ಸುಳ್ಯ ತಾಲೂಕು: ಎಸೆಸೆಲ್ಸಿ ಪರೀಕ್ಷೆಗೆ ಸಕಲ ಸಿದ್ಧತೆ
Team Udayavani, Mar 21, 2017, 3:50 PM IST
ಸುಳ್ಯ : ಎಸೆಸೆಲ್ಸಿ ಪರೀಕ್ಷೆಗಳು ಮಾ. 30ರಿಂದ ಆರಂಭಗೊಳ್ಳಲಿದ್ದು, ವ್ಯವಸ್ಥಿತ ವಾಗಿ ನಡೆಸಲು ಸುಳ್ಯ ತಾಲೂಕಿನಲ್ಲಿ ಸಕಲ ಸಿದ್ಧತೆ ಜರಗುತ್ತಿದೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಮುಖ ಮಾರ್ಗಸೂಚಿಗಳನ್ನು ಕಳುಹಿಸಿದ್ದು, ತಾಲೂಕಿ ನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿವೆ. 2 ಕ್ಲಸ್ಟರ್ ಕೇಂದ್ರಗಳನ್ನು ರಚಿಸಲಾಗಿದ್ದು , ಸುಳ್ಯ ಜೂನಿಯರ್ ಕಾಲೇಜು, ಗಾಂಧಿನಗರ ಸ.ಪ.ಪೂ. ಕಾಲೇಜು, ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶಾರದಾ ಮಹಿಳಾ ಪದವಿಪೂರ್ವ ಕಾಲೇಜು. ಒಂದು ಕ್ಲಸ್ಟರ್ ಆದರೆ ಇನ್ನೊಂದು ಸರಕಾರಿ ಪದವಿಪೂರ್ವ ಕಾಲೇಜು ಬೆಳ್ಳಾರೆ ಹಾಗೂ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಕ್ಲಸ್ಟರ್ ರಹಿತ ಕೇಂದ್ರವಾದ ಕಾರಣ ಈ ಬಾರಿ ಅಲ್ಲಿ ಪರೀಕ್ಷಾ ಕೇಂದ್ರ ತೆರೆದಿಲ್ಲ. ಇಲ್ಲಿನ ವಿದ್ಯಾರ್ಥಿಗಳು ಸುಳ್ಯ ಸೆಂಟರ್ಗೆ ಬಂದು ಪರೀಕ್ಷೆ ಬರೆಯಬೇಕಾಗಿದೆ.
ಸರಕಾರಿ ಶಾಲೆಗಳಲ್ಲಿ 424 ಬಾಲಕರು, 472 ಬಾಲಕಿಯರು, ಒಟ್ಟು 896 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಅನುದಾನಿತ ಶಾಲೆಯ 223 ಬಾಲಕರು. 259 ಬಾಲಕಿ ಯರು, ಒಟ್ಟು 482 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಅನುದಾನ ರಹಿತ ಶಾಲೆಯ 328 ಬಾಲಕರು, 301 ಬಾಲಕಿಯರು, ಒಟ್ಟು 629 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಹೀಗೆ ಒಟ್ಟು ತಾ|ನಲ್ಲಿ 2007 ಮಂದಿ ಮಕ್ಕಳು ಹೊಸದಾಗಿ ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ಅಭ್ಯರ್ಥಿಗಳಾಗಿ ಸರಕಾರಿ ಶಾಲೆಯ 54 ಬಾಲಕರು, 19 ಬಾಲಕಿಯರು, ಒಟ್ಟು 73 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಪುನರಾವರ್ತಿತ ಅಭ್ಯರ್ಥಿ ಗಳಾಗಿ ಸರಕಾರಿ ಶಾಲೆಯ 47 ಬಾಲಕರು, 19 ಬಾಲಕಿಯರು ಒಟ್ಟು 66 ಮಂದಿ ಪರೀಕ್ಷೆ ಬರೆಯಲಿದ್ದಾರೆ.
