ರೈಲಿನಲ್ಲಿ ನಡೆದದ್ದು ದರೋಡೆ ಯತ್ನವಲ್ಲ; ತೆಂಗಿನ ಕಾಯಿ ಕೀಳುವವರ ಗಲಾಟೆ
Team Udayavani, Jul 2, 2023, 7:20 AM IST
ಮಂಗಳೂರು: ದಾದರ್-ತಿರುನಲ್ವೇಲಿ ರೈಲಿನಲ್ಲಿ ಶುಕ್ರವಾರ ನಡೆದ ಘಟನೆ ದರೋಡೆ ಯತ್ನವಲ್ಲ, ಅದು ತೆಂಗಿನ ಕಾಯಿ ಕೀಳುವ ಇಬ್ಬರ ನಡುವಿನ ಗಲಾಟೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ತಮಿಳುನಾಡಿನ ಜಯಪ್ರಭಾ(28) ಮತ್ತು ಪ್ರಸಾದ್ (23) ಎಂಬವರನ್ನು ಬಂಧಿಸಲಾಗಿದೆ.
ಕತ್ತಿ ಹಿಡಿದು ದಾಂಧಲೆ
ಆರೋಪಿಗಳಿಬ್ಬರು ಕೂಡ ತೆಂಗಿನಕಾಯಿ ಕೀಳುವ ವೃತ್ತಿಯವರು. ತಮಿಳುನಾಡಿನಿಂದ ಗೋವಾಕ್ಕೆ ತೆರಳಿ ಅಲ್ಲಿ 2-3 ತಿಂಗಳ ಕಾಲ ತೆಂಗಿನಕಾಯಿ ಕೀಳುವ ಕೆಲಸ ಮುಗಿಸಿ ಮರಳಿ ಊರಿಗೆ ತೆರಳಲು ರೈಲು ಹತ್ತಿದ್ದರು. ಇಬ್ಬರು ಕೂಡ ಕುಡಿದ ಮತ್ತಿನಲ್ಲಿದ್ದರು. ಪರಸ್ಪರ ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರ ಬಳಿ ತೆಂಗಿನ ಕಾಯಿ ಕೀಳಲು ಉಪಯೋಗಿಸುತ್ತಿದ್ದ ಕತ್ತಿಗಳು ಕೂಡ ಇದ್ದವು. ತೋಕೂರು ಬಳಿ ಬರುತ್ತಿದ್ದಂತೆ ದಾಂಧಲೆ ಆರಂಭಿಸಿ ಕತ್ತಿಯಿಂದ ರೈಲಿನ ಕಿಟಕಿಯ ಗಾಜು, ಸೀಟು ಸೇರಿದಂತೆ ರೈಲಿನ ಸೊತ್ತುಗಳಿಗೆ ಹಾನಿ ಮಾಡಿದರು. ಇದನ್ನು ಕಂಡ ಪ್ರಯಾಣಿಕರು ಇದು ದರೋಡೆ ಕೃತ್ಯವೆಂದು ಆತಂಕಗೊಂಡು ರೈಲ್ವೆ ಸಿಬಂದಿಗೆ ಮಾಹಿತಿ ನೀಡಿದರು. ಅನಂತರ ರೈಲ್ವೆ ಪೊಲೀಸರ ಸಹಾಯದಿಂದ ಆರೋಪಿಗಳನ್ನು ಬಂಧಿಸಲಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.