ನದಿಯಲ್ಲಿ ಮುಳುಗಿ ಮೂವರು ಯುವಕರ ಸಾವು
Team Udayavani, Jul 10, 2017, 2:40 AM IST
ಮೂಲ್ಕಿ/ಉಳ್ಳಾಲ: ವಿಹಾರಕ್ಕೆಂದು ಬಂದು ನದಿಗೆ ಸ್ನಾನಕ್ಕೆ ಇಳಿದ 11 ಮಂದಿ ಸ್ನೇಹಿತರ ತಂಡದಲ್ಲಿ ಮೂವರು ಯುವಕರು ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಮೂಲ್ಕಿ ಅತಿಕಾರಿ ಬೆಟ್ಟು ಗ್ರಾಮದ ಮಟ್ಟು ಬಳಿ ಶಾಂಭವಿ ನದಿಯಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮಂಗಳೂರು ಸೋಮೇಶ್ವರದ ಕಿಶೋರ್ ಕುಮಾರ್ ಪೂಜಾರಿ (25), ಕಾಸರಗೋಡು ಮಧೂರು ಮೂಲದ ಅಕ್ಷತ್ ಗಟ್ಟಿ (26) ಹಾಗೂ ಮೂಲ್ಕಿಯ ಮಟ್ಟು ಬಳಿಯ ನಿವಾಸಿ ಮಹೇಶ್ (27) ಮೃತಪಟ್ಟವರು.
ಮೂಲ್ಕಿಯ ಮಟ್ಟು ನಿವಾಸಿ ಮಹೇಶ್ ಅಂಚನ್ ಅವರು ಮಂಗಳೂರಿನ ಖಾಸಗಿ ಗ್ರಾಫಿಕ್ಸ್ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿರುವ ಸ್ನೇಹಿತರನ್ನು ಮತ್ತು ತನ್ನ ಹತ್ತಿರದ ಸಂಬಂಧಿಗಳನ್ನು ಸೇರಿಸಿಕೊಂಡು 10 ಜನ ಮುಂಜಾನೆ ಮಟ್ಟುವಿನ ಮನೆಗೆ ಬಂದಿದ್ದರು. ಮಧ್ಯಾಹ್ನದ ಊಟ ಮುಗಿಸಿದ ಬಳಿಕ ಸ್ನಾನಕ್ಕೆಂದು ಮಟ್ಟು – ಹೆಜಮಾಡಿ ಕಡವು ಬಳಿ ನದಿಗೆ ಇಳಿದಿದ್ದರು.
ಸ್ನೇಹಿತನ ರಕ್ಷಣೆಗೆ ಧಾವಿಸಿದ್ದರು
ಮೊದಲು ನೀರಿಗಿಳಿದ ಅಕ್ಷತ್ (ಮೃತ ಯುವಕ) ಅವರ ಸಹೋದರ ಅಶ್ವಿತ್ ನೀರಿನ ಸೆಳೆತಕ್ಕೆ ಸಿಲುಕಿದರು. ಅವರ ಸಹೋದರ ಸಂಬಂಧಿ ಅವಿನಾಶ್ ನೀರಿಗಿಳಿದು ಅಶ್ವಿತ್ ಅವರನ್ನು ಮೇಲಕ್ಕೆ ಎಳೆದು ಪಾರು ಮಾಡಿದರು. ಇದೇ ವೇಳೆ ಸಹಾಯಕ್ಕೆ ಧಾವಿಸಿ ಬಂದು ನೀರಿಗಿಳಿದ ಅಶ್ವಿತ್ನ ಸಹೋದರ ಅಕ್ಷತ್ ಮತ್ತು ಸ್ನೇಹಿತರಾದ ಕಿಶೋರ್, ಮಹೇಶ್ ಅವರು ಕಾಲುಜಾರಿ ಬಿದ್ದು ನೀರುಪಾಲಾದರು.
ಇರ್ಪೊಯೆÂ ಗುಂಡಿಗೆ ಬಿದ್ದರು
ಯುವಕರು ನೀರಿಗಿಳಿದ ಜಾಗ ಅಷ್ಟೊಂದು ಆಳವಾಗಿರಲಿಲ್ಲ. ಸೊಂಟದ ವರೆಗಷ್ಟೇ ನೀರಿತ್ತು. ಆದರೆ
ಸ್ವಲ್ಪವೇ ದೂರದಲ್ಲಿ ಮೂರು ಇರ್ಪೊಯೆÂ ಹೊಂಡ (ಇರ್ಪೊಯೆÂ = ಸ್ಥಳೀಯರು ತೆಂಗಿನ ಮರದ ಬುಡಕ್ಕೆ ಹಾಕಲು ಬಳಸುವ ಮರಳು ಮಿಶ್ರಿತ ಕೆಸರು) ಇದ್ದುದರಿಂದ ನೀರಿನಲ್ಲಿ ಇವರ ಹತೋಟಿ ತಪ್ಪಲು ಕಾರಣವಾಯಿತು ಎಂದು ಸ್ಥಳೀಯರು ಹೇಳುತ್ತಾರೆ. ಪರಿಸರದ ಜನರು ಹುಡುಕಾಟ ನಡೆಸಿದಾಗ ಮೂರು ಗುಂಡಿಗಳಲ್ಲಿ ಒಂದೊಂದು ಶವ ಪತ್ತೆಯಾದವು.
