ವಿದೇಶದಿಂದ ಕಳಪೆ ಅಡಿಕೆ ಆಮದಿಗೆ ಕೇಂದ್ರ ಕಾರಣ
ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಆರೋಪ
Team Udayavani, Apr 11, 2019, 6:00 AM IST
ವಿದೇಶದಿಂದ ಆಮದುಗೊಂಡ ಅಡಿಕೆಯನ್ನು ವೆಂಕಪ್ಪ ಗೌಡ ಹಾಗೂ ಇತರರು ಕಾಂಗ್ರೆಸ್ ಸಭೆಯಲ್ಲಿ ಪ್ರದರ್ಶಿಸಿದರು.
ಸುಳ್ಯ: ವಿದೇಶದಿಂದ ಕಳಪೆ ಅಡಿಕೆ ಕಡಿಮೆ ಬೆಲೆಗೆ ಆಮದಾಗುತ್ತಿದ್ದು, ಇದರ ಪರಿಣಾಮ ಈ ಭಾಗದ ಅಡಿಕೆಗೆ ಧಾರಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕೇಂದ್ರ ಸರಕಾರ ನೇರ ಕಾರಣ ಎಂದು ಕೆಪಿಸಿಸಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ್ಮಾ, ಥೈಲ್ಯಾಂಡ್ ಶ್ರೀಲಂಕಾ ಹಾಗೂ ಮಲೇಷ್ಯಾದಿಂದ ಆಮದುಗೊಂಡ ಅಡಿಕೆಯನ್ನು ಪ್ರದರ್ಶಿಸಿದ ಅವರು, ಈ ಅಡಿಕೆ ಮಾರುಕಟ್ಟೆಯಲ್ಲಿ 170 ರೂ.ಗಳಿಗೆ ಸಿಗುತ್ತದೆ. ವಾಸ್ತವವಾಗಿ ಈ ಬಾರಿ ಫಸಲು ಕಡಿಮೆಯಾಗಿರುವುದರಿಂದ ಅಡಿಕೆ ಬೆಲೆ ಮುನ್ನೂರು ರೂ.ಗಳಾದರೂ ಇರಬೇಕಿತ್ತು. ಆದರೆ 175 ರೂ.ಗಳಿಗೆ ಅಡಿಕೆ ದೊರೆತರೆ ಇಲ್ಲಿಯ ಬೆಳೆಗಾರ ಬದುಕಲು ಸಾಧ್ಯವೇ ಎಂದವರು ಪ್ರಶ್ನಿಸಿದರು.
ಮಿಥುನ್ ರೈ ಅವರನ್ನು ಗೆಲ್ಲಿಸಿದರೆ ಅವರು ಅಡಿಕೆ ಬೆಳೆಗಾರರ ಕುರಿತು ಲೋಕಸಭೆಯಲ್ಲಿ ಪ್ರಶ್ನಿಸಿ ಈ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸಲು ಬದ್ಧರಿರುತ್ತಾರೆ. ಆದುದರಿಂದ ಅಡಿಕೆ ಬೆಳೆಗಾರರು ಮಿಥುನ್ ರೈ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಕಳಗಿ ಕೊಲೆ: ಸಮಗ್ರ ತನಿಖೆಯಾಗಲಿ
ಬಿಜೆಪಿ ಧುರೀಣ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಊಹಾಪೋಹಗಳು ಹರಿದಾಡುತ್ತಿದ್ದು, ಈ ಕುರಿತು ಪೊಲೀಸರು ಪೂರ್ಣ ಪ್ರಮಾಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿಸಬೇಕು. ಕಳಗಿ ಕುಟುಂಬಕ್ಕೆ 5 ಪೈಸೆಯ ಸಹಾಯಧನವನ್ನೂ ಬಿಜೆಪಿ ನೀಡಿಲ್ಲ ಎಂದು ಹೇಳಿದರು.
ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಶೇಖರ ಕುಕ್ಕೇಡಿ, ತಾಲೂಕು ಅಧ್ಯಕ್ಷೆ ಲಕ್ಷ್ಮೀ ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡ ಡಾ| ರಘು, ಬೀರಾಮೊಯಿದ್ದೀನ್, ನಂದರಾಜ್ ಸಂಕೇಶ, ಸಿದ್ದೀಕ್ ಕೊಕ್ಕೋ, ಜೂಲಿಯಾನ ಕ್ರಾಸ್ತಾ, ವಸಂತ ಕುದ್ಪಾಜೆ, ಮಧುಸೂದನ ಬೂಡು, ಸುಂದರಿ ಆಲೆಟ್ಟಿ, ಪ್ರಹ್ಲಾದ್, ಪ್ರಕಾಶ್ ಬಂಗ್ಲೆಗುಡ್ಡೆ ಪತ್ರಿಕಾಗೋಷ್ಠಿಯಲ್ಲಿದ್ದರು.
ಬಿಜೆಪಿ ಪ್ರಣಾಳಿಕೆ ಸುಳ್ಳಿನ ಕಂತೆ
ಪಕ್ಷದ ಚುನಾವಣ ಕಚೇರಿಯಲ್ಲಿ ಮಾತನಾಡಿದ ವೆಂಕಪ್ಪ ಗೌಡ, ಈ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. 15 ಲಕ್ಷ ರೂ. ಅಕೌಂಟಿಗೆ ಹಾಕಿಲ್ಲ. ಸ್ವಿಸ್ ಬ್ಯಾಂಕ್ನಿಂದ ಕಪ್ಪು ಹಣ ತಂದಿಲ್ಲ. ಜನಧನ್ ಯೋಜನೆ ಮೂಲಕ ಹಣ ತುಂಬಿಲ್ಲ. ರಾಮ ಮಂದಿರ ಕಟ್ಟಿಲ್ಲ. ಹೀಗಾಗಿ ಜನ ಅವರನ್ನು ನಂಬುವುದು ಇಲ್ಲ. ಉದ್ಯೋಗ ಸೃಷ್ಟಿಯಲ್ಲಿ ಕೇಂದ್ರ ಎಡವಿದೆ ಎಂದು ಟೀಕಿಸಿದರು.
ಮರಣವಾರ್ತೆ ತಿಳಿಸಲು ಡೀಸೆಲ್ ಹಾಕಬೇಕಾದ ಅವಸ್ಥೆ ಬಿಎಸ್ಸೆನ್ನೆಲ್ಗೆ ಬಂದೊದಗಿದೆ. ನಾಳೆ ಇದನ್ನು ಮುಚ್ಚಿ ಖಾಸಗಿಯವರಿಗೆ ಕೊಟ್ಟರೆ ಅಲ್ಲಿ ಅಂಬಾನಿ ಬೆಂಬಲಿಗರಿಗಷ್ಟೇ ಉದ್ಯೋಗ ಸಿಗುತ್ತದೆಯೇ ಹೊರತು ಮೆರಿಟ್ ಆಧಾರದಲ್ಲಿ ಅರ್ಹರಿಗೆ ಸಿಗುವುದಿಲ್ಲ ಎಂದು ವೆಂಕಪ್ಪ ಗೌಡ ತಿಳಿಸಿದರು.