20 ತಾಸಿನ ಬಳಿಕ ಶರತ್ ಸಾವಿನ ಘೋಷಣೆ !
Team Udayavani, Jul 13, 2017, 3:50 AM IST
ಮಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ಶರತ್ ಸಾವಿನ ಸುದ್ದಿಯನ್ನು ಮೃತಪಟ್ಟು ಸುಮಾರು 20 ಗಂಟೆ ತಡವಾಗಿ ವೈದ್ಯರು ಘೋಷಣೆ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಶರತ್ ಮೃತಪಟ್ಟಿರುವ ಆಸ್ಪತ್ರೆ ವೈದ್ಯರು ದೃಢೀಕರಿಸಿರುವ ಮರಣ ವರದಿ (Death Report) ಇದೀಗ ಬಹಿರಂಗಗೊಂಡಿದ್ದು, ಜು. 6ರಂದು ಮಧ್ಯರಾತ್ರಿ 12.30ಕ್ಕೆ (ಜು. 7) ಮೃತಪಟ್ಟಿರುವುದಾಗಿ ಉಲ್ಲೇಖೀಸಲಾಗಿದೆ. ಆದರೆ ಜು. 7ರಂದು ರಾತ್ರಿ 8.30ಕ್ಕೆ ಘೋಷಣೆ ಮಾಡಿದ್ದರು.
ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶರತ್ ಅವರ ಡೆತ್ ರಿಪೋರ್ಟ್.
ಜು. 7ರಂದು ಸಂಜೆ ಮಂಗಳೂರು ಸಮೀಪ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆದಿದ್ದು, ಮುಖ್ಯಮಂತ್ರಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಕ್ತಾಯದ ಬಳಿಕ ಶರತ್ ಸಾವಿನ ಘೋಷಣೆ ಮಾಡಲಾಯಿತು. ಮುಖ್ಯಮಂತ್ರಿಆಗಮನದ ಕಾರಣಕ್ಕೆ ಈ ವಿಚಾರವನ್ನು ಮುಚ್ಚಿಡಲಾಗಿತ್ತು ಎಂದು ವಿಪಕ್ಷ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆರೋಪ ಮಾಡಿದ್ದವು.
ಈಡೇರದ ಕೊನೆಯಾಸೆ: ಶರತ್ ಅವರು ನೇತ್ರದಾನ ಸಂಕಲ್ಪ ಮಾಡಿದ್ದರು. ಮೃತಪಟ್ಟ ಕೂಡಲೇ ವೈದ್ಯರು ಘೋಷಿಸಿದ್ದರೆ ನೇತ್ರದಾನ ಮಾಡಬಹುದಾಗಿತ್ತು. ಆದರೆ ವಿಳಂಬವಾದ ಕಾರಣ ಆಸೆ ಈಡೇರಿಸಲಾಗಲಿಲ್ಲ ಎನ್ನಲಾಗಿದೆ.