ಅನುದಾನಿತ ಶಾಲೆಗಳ ಮಕ್ಕಳಲ್ಲಿ 22 ಬಾಲಕರು, 9 ಬಾಲಕಿಯರು, ಒಟ್ಟು 31 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಅನುದಾನ ರಹಿತ ಶಾಲೆಗಳ 10 ಬಾಲಕರು, 5 ಬಾಲಕಿಯರು, ಒಟ್ಟು 15 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳಾಗಿ 18 ಬಾಲಕರು, 8 ಬಾಲ ಕಿಯರು, ಒಟ್ಟು 26 ಮಂದಿ ಪರೀಕ್ಷೆ ಬರೆಯಲಿದ್ದಾರೆ. 1,126 ಬಾಲಕರು, 1,092 ಬಾಲಕಿಯರು, ಹೀಗೆ ಒಟ್ಟು 2,218 ಮಕ್ಕಳು ಪರೀಕ್ಷೆ ಎದುರಿಸಲಿದ್ದಾರೆ.
ಎಲ್ಲ ಕೇಂದ್ರಗಳಲ್ಲಿ ಪ್ರತಿ ಕೊಠಡಿಗಳಲ್ಲಿ 24 ವಿದ್ಯಾರ್ಥಿಗಳಿಗೆ ಅವಕಾಶ ಮಾಡಿ ಕೊಡಲಾಗಿದೆ. ಈ ಮಕ್ಕಳಿಗೆ ಆಸನ, ಕುಡಿ ಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗುತ್ತದೆ. ಇದನ್ನೆಲ್ಲಾ ಪರೀಕ್ಷಿಸಲು ತಾಲೂಕು ಮಟ್ಟದಲ್ಲಿ ತ್ರಿಸದಸ್ಯ ಸಮಿತಿ ರಚಿಸಲಾಗಿದೆ. ಫಲಿತಾಂಶ ಉನ್ನತೀಕರಣಕ್ಕಾಗಿ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾ ಗಾರಗಳನ್ನು ಆಯೋಜಿಸಲಾಗಿತ್ತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಅಕಾಡೆಮಿಧಾರವಾಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಕಾರ ನೀಡಿತ್ತು, ಗುತ್ತಿಗಾರು, ಪಂಜ, ಗಾಂಧಿನಗರ, ಐವರ್ನಾಡು, ವಿಭಾಗ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.
ಕಟ್ಟುನಿಟ್ಟಿನ ನಿಯಮ
ಮಕ್ಕಳಿಗೆ ಪರೀಕ್ಷೆ ಬರೆಯಲು ಲೇಖನ ಸಾಮಗ್ರಿಗಳು ಬಂದಿವೆ. ಆಯಾಯಾ ಶಾಲೆಯ ವಿದ್ಯಾರ್ಥಿಗಳು ಇನ್ನೊಂದು ಶಾಲೆ ಯಲ್ಲಿ ಪರೀಕ್ಷೆ ಬರೆಯಬೇಕಾಗಿದೆ. ಈ ಬಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದ್ದು, ಪರೀಕ್ಷೆ ಬೆಳಗ್ಗೆ 9.30ಕ್ಕೆ ಆರಂಭವಾಗಲಿದ್ದು, ಅದೇ ಸಮಯಕ್ಕೆ ಮಕ್ಕಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಈ ವಿಷಯವನ್ನು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದ್ದು, ಅವರು ವಿದ್ಯಾರ್ಥಿ ಗಳಿಗೆ ಮನದಟ್ಟು ಮಾಡಿದ್ದಾರೆ. ಅಂತಿಮಸುತ್ತಿನ ಸಭೆ ಡಿಸಿ ನೇತೃತ್ವದಲ್ಲಿ ಮುಂದಿನವಾರ ನಡೆಯಲಿದೆ.
– ಬಿ.ಎಸ್. ಕೆಂಪಲಿಂಗಪ್ಪ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸುಳ್ಯ