ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ನಿಧನ
Team Udayavani, Apr 16, 2024, 12:14 AM IST
ಕಿನ್ನಿಗೋಳಿ: ಸಿರಿಪಾಡ್ದನಗಳ ಮೂಲಕ ಖ್ಯಾತರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದೆ ಗಿಡಿಗೆರೆ ರಾಮಕ್ಕ ಮೊಗೇರ (102) ಅವರು ಕಟೀಲು ಗಿಡಿಗೆರೆಯ ಮನೆಯಲ್ಲಿ ಎ. 15ರಂದು ನಿಧನ ಹೊಂದಿದರು.
ಮೃತರು ಐವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಅಕ್ಷರಾಭ್ಯಾಸದ ಹೊರತಾಗಿಯೂ ಓ ಬೆಲೆ, ನಲ್ಲೊರಿ ಮಾಮ, ಮಂಜೊಟ್ಟಿ ಗೋಣ, ಗೋವಿಂದ ಬದನೆ, ಕನಡ, ಮಾಲ್ಂಡ್ ಮರ, ಕುಮಾರ, ಸಿರಿ, ಬಂಟರು, ಅಬ್ಬಗ-ದಾರಗೆ ಸೇರಿದಂತೆ ಹಲವಾರು ದೈವಿಕ ಆಚರಣೆ ಹಾಗೂ ಶ್ರಮಿಕ ಸಂಸ್ಕೃತಿಯ ಸಂಧಿ-ಪಾಡªನಗಳು ಅವರಿಗೆ ಕಂಠಸ್ಥವಾಗಿದ್ದವು. ಅವರು ದೀರ್ಘವಾಗಿ ಹಾಡಿರುವ “ಸಿರಿ ಪಾಡªನ’ವು ಎ.ವಿ. ನಾವಡ ಅವರ ಸಂಪಾದಕತ್ವದಲ್ಲಿ “ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡªನ’ ಎಂದು ಗ್ರಂಥರೂಪದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಪ್ರಕಟವಾಗಿದೆ.
ಮಂಗಳೂರು ತಾಲೂಕಿನ ವಾಮಂಜೂರಿನಲ್ಲಿ ಕೂಕ್ರ ಮುಗ್ಗೇರ – ದುಗ್ಗಮ್ಮ ದಂಪತಿಯ ಪುತ್ರಿಯಾಗಿ ರಾಮಕ್ಕ ಜನಿಸಿದರು. 17ನೇ ವಯಸ್ಸಿನಲ್ಲಿ ಕಟೀಲು ಸಮೀಪದ ಗಿಡಿಗೆರೆಯ ಕಾಪೀರ ಮುಗ್ಗೇರ ಅವರನ್ನು ಮದುವೆಯಾದರು. ಮುಂದೆ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪಾಡªನ ಕಟ್ಟುವ, ಅದನ್ನು ನಾಟಿಗದ್ದೆಗಳಲ್ಲಿ ಹಾಡುವ ಕೆಲಸ ಅವರಿಂದ ನಡೆಯಿತು. ಅವರಿಗೆ ತುಳು ಕವಿತೆ, ಪಾಡªನ ಮತ್ತು ಸಂಧಿಗಳು ಅಜ್ಜಿಯಿಂದ ಬಳುವಳಿಯಾಗಿ ಬಂದಿವೆ.
ಪುರಸ್ಕಾರಗಳು
2000ದಲ್ಲಿ ವೀರರಾಣಿ ಅಬ್ಬಕ್ಕ ಪ್ರಶಸ್ತಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ, ಕಟೀಲು ದೇವಸ್ಥಾನದ “ಪಾಡªನ ಕೋಗಿಲೆ’ ಬಿರುದು, 2001ರಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪ್ರಶಸ್ತಿ, 2015ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2004-05ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯತ್ವ ಅಲ್ಲದೆ ನೂರಾರು ಗೌರವ, ಸಮ್ಮಾನಗಳು ಅವರಿಗೆ ಸಂದಿವೆ.