ಏಕೀಕರಣ ಸಾಹಿತ್ಯ ಸಮ್ಮೇಳನ: “ಏಕರೂಪದ ಶಿಕ್ಷಣ ಜಾರಿ ಅಗತ್ಯ’
Team Udayavani, Mar 19, 2017, 2:58 PM IST
ಪಾಣಾಜೆ:(ಶಂಪಾ ದೈತೋಟ ವೇದಿಕೆ): ರಾಷ್ಟ್ರದಲ್ಲಿ ಏಕರೂಪದ ಶಿಕ್ಷಣ ಪದ್ಧತಿ ಜಾರಿಯಾದರೆ ಪಾರಂಪರಿಕ ಹಿನ್ನೆಲೆಯ ಪ್ರಭುತ್ವ ಉಳಿಯಲು ಸಾಧ್ಯ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.
ಕಸಾಪ ಪುತ್ತೂರು ಘಟಕದ ಆಶ್ರಯ ದಲ್ಲಿ ಪಾಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಂಪಾ ದೈತೋಟ ವೇದಿಕೆಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ಕರ್ನಾಟಕ ಏಕೀಕರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತ ನಾಡಿದರು.
ಆಯಾ ರಾಜ್ಯದಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು. ಕನ್ನಡ ಭಾಷೆಯ ಶೈಕ್ಷಣಿಕ ವ್ಯವಸ್ಥೆಗೆ ಸರಕಾರವೇ ಮೂಲ ಸೌಕರ್ಯ ನೀಡಬೇಕು. ಸಂಸ್ಕೃತಿ, ಆಚಾರ, ವಿಚಾರಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ಇಂದಿನ ಮಕ್ಕಳಿಗೆ ಅಗತ್ಯ ಎಂದರು.
ನಮ್ಮ ನೆಲ, ಜಲದ ಪರಂಪರೆಯ ಉಳಿವಿನ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ ಕೆಲಸ ಮಾಡುತ್ತಿದೆ. ಸಂಸ್ಕಾರಯುತ ಜೀವನ ರೂಪುಗೊಳ್ಳುವ ತಳಹದಿಯಾಗಿರುವ ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸ ಬೇಕು ಎಂದು ಅವರು ಹೇಳಿದರು.
ಸಮ್ಮೇಳನಾಧ್ಯಕ್ಷ ರಘುನಾಥ ರೈ ನುಳಿಯಾಲು ಮಾತನಾಡಿ, ಕರ್ನಾಟಕ ಏಕೀಕರಣಕ್ಕೆ ಮಹಾಜನ್ ವರದಿ ಜಾರಿ ಆಗಬೇಕು. ಏಕೀಕರಣಕೋಸ್ಕರ ಹಿಂದೆ ಹೆಸರಾಂತ ಸಾಹಿತಿಗಳು, ವಿದ್ವಾಂಸರು ಬರೆಹದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಏಕೀಕರಣ ಕರ್ನಾಟಕದ ನಿರ್ಮಾಣಕ್ಕೆ ಪ್ರತಿಯೊಬ್ಬರ ಪಾತ್ರ ಮುಖ್ಯ ಎಂದು ಅವರು ಹೇಳಿದರು.
ಪುಸ್ತಕ ಪ್ರದರ್ಶನ ಉದ್ಘಾಟಿಸಿದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತ ನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಸಾಹಿತ್ಯ ಕೃತಿ ಅಧ್ಯಯನದಿಂದ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ. ಕೇವಲ ಸಾಮಾಜಿಕ ಜಾಲ ತಾಣಗಳಲ್ಲಿ ಕಾಲ ಕಳೆದರೆ ಅದರಿಂದ ಪ್ರಯೋಜನ ಸಿಗದು ಎಂದರು.
ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಮುಂದಿನ ಪೀಳಿಗೆಗೆ ಪುಸ್ತಕ ಪ್ರೇಮ ಮೂಡಿಸುವ ನಿಟ್ಟಿನಲ್ಲಿ ಹೆತ್ತವರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಪಾಣಾಜೆ ಗ್ರಾ.ಪಂ. ಅಧ್ಯಕ್ಷ ನಾರಾಯಣ ಪೂಜಾರಿ ಧ್ವಜಾರೋಹಣಗೈದರು. ತಾ. ಪಂ. ಸದಸ್ಯೆ ಮೀನಾಕ್ಷಿ ಮಂಜುನಾಥ, ಕಸಾಪ ಜಿಲ್ಲಾ ಕಾರ್ಯದರ್ಶಿ ತಮ್ಮಯ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು.ಸಹ ಶಿಕ್ಷಕಿ ಸತ್ಯವತಿ ಸಮ್ಮೇಳಾನಧ್ಯಕ್ಷರ ಪರಿಚಯ ವಾಚಿಸಿದರು. ಕಸಾಪ ಅಧ್ಯಕ್ಷ ಪಿ. ಐತ್ತಪ್ಪ ನಾಯ್ಕ ಪ್ರಸ್ತಾವನೆಗೈದರು. ಸಮಿತಿ ಅಧ್ಯಕ್ಷ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಸ್ವಾಗತಿಸಿ, ಪಾಣಾಜೆ ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಶೀಲಾವತಿ ಕೆ. ವಂದಿಸಿದರು. ನಿವೃತ್ತ ಶಿಕ್ಷಕಿ ಸರೋಜಿನಿ ಮೇನಾಲ ನಿರೂಪಿಸಿದರು.