![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ವಿಐಪಿ ಜತೆ ಸೆಲ್ಫಿ: ಗನ್ಮ್ಯಾನ್ ಅಮಾನತು
Team Udayavani, Jul 8, 2018, 6:00 AM IST
![v-29.jpg](https://www.udayavani.com/wp-content/uploads/2018/07/8/v-29.jpg)
ಮಂಗಳೂರು: ಬಿಜೆಪಿ ಅಲ್ಪಸಂಖ್ಯಾಕ ಮೋರ್ಚಾ ನಾಯಕ ರಹೀಂ ಉಚ್ಚಿಲ್ ಅವರ ಗನ್ ಮ್ಯಾನ್ ಮಲ್ಲಿಕಾರ್ಜುನ ಅವರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಟಿ.ಕೆ. ಸುರೇಶ್ ಅವರು ಆದೇಶ ಹೊರಡಿಸಿದ್ದಾರೆ. ವಿಐಪಿ ಜತೆ ಫೋಟೊ ಮತ್ತು ಸೆಲ್ಫಿ ತೆಗೆಸಿಕೊಂಡಿರುವುದು ಮತ್ತು ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಹಾಕಿರುವುದು ಹಾಗೂ ಮೇಲಧಿಕಾರಿಗಳಿಗೆ ತಿಳಿಸದೆ ಅರ್ಜಿಯನ್ನೂ ಸಲ್ಲಿಸದೆ ರಜೆಯಲ್ಲಿ ಹೋದ ಆರೋಪದ ಮೇಲೆ ಈ ಕ್ರಮ ಜರಗಿಸಲಾಗಿದೆ.
ಘಟನೆ ವಿವರ
ರಹೀಂ ಉಚ್ಚಿಲ್ ಕಳೆದ ಜೂ.23 ರಂದು ದುಬಾೖಗೆ ತೆರಳುವ ಸಂದರ್ಭದಲ್ಲಿ ಗನ್ಮ್ಯಾನ್ ಜತೆ ನಿಂತು ಫೋಟೊ ತೆಗೆಸಿಕೊಂಡಿದ್ದರು. ಬಳಿಕ ಅದಕ್ಕೆ ಶೀರ್ಷಿಕೆ ಸೇರಿಸಿ, ತಾನು ದುಬಾೖಗೆ ಹೋಗುವುದಾಗಿ ಫೇಸ್ ಬುಕ್ನಲ್ಲಿ ಫೋಟೊಗಳನ್ನು ಅಪ್ಲೋಡ್ ಮಾಡಿದ್ದರು. ಬಳಿಕ ಗನ್ಮ್ಯಾನ್ ಸಶಸ್ತ್ರ ಮೀಸಲು ಪಡೆಗೆ ತನ್ನ ಗನ್ ಒಪ್ಪಿಸಿ, ಯಾರಲ್ಲೂ ಹೇಳದೆ ಕೇಳದೆ ಊರಿಗೆ ಹೋಗಿದ್ದರು. ರಜೆ ಅರ್ಜಿಯನ್ನು ಕೂಡ ನೀಡಿರಲಿಲ್ಲ.
ಇದು ಮೇಲಧಿಕಾರಿಗಳ ಗಮನಕ್ಕೆ ಬಂದು ಗನ್ ಮ್ಯಾನ್ ಮಲ್ಲಿಕಾರ್ಜುನ ಅವರನ್ನು ವಿಚಾರಿಸಿದ್ದರು. ಆಗ ತಾನು ರಹೀಂ ಉಚ್ಚಿಲ್ ಅವರ ಜತೆ ಉಡುಪಿಯಲ್ಲಿ ಇರುವುದಾಗಿ ಗನ್ ಮ್ಯಾನ್ ಹೇಳಿದ್ದರು. ಆದರೆ ವಿದೇಶಕ್ಕೆ ತೆರಳಿದ್ದ ಫೋಟೊವನ್ನು ರಹೀಂ ಉಚ್ಚಿಲ್ ಫೇಸ್ ಬುಕ್ನಲ್ಲಿ ಹಾಕಿದ್ದನ್ನು ಗಮನಿಸಿದ ಪೊಲೀಸರು ಗನ್ ಮ್ಯಾನ್ ಸುಳ್ಳು ಹೇಳುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ಭದ್ರತಾ ನಿಯಮದ ಪ್ರಕಾರ ಅಂಗರಕ್ಷಕರು ಈ ರೀತಿ ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತಿಲ್ಲ. ಈ ಬಗ್ಗೆ ನಗರ ಸಶಸ್ತ್ರ ಮೀಸಲು ಪಡೆಯ ಎಸಿಪಿ ಅವರಿಗೆ ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಬಳಿಕ ಅಮಾನತು ಆದೇಶ ಹೊರಡಿಸಲಾಗಿದೆ.
2012 ರಿಂದ ರಹಿಂಗೆ ಗನ್ ಮ್ಯಾನ್
ರಹೀಂ ಉಚ್ಚಿಲ್ ಅವರು ಬ್ಯಾರಿ ಅಕಾಡೆಮಿ ಅಧ್ಯಕ್ಷರಾಗಿದ್ದಾಗ 2012 ಮಾರ್ಚ್ 15 ರಂದು ಅಕಾಡೆಮಿ ಕಚೇರಿಯಲ್ಲಿಯೇ ಅವರನ್ನು ಕೊಲೆ ಮಾಡಲು ಯತ್ನ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರೆಟ್ ವತಿಯಿಂದ ರಕ್ಷಣೆಗೆ ಗನ್ ಮ್ಯಾನ್ ಸೌಲಭ್ಯ ಒದಗಿಸಲಾಗಿತ್ತು. ಮಲ್ಲಿಕಾರ್ಜುನ ಅವರು ಗನ್ ಮ್ಯಾನ್ ಆಗಿ ನೇಮಕಗೊಂಡಿದ್ದರು.
ನಿಯಮ ಉಲ್ಲಂಘನೆಗಾಗಿ ಅಮಾನತು:ಕಮಿಷನರ್
ಗನ್ ಮ್ಯಾನ್ ವ್ಯವಸ್ಥೆಗೆ ಸಂಬಂಧಿಸಿ ಅದರದೇ ಆದ ನಿಯಮಾವಳಿಗಳಿವೆ. ಅದರಂತೆ ಅವರು ವಿಐಪಿಗಳ ಜತೆ ಫೋಟೊ ತೆಗೆಸಿಕೊಳ್ಳುವಂತಿಲ್ಲ ಮತ್ತು ಅದನ್ನು ಜಾಲತಾಣಗಳಲ್ಲಿ ಹಾಕುವಂತಿಲ್ಲ. ನಿಯಮ ಉಲ್ಲಂಘನೆಯ ಜತೆಗೆ ಮೇಲ ಧಿಕಾರಿಗಳ ಅನುಮತಿ ಪಡೆಯದೆ ರಜೆ ಹಾಕಿರುವ ಕಾರಣ ಅಮಾನತು ಮಾಡಲಾಗಿದೆ. ರಹೀಂ ಉಚ್ಚಿಲ್ ಅವರಿಗೆ ಬೇರೆ ಗನ್ಮ್ಯಾನ್ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.