ಕರಾವಳಿಯಲ್ಲಿ ಕಟ್ಟೆಚ್ಚರ ಮುಂದುವರಿಕೆ
Team Udayavani, Aug 29, 2019, 5:57 AM IST
ಮಂಗಳೂರು: ಕರಾವಳಿ ತೀರದಲ್ಲಿ ಕಟ್ಟುನಿಟ್ಟಿನ ಭದ್ರತೆ ನಿರಂತರವಾಗಿ ಮುಂದುವರಿಯಲಿದೆ. 15 ದಿನಗಳಿಂದ ಕಡಲ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ| ಹರ್ಷ ಪಿ.ಎಸ್. ಅವರು ತಿಳಿಸಿದ್ದಾರೆ.
ಕಡಲು ಅಥವಾ ಕಡಲ ತೀರದಲ್ಲಿ ಶಂಕಿತ ಬೋಟ್ ಮತ್ತು ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರನ್ನು ಕೇಳಿಕೊಳ್ಳಲಾಗಿದೆ. ಮಾರ್ಕೆಟ್, ಮಾಲ್, ಆಸ್ಪತ್ರೆ, ಬಸ್ಸು- ರೈಲು ನಿಲ್ದಾಣಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದವರು ವಿವರಿಸಿದರು.
ಸರಕಾರಿ ಲಾಂಛನ ದುರ್ಬಳಕೆ ವಿರುದ್ಧ ಕ್ರಮ
ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ದಿನಂಪ್ರತಿ ಸುಮಾರು 400 ರಿಂದ 500ರಷ್ಟು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.