ಶಿಲ್ಪಿಗಳಿಗೆ ಹಕ್ಕುಬದ್ಧ ಗೌರವ ಸಿಗಲಿ: ದಾಮೋದರ ಶರ್ಮಾ
Team Udayavani, Apr 15, 2019, 6:42 AM IST
ಮೂಡುಬಿದಿರೆ: ದೇವಾಲಯ, ಮನೆ ನಿರ್ಮಿಸಿದ ಬಳಿಕ ಯಜಮಾನರಿಗೆ ಬಿಟ್ಟುಕೊಡಬೇಕಾದವರು ಶಿಲ್ಪಿಗಳೇ ಹೊರತು ಇತರರಲ್ಲ. ಆದರೆ, ಒಂದೆಡೆ ದಬ್ಟಾಳಿಕೆ, ಇನ್ನೊಂದೆಡೆ ಅಧ್ಯಯನ ಶೀಲತೆಯ ಕೊರತೆಯಿಂದ ಶಿಲ್ಪಿಗಳಿಗೆ ಸಲ್ಲಬೇಕಾದ ಗೌರವ ಹಕ್ಕು ಬದ್ಧವಾಗಿ ಪ್ರಾಪ್ತಿಯಾಗುತ್ತಿಲ್ಲ ಎಂದು ಬಾರಕೂರು ದಾಮೋದರ ಶರ್ಮಾ ವಿಷಾದಿಸಿದರು.
ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ 36 ಗ್ರಾಮ ಕೂಡುವಳಿಕೆಗಳ ವ್ಯಾಪ್ತಿಯನ್ನು ಹೊಂದಿರುವ ಶ್ರೀಗುರು ಕಾಷ್ಠ ಶಿಲ್ಪ ಸಮಿತಿಯ ಉದ್ಘಾಟನ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಯಾವ ಕೆಲಸವೂ ಸಣ್ಣದಲ್ಲ, ನಮ್ಮ ನಮ್ಮ ಪಾಲಿಗೆ ಬಂದ ಕರ್ಮವನ್ನು ಶ್ರದ್ಧೆಯಿಂದ ನಡೆಸೋಣ; ಪಂಚಕಸುಬುಗಳ ಮಂದಿ ಪಾರಸ್ಪರಿಕವಾಗಿ ಉತ್ತಮ ಬಾಂಧವ್ಯ ವಿರಿಸಿಕೊಳ್ಳೋಣ. ಅನ್ಯ ಎಲ್ಲ ಬಗೆಯ ವೃತ್ತಿಯವರನ್ನೂ ಪ್ರೀತಿಸೋಣ, ಗೌರವಿಸೋಣ, ಆದರೆ, ನಮ್ಮತನ, ಪರಂಪರೆಯನ್ನು ತಿಳಿದು ಅದನ್ನು ಬಿಟ್ಟುಕೊಡದಿರೋಣ ಎಂದರು.
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಕಾಷ್ಠ ಸಮಿತಿಯು ಶ್ರೀಗುರು ದಾರು ಶಿಲ್ಪ ಸಮಿತಿಯಾಗಿ ಮಾರ್ಪಾಡಾಗಿದ್ದು ನೂತನ ಸಮಿತಿಯನ್ನು ಕ್ಷೇತ್ರದ ಆಡಳಿತ ಮೊಕ್ತೇಸರ ಎನ್. ಜಯಕರ ಆಚಾರ್ಯ ಅವರು ಉದ್ಘಾಟಿಸಿದರು. “ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ದೇವಸ್ಥಾನದ ಸೇವೆಗಾಗಿ ಹೊಸ ಸಂಘಟನೆ ಸಜ್ಜಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಸೌತ್ಕೆನರಾ ಗೋಲ್ಡ್ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ, ಶಿಕ್ಷಣ ತಜ್ಞ ಬೈಕಾಡಿ ಜನಾರ್ದನ ಆಚಾರ್ ಅವರು ಸಮಿತಿಯ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
ಶಿಲ್ಪಿಗಳು ಕಾಲಕಾಲದ ಬೇಡಿಕೆಗಳಿಗ ನುಸಾರ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಜತೆಗೆ ತಮ್ಮದೇ ಮಾರುಕಟ್ಟೆ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಪರಂಪರಾಗತ ಶಿಲ್ಪಕಾರ್ಯದೊಂದಿಗೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿ, ಕಾಳಿಕಾಂಬಾ ದೇವಸ್ಥಾನದ ಮೂರನೇ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ ಅವರು ಮಾತನಾಡಿ, ಶಿಲ್ಪಕಾರ್ಯದಿಂದ ತೊಡಗಿ ಎಲ್ಲ ನಿರ್ಮಾಣ ಕಾರ್ಯಗಳನ್ನು ಕಾಂಟ್ರಾಕ್ಟ್ ಪದ್ಧತಿಯಿಂದ ಯಾರೋ ಉದ್ಯಮ ಸ್ವರೂಪಿ ವ್ಯಕ್ತಿಗಳು ನಡೆಸುವ ಕೆಟ್ಟ ಬೆಳವಣಿಗೆಗೆ ತಡೆಹಾಕಲೇಬೇಕು’ ಎಂದು ಕರೆ ನೀಡಿದರು.
ಮುಖ್ಯಅತಿಥಿಗಳಾಗಿ ಕಾಳಿಕಾಂಬಾ ದೇವಸ್ಥಾನದ ಎರಡನೇ ಮೊಕ್ತೇಸರ ಉಳಿಯ ಬಾಲಕೃಷ್ಣ ಆಚಾರ್ಯ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಪ್ರಭಾವತಿ ಗೋಪಾಲ ಆಚಾರ್ಯ, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ ಭಾಗವಹಿಸಿ ಶುಭ ಹಾರೈಸಿದರು.
ಸಭಿಕರ ಪರವಾಗಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ, ಮಹಿಳಾ ಸಮಿತಿ ಕಾರ್ಯದರ್ಶಿ ಗೀತಾ ಯೋಗೀಶ ಆಚಾರ್ಯ ಮಾತನಾಡಿದರು.ಶ್ರೀ ಗುರು ಕಾಷ್ಠ ಶಿಲ್ಪ ಸಮಿತಿ ಅಧ್ಯಕ್ಷ ಎಂ.ಎಸ್. ಜಗದೀಶ ಆಚಾರ್ಯ ಸ್ವಾಗತಿಸಿದರು. ಹೊಸ್ಮಾರು ಗಣೇಶ ಆಚಾರ್ಯ ಪ್ರಸ್ತಾವನೆಗೈದರು. ಸಚ್ಚೆರಿಪೇಟೆ ಗಣೇಶ ಆಚಾರ್ಯ , ಪುರೋಹಿತ ಮುನಿಯಾಲು ಪುರಂದರ ಆಚಾರ್ಯ ನಿರೂಪಿಸಿದರು.