ರಜಾ ಕಳೆಯಲು ಬಂದಿದ್ದರು
ಮೃತ ಮಹೇಶ್ ಅವರ ತಂದೆ ಶಿವರಾಮ ಅಂಚನ್ ಆವರು ಇತ್ತೀಚಿನ ಕೆಲವು ಸಮಯದಿಂದ ಮೂಡಬಿದಿರೆ ಸಮೀಪ ನಿರ್ಮಿಸಲಾದ ಮನೆಯಲ್ಲಿ ಕುಟುಂಬದ ಜತೆಗೆ ವಾಸವಿದ್ದರು. ಇಲ್ಲಿರುವ ಮನೆಗೆ ಬೀಗ ಹಾಕಿದ್ದು ಯಾವಾಗಲೊಮ್ಮೆ ಬಂದು ಹೋಗುತ್ತಿದ್ದರು. ಪುತ್ರ ಮಹೇಶ್ ಅವರು ರಜಾ ದಿನದ ಪಿಕ್ನಿಕ್ಗಾಗಿ ಸ್ನೇಹಿತರೊಂದಿಗೆ ರವಿವಾರ ತಂದೆಯೊಂದಿಗೆ ಮೂಲ್ಕಿಯ ಮಟ್ಟುವಿನ ಮನೆಗೆ ಬಂದಿದ್ದರು.
ಮೂಲ್ಕಿ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಕೇಸು ದಾಖಲಿ ಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಟುಂಬದ ಆಧಾರ ಸ್ತಂಭ ಅಕ್ಷತ್ ಗಟ್ಟಿ
ಮಧೂರು ಬಾಲಕೃಷ್ಣ ಗಟ್ಟಿ ಮತ್ತು ಸರಸ್ವತಿ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯವನಾದ ಅಕ್ಷತ್ ಗಟ್ಟಿ ಮಧೂರು ಅವರು ಗ್ರಾಫಿಕ್ಸ್ ಡಿಸೈನರ್ ಆಗಿ ಮಂಗಳೂರಿನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವಿವಾಹಿತರಾಗಿದ್ದ ಅಕ್ಷತ್ ಅವರು ತಂದೆ, ತಾಯಿ, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಅಕ್ಷತ್ ತಂದೆ ಮೇಸಿŒ ಕೆಲಸ ಮಾಡುತ್ತಿದ್ದು ಅಕ್ಷತ್ ಮನೆಯ ಆಧಾರ ಸ್ತಂಭವಾಗಿದ್ದರು.
ಏಕೈಕ ಪುತ್ರ ಕಿಶೋರ್
ಸೋಮೇಶ್ವರ ರಕ್ತೇಶ್ವರೀ ದೇವಸ್ಥಾನ ಬಳಿಯ ನಿವಾಸಿಯಾಗಿರುವ ಜನಾರ್ದನ ಪೂಜಾರಿ ಮತ್ತು ವಿಮಲಾ ದಂಪತಿಯ ಮೂವರು ಮಕ್ಕಳಲ್ಲಿ ಕಿಶೋರ್ ಏಕೈಕ ಪುತ್ರ. ಕಿಶೋರ್ ಅವಳಿ ಮಕ್ಕಳಲ್ಲಿ ಒಬ್ಬರಾಗಿದ್ದು, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಿಶೋರ್ ಅವರ ತಂದೆ ಜನಾರ್ದನ್ ಕಾರ್ಖಾನೆಯಲ್ಲಿ ಕೆಲಸ ಬಿಟ್ಟ ಅನಂತರ ಕೂಲಿ ಕೆಲಸ ಮಾಡುತ್ತಿದ್ದಾರೆ. ಮನೆಗೆ ಆರ್ಥಿಕವಾಗಿ ಶಕ್ತಿಯಾಗಿದ್ದ ಕಿಶೋರ್ ಅಗಲುವಿಕೆಯಿಂದ ಕುಟುಂಬ ಅತಂತ್ರವಾಗಿದೆ. ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಗ್ರಾಫಿಕ್ಸ್ ಡಿಸೈನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸ್ಥಳೀಯ ರಕ್ತೇಶ್ವರೀ ಬಳಗದ ಸಕ್ರಿಯ ಸದಸ್ಯರಾಗಿದ್ದರು.
ಮೂಲ್ಕಿಯ ಮಹೇಶ್
ಮಹೇಶ್ ಅವರು ಮೂಲ್ಕಿಯ ಅತಿಕಾರಿಬೆಟ್ಟು ಗ್ರಾಮದ ಮಟ್ಟು ನಿವಾಸಿ ಶಿವರಾಮ ಅಂಚನ್ ಮತ್ತು ನಳಿನಿ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯ ಪುತ್ರ. ಅವರು ತಂದೆ, ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ.
ಅಜ್ಜಿ ಮನೆಯಿಂದ ಹೊರಟಿದ್ದರು
ಅಕ್ಷತ್ ಸಂಬಂಧಿಕ ಹುಡುಗರೊಂದಿಗೆ ಬೆಳಗ್ಗೆ ಕುತ್ತಾರು ಮುಂಡೋಳಿಯ ಲ್ಲಿರುವ ಅಜ್ಜಿ ಮನೆಯಿಂದ ಹೊರಟಿದ್ದರು. ಹೊರಡುವಾಗ ಮಳೆಗಾಲವಾ ದ್ದರಿಂದ ದೂರ ಪ್ರಯಾಣ ಮಾಡಬೇಡಿ ಎಂದು ಮನೆಯವರು ತಿಳಿಸಿದ್ದರು.