ಲಾಠಿ ಹಿಡಿವ ಕೈಗಳು ಹಾರೆ, ಬುಟ್ಟಿ ಹಿಡಿದು ಹೆದ್ದಾರಿ ರಸ್ತೆ ದುರಸ್ತಿ ಮಾಡಿದಾಗ…
Team Udayavani, Aug 8, 2020, 6:01 AM IST
ಬಂಟ್ವಾಳ: ಲಾಠಿ ಹಿಡಿದು ಟ್ರಾಫಿಕ್ ಕಂಟ್ರೋಲ್ ಮಾಡುವ ಪೋಲೀಸರು ಹಾರೆ, ಬುಟ್ಟಿ ಹಿಡಿದು ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು.
ಇದು ಸಾಧ್ಯವಾಗಿದ್ದು ಬಿ.ಸಿ.ರೋಡಿನ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಮಾಡಿದ ಮಾದರಿ ಕಾರ್ಯದಿಂದಾಗಿ.
ಭಾರೀ ಮಳೆಗೆ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಹೊಂಡಗಳೆದ್ದು ವಾಹನ ಸವಾರರಿಗೆ ಭಾರೀ ಸಂಕಷ್ಟ ಎದುರಾಗಿತ್ತು.
ಇದನ್ನೆಲ್ಲಾ ಕಂಡು ಸಂಚಾರ ನಿಯಂತ್ರಣ ಕರ್ತವ್ಯವನ್ನು ಮಾಡುವ ಪೊಲೀಸರೇ ಸ್ವತಃ ಹಾರೆ, ಬುಟ್ಟಿ ಹಿಡಿದು ಹೊಂಡಗಳನ್ನು ಮುಚ್ಚವ ಕೆಲಸಕ್ಕೆ ಕೈ ಹಾಕಿದರು.
ಈ ಮೂಲಕ ಹೆದ್ದಾರಿ ಇಲಾಖೆ ಮಾಡಬೇಕಾದ ಕಾರ್ಯವನ್ನು ಟ್ರಾಫಿಕ್ ಪೋಲೀಸರು ಮಾಡಿದ್ದು ಸಾರ್ವಜನಿಕರ ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.
ಹೆದ್ದಾರಿ ಹೊಂಡಗಳಿಂದಾಗ ಬಿಸಿರೋಡಿನಿಂದ ಮಾಣಿವರೆಗಿನ ರಸ್ತೆಯಲ್ಲಿ ನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ. ಇದೇ ಪರಿಸ್ಥಿತಿ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಎದುರುಗಡೆಯೂ ಪ್ರತೀನಿತ್ಯ ಎಂಬಂತೆ ಅಗುತ್ತಿತ್ತು.
ಟ್ರಾಫಿಕ್ ಪೋಲೀಸ್ ಠಾಣೆಯ ಮುