ದೇಂದಡ್ಕ ರಸ್ತೆಗೆ ಸಿಗಲಿ ಪರಿಹಾರ
ಒಂದೂವರೆ ಕಿ.ಮೀ. ಉದ್ದದ ರಸ್ತೆ
Team Udayavani, Apr 28, 2019, 6:00 AM IST
ಸಂಪೂರ್ಣವಾಗಿ ಹದಗೆಟ್ಟಿರುವ ದೇಂದಡ್ಕ ರಸ್ತೆ.
ಮೂಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯತ್ಗೆ ವ್ಯಾಪ್ತಿಯ ಕವತ್ತಾರು ಗ್ರಾಮದ ದೇಂದಡ್ಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿ ದ್ದು, ರಸ್ತೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ.
ಸುಮಾರು ಒಂದೂವರೆ ಕಿ.ಮೀ.ಉದ್ದದ ಈ ರಸ್ತೆ ಪ್ರಸಿದ್ಧ ಕ್ಷೇತ್ರ ಕರ್ನಿರೆ, ಕವತ್ತಾರಿನ ದೇಂದಡ್ಕ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕಕ್ಕಿರುವ ರಸ್ತೆಯಾಗಿದೆ. ಪ್ರಸಿದ್ಧ ಕ್ಷೇತ್ರಕ್ಕೆ ದಿನಕ್ಕೆ ಸಾವಿರಾರು ಭಕ್ತರು ಹಾಗೂ ಹೆಚ್ಚಿನ ಜನ ಸಂಚಾರ ಇರುವ ಈ ರಸ್ತೆ ಹದಗೆಟ್ಟಿದ್ದು, ಜನಪ್ರತಿನಿಧಿಗಳು ಇದುವರೆಗೂ ಗಮನಹರಿಸದೇ ಇರು ವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಳೆಗಾಲದ ಆರಂಭವಾಗುವ ಸನಿಹದಲ್ಲಿದ್ದು,ರಸ್ತೆಯಲ್ಲಿ ಹೊಂಡ-ಗುಂಡಿಗಳಿವೆ. ಮಳೆ ಬಂದರೆ ಇಡೀ ರಸ್ತೆ ತುಂಬಾ ನೀರಾಗಿ, ರಿಕ್ಷಾ ಚಾಲಕರೂ, ದ್ವಿಚಕ್ರ ವಾಹನ ಸವಾರರು ಸಂಚಾರಕ್ಕೆ ಹೆದರುವ ಪರಿಸ್ಥಿತಿ ಉಂಟಾಗಬಹುದು. ನಬಾರ್ಡ್ ಅಥವಾ ಪ್ರಧಾನ ಮಂತ್ರಿ ಸಡಕ್ ಯೋಜನೆಯ ಮೂಲಕ ಈ ರಸ್ತೆ ಅಭಿವೃದ್ಧಿಗೆ ಅವಕಾಶ ಇದ್ದು, ಸಂಬಂಧ ಪಟ್ಟ ಇಲಾಖೆಯಿಂದ ಸರ್ವೇ ಮಾಡಲಾಗುತ್ತಿದೆ.
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಯ ಅಭಿವೃದ್ಧಿಯ ಬಗ್ಗೆ ಚಿಂತನೆಗಳು ನಡೆಯುತ್ತಿದ್ದು,ಈಗ ಸರಕಾರದ ವಿವಿಧ ಯೋಜನೆಗಳ ಮೂಲಕ ರಸ್ತೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಸರಕಾರ ಮುಂದಾಗಿದೆ.ಜನರು ತಮ್ಮ ಜಮೀನನ್ನು ರಸ್ತೆ ಗಾಗಿ ಬಿಟ್ಟು ಕೊಟ್ಟಲ್ಲಿ ಅತಿಕಾರಿಬೆಟ್ಟು ಮತ್ತು ಕಾರ್ಕಳ ಹೆದ್ದಾರಿಗೆ ತಲುಪುವ ಪಲಿಮಾರಿಗೆ ಸಂಪರ್ಕ ಪಡೆಯುವ ಪ್ರಯತ್ನ ನಡೆಸುವುದು ಇಲಾಖೆಗೆ ಸಾಧ್ಯವಾಗಲಿದೆ.
ರಸ್ತೆಗಾಗಿ ಜಮೀನು ಅಗತ್ಯ
ಇದೇ ರಸ್ತೆಯ ಮೂಲಕ ಮುಂದಕ್ಕೆ ಸಂಪರ್ಕ ರಸ್ತೆಯಾಗಿ ಮುಂದುವರಿದರೆ ಈ ವ್ಯಾಪ್ತಿಯ ಜನರು ನೇರವಾಗಿ ಅತಿಕಾರಿಬೆಟ್ಟು,ಕೊಪ್ಪಳ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಪಲಿಮಾರಿನತ್ತ ಕ್ಷಣ ಮಾತ್ರದಲ್ಲಿ ತಲುಪಬಹುದಾದ ಸಂಪರ್ಕ ಇಲ್ಲಿ ಸಿಗುವುದು ಸಾಧ್ಯ. ಅಲ್ಲದೆ ರಸ್ತೆಗಾಗಿ ತಮ್ಮ ಜಮೀನನ್ನು ಬಿಟ್ಟು ಕೊಡಲು ಗ್ರಾಮಸ್ಥರು ಕೂಡ ಮುಂದೆ ಬಂದರೆ ಇದು ಜನರಿಗೆ ಅತೀ ಸಮೀ ಪದ ಮೂಲ್ಕಿ ಮತ್ತು ಕಾರ್ಕಳ ಹೆದ್ದಾರಿ ಯನ್ನು ನೇರ ವಾಗಿ ಸಂಪರ್ಕಿಸಬಹುದಾಗಿದೆ.
– ದಿನೇಶ್ ಪುತ್ರನ್
ಅಧ್ಯಕ್ಷರು, ಬಳ್ಕುಂಜೆ ಗ್ರಾಮ ಪಂಚಾಯತ್