ಕರಾವಳಿಯಲ್ಲಿ ಮಳೆ ಸಾಧ್ಯತೆ; ಸಿಡಿಲು ಬಡಿದು ರಸ್ತೆಗೆ ಹಾನಿ
Team Udayavani, Jun 4, 2022, 1:02 AM IST
ಮಂಗಳೂರು/ಉಡುಪಿ: ರಾಜ್ಯ ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜೂನ್ 4 ರಿಂದ 7ರ ವರೆಗೆ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಈ ವೇಳೆ ಗುಡುಗು ಸಿಡಿಲಿನಿಂದ ಕೂಡಿದ ಗಾಳಿ ಮಳೆಯಾಗುವ ನಿರೀಕ್ಷೆ ಇದೆ.
ದ.ಕ. ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶುಕ್ರವಾರ ದಿನವಿಡೀ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತವಾರಣ ಇತ್ತು. ಕೆಲವು ಕಡೆ ಸಾಧಾರಣ ಮಳೆಯಾಗಿದೆ. ಸೆಕೆಯ ಬೇಗೆ ಹೆಚ್ಚಿತ್ತು. ಐಎಂಡಿ ಮುನ್ಸೂಚನೆಯಂತೆ ಮಂಗಳೂರಿನಲ್ಲಿ ಶುಕ್ರವಾರದಂದು 31.7 ಡಿ.ಸೆ. ಗರಿಷ್ಠ ಮತ್ತು 24.2 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು.
ಸಿಡಿಲು ಬಡಿದು ರಸ್ತೆಗೆ ಹಾನಿ
ಕಡಬ: ಇಲ್ಲಿನ ಕೊಂಬಾರು ಪರಿಸರದಲ್ಲಿ ಗುರುವಾರ ಸಂಜೆ 3.30ರಿಂದ ಸುಮಾರು 1 ತಾಸು ಗುಡುಗು ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ. ಈ ವೇಳೆ ದೊಡ್ಡ ಶಬ್ದ ಆಗಿದ್ದು ಇಡಲದಲ್ಲಿ ಕೈಕುರೆ ಕುಶಾಲಪ್ಪ ಗೌಡ ಅವರಿಗೆ ಸೇರಿದ ತೋಟದ ಪಕ್ಕ ಡಾಮರು ರಸ್ತೆಗೆ ಸಿಡಿಲು ಬಡಿದು ಹಾನಿಯಾಗಿದೆ. ಈ ವೇಳೆ ಜನ ಯಾರೂ ಇರಲಿಲ್ಲ. ಸಿಡಿಲು ಬಡಿದ ಕಾರಣ ಡಾಮರು ಎದ್ದು ಹೋಗಿದೆ.