Ayudha Puja ನಾಡಿನಾದ್ಯಂತ ಇಂದು ಆಯುಧ ಪೂಜೆಯ ಸಂಭ್ರಮ
Team Udayavani, Oct 23, 2023, 6:30 AM IST
ಮಂಗಳೂರು/ಉಡುಪಿ: ಕರಾವಳಿಯಾದ್ಯಂತ ನವರಾತ್ರಿ ಹಿನ್ನೆಲೆಯಲ್ಲಿ ಸೋಮವಾರ ಆಯುಧ ಪೂಜೆ ಹಾಗೂ ಮಂಗಳವಾರ ವಿಜಯದಶಮಿ ಆಚರಣೆ ಇರಲಿದ್ದು, ವಿವಿಧ ದೇವಾಲಯಗಳಲ್ಲಿ ಸಂಭ್ರಮ ಸಡಗರದ ಸಿದ್ಧತೆ ನಡೆಸಲಾಗಿದೆ.
“ಮಂಗಳೂರು ದಸರಾ’ ಸಂಭ್ರಮದ ಶ್ರೀ ಕ್ಷೇತ್ರ ಕುದ್ರೋಳಿ, ಶ್ರೀ ಕ್ಷೇತ್ರ ಕಟೀಲು, ಪೊಳಲಿ, ಮಂಗಳಾದೇವಿ, ಬಪ್ಪನಾಡು, “ಉಚ್ಚಿಲ ದಸರಾ’ ಸಂಭ್ರಮದ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಕೊಲ್ಲೂರು, ಮಂದಾರ್ತಿ, ಕಾಸರಗೋಡು ನಗರದ ಶ್ರೀ ವೆಂಕಟರಮಣ ದೇವಸ್ಥಾನ, ಕೊರಕೋಡು, ಪಾಂಗೋಡು, ಮಲ್ಲ ಸಹಿತ ವಿವಿಧ ದೇವೀ ಆಲಯಗಳಲ್ಲಿ ಹಾಗೂ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮದಿಂದ ನಡೆಯುತ್ತಿದ್ದು, ಆಯುಧ ಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಸರ್ವ ತಯಾರಿ ನಡೆಸಲಾಗಿದೆ. ಕಾಪು ತಾಲೂಕಿನ ಪಾಜಕ ಕ್ಷೇತ್ರದಲ್ಲಿ ಮಧ್ವಾಚಾರ್ಯರು ಜನಿಸಿದ ವಿಜಯದಶಮಿಯಂದು ಮಧ್ವಜಯಂತಿ ಉತ್ಸವ ನಡೆಯಲಿದೆ.
ಆಯುಧ ಪೂಜೆಯ ಹಿನ್ನೆಲೆಯಲ್ಲಿ ಮಂಗಳೂರು, ಉಡುಪಿ ಸಹಿತ ವಿವಿಧ ಕಡೆಗಳಲ್ಲಿ ಹೂ, ಹಣ್ಣು ವ್ಯಾಪಾರ ಬಿರುಸುಗೊಂಡಿದೆ. ರವಿವಾರ ಬೆಳಗ್ಗೆಯಿಂದಲೇ ವ್ಯಾಪಾರಿಗಳು ಮಾರಾಟ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಗ್ರಾಹಕರು ಖರೀದಿ ಸಂಭ್ರಮದಲ್ಲಿದ್ದರು. ಸೇವಂತಿಗೆ, ಮಲ್ಲಿಗೆ, ಚೆಂಡು ಹೂವುಗಳ ಮಾರಾಟ ಜೋರಾಗಿತ್ತು.