ಕಾವ್ಯಾ ಸಾವು,ಸಿಐಡಿ ತನಿಖೆಗೆ ಆಗ್ರಹಿಸಿ ಮನವಿ
Team Udayavani, Sep 21, 2017, 2:34 PM IST
ಮಂಗಳೂರು : ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕೆಂದು ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿಯು ಬುಧವಾರ ಮಂಗಳೂರಿನಲ್ಲಿ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಕಾವ್ಯಾ ಸಾವು ಸಂಭವಿಸಿ 60 ದಿನಗಳಾಗಿವೆ. ತನಿಖೆಗೆ ಆದೇಶಿಸಿ 56 ದಿನಗಳಾಗಿವೆ. ಇದರ ನಿಗೂಢತೆಯನ್ನು ಭೇದಿಸಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಸಿಐಡಿ ತನಿಖೆಗೆ ಒಪ್ಪಿಸುವ ಆವಶ್ಯಕತೆ ಇದೆ ಎಂದು ಸಮಿತಿ ಮನವಿಯಲ್ಲಿ ವಿವರಿಸಿದೆ.
ಕಾವ್ಯಾ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡುವಂತೆ ಸರಕಾರವನ್ನು ಆಗ್ರಹಿಸಲಾಗಿತ್ತು. ಆದರೆ ಅದರ ಬಗ್ಗೆಯೂ ಯಾವುದೇ ಕ್ರಮ ಆಗಿಲ್ಲ ಎಂದು ಸಮಿತಿ ತಿಳಿಸಿದೆ.
ಸಮಿತಿಯ ನಿಯೋಗವು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವರನ್ನು ಭೇಟಿ ಮಾಡಿತು. ಕಾವ್ಯಾ ತಂದೆ ಲೋಕೇಶ್ ಪೂಜಾರಿ ಮತ್ತು ತಾಯಿ ಬೇಬಿ, ಹೋರಾಟ ಸಮಿತಿಯ ಸಂಚಾಲಕ ವಕೀಲ ದಿನಕರ ಶೆಟ್ಟಿ, ಬಿಲ್ಲವ ಏಕೀಕರಣ ಸಮಿತಿಯ ಅಧ್ಯಕ್ಷ ದೀಪಕ್ ಕೋಟ್ಯಾನ್, ಕುಲಾಲ ಸಂಘದ ಜನಾರ್ದನ ಅರ್ಕುಳ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಾಶ್ವತ್ ಕೊಟ್ಟಾರಿ, ಕರ್ನಾಟಕ ರಕ್ಷಣಾ ವೇದಿಕೆಯ ಶ್ರೀಲತಾ, ಯಶವಂತ ಕುಮಾರ್, ದೇವಿಪ್ರಸಾದ್, ಮಧುಸೂದನ ಗೌಡ, ನಾಗೇಶ್ ಬೈಕಂಪಾಡಿ ನಿಯೋಗದಲ್ಲಿದ್ದರು.