೇ ಪ್ರಥಮವಾಗಿ 5.5 ಎಕರೆಯಷ್ಟು ವಿಸ್ತಾರವಾದ ಜಮೀನಿನಲ್ಲಿ ನಿರ್ಮಾಣವಾಗಿದೆ. ಇಲ್ಲಿ ನಿಸರ್ಗ ಸೌಂದರ್ಯವನ್ನು ಸ್ಥಳೀಯ ಸಂಸ್ಕೃತಿಯ ಜತೆ ಬೆಸೆಯಲಾಗಿದೆ. ಅತಿಥಿಗಳಿಗೆ ಲಕ್ಸುರಿ ಮತ್ತು ಆರೋಗ್ಯಪೂರ್ಣ ಸೇವೆ ನೀಡಲಾಗುತ್ತದೆ’ ಎಂದು ಶ್ರೀಕೃಷ್ಣ ಮಿಲ್ಕ್ ಪ್ರೈ. ಲಿ. ಸಂಸ್ಥೆಯ ಅಧ್ಯಕ್ಷ ದಿನೇಶ್
ಆರ್. ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬೆಂಗಳೂರು-ಗೋವಾ ನಡುವೆ ಈ ರೆಸಾರ್ಟ್ಸ್ ಇದೆ. ಈ ನಗರವು 10 ಲಕ್ಷಕ್ಕೂ ಮಿಕ್ಕಿ ಜನಸಂಖ್ಯೆ ಹೊಂದಿದೆ. ಕ್ಷಿಪ್ರವಾಗಿ ಬೆಳೆಯುತ್ತಿದೆ. ಚಾರಿತ್ರಿಕ ಹಂಪೆ ಸಮೀಪದಲ್ಲಿದೆ. ಹಾಸ್ಪಿಟಾಲಿಟಿ ಉದ್ಯಮಕ್ಕೆ ಕೌಂಟಿ ರೆಸಾರ್ಟ್ಸ್ ಅಪೂರ್ವ ಕೊಡುಗೆ ನೀಡಲಿದೆ. ಹೊಟೇಲ್ ಉದ್ಯಮದಲ್ಲಿ ಬ್ರ್ಯಾಂಡ್ ಆಗಿ ಪ್ರಸಿದ್ಧವಾಗಿರುವ ದಿ ಓಶಿಯನ್ ಪರ್ಲ್ ಪ್ರಗತಿ ಪಾಲುದಾರರಾಗಿದ್ದಾರೆ’ ಎಂದವರು ವಿವರಿಸಿದರು.
ಅತ್ಯಾಧುನಿಕ ಸೌಲಭ್ಯ
‘ಈ ರೆಸಾರ್ಟ್ನಲ್ಲಿ 32 ಕಾಟೇಜ್ಗಳು, ಸ್ಯೂಟ್ಗಳು, ಪ್ರೀಮಿಯಂ ರೂಮ್ಸ್, ಫ್ಯಾಮಿಲಿ ರೂಮ್ಸ್, ಸ್ಟಾಂಡರ್ಡ್ ರೂಮ್ಸ್ ಇದೆ. ಶುಭ ಸಮಾರಂಭ- ಸಭೆಗಳಿಗಾಗಿ ಹುಬ್ಬಳ್ಳಿಯು ಈ ಮೂಲಕ ಆಕರ್ಷಕ ಲಾನ್ ಸೌಲಭ್ಯ ಹೊಂದಲಿದೆ’ ಎಂದು ಓಶಿಯನ್ ಪರ್ಲ್ನ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಹೇಳಿದರು.
ಶ್ರಮಣ್ ರೆಸ್ಟೋರೆಂಟ್ ಪ್ರಾಂತ ದಲ್ಲಿ ಪ್ರಥಮವಾಗಿ ಸಸ್ಯಾಹಾರಿ ಮಾರ್ವಾಡಿ ರೆಸ್ಟೋರೆಂಟ್, ಕೋರಲ್ ಮತ್ತು ಜಾಝ್ ಲೌಂಜ್ ಬಾರ್ ಗಳೆಂಬ ಮೂರು ರೆಸ್ಟೋರೆಂಟ್ಗಳಿರುತ್ತವೆ. ಓಪನ್ ಏರ್ ಆ್ಯಂಫಿ ಥಿಯೇಟರ್, ಈಜುಕೊಳ ನಿರ್ಮಾಣ ವಾಗಲಿದೆ. ಇದು ಹೆಲ್ತ್ಸ್ಪಾ, ಜಿಮ್ ಸಹಿತವಾಗಿರುತ್ತದೆ. ಇಲ್ಲಿನ ಸರ್ವ ಸೌಲಭ್ಯ, ಸ್ಥಳಾವಕಾಶವನ್ನು ಸರ್ವ ಸಮಾರಂಭಗಳಿಗೆ ಬಳಸಬಹುದಾಗಿದೆ. ಹಾಂಗ್ಯೋ ಐಸ್ಕ್ರೀಮ್ಸ್ನ ಉಪಾಧ್ಯಕ್ಷ ಬ್ರಿಯಾನ್ ಡಿ’ಸೋಜಾ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಡಾ| ವಿಜಯ್ ಸಂಕೇಶ್ವರ, ಅರವಿಂದ ಬೆಲ್ಲದ್, ಪ್ರದೀಪ್ ಶೆಟ್ಟರ್, ರಾಮ್ದಾಸ್ ಕಾಮತ್, ಜಯರಾಮ್ ಬನಾನ್, ಆರ್.ಆರ್. ಕಾಮತ್, ಫಯಾಜ್ ಅಹ್ಮದ್ ಭಲ್ಲಿ, ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿಗಳಾಗಿರುತ್ತಾರೆ.
ಶ್ರೀಕೃಷ್ಣ ಗ್ರೂಪ್ ಕರ್ನಾಟಕದ ಡೈರಿ ಕ್ಷೇತ್ರದಲ್ಲಿ ಮುಂಚೂಣಿಯ ಸಂಸ್ಥೆಯಾಗಿದೆ. ಅದರ ಹಾಂಗ್ಯೋ ಐಸ್ಕ್ರೀಮ್ಸ್ ಏಳು ರಾಜ್ಯಗಳಲ್ಲಿ ಜನಪ್ರಿಯ ಅಸ್ತಿತ್ವ ಹೊಂದಿದೆ. ಓಶಿಯನ್ ಪರ್ಲ್ ಗ್ರೂಪ್ ದಿಲ್ಲಿ ಸಹಿತ ಉತ್ತರ ಭಾರತದಲ್ಲಿ ಅಪಾರ ಜನಪ್ರಿಯವಾಗಿದ್ದು, ಕರ್ನಾಟಕ ಕರಾವಳಿಯ ಮಂಗಳೂರು, ಉಡುಪಿಗಳಲ್ಲೂ ಯಶಸ್ವಿಯಾಗಿ ಕಾರ್ಯನಿರತವಾಗಿದೆ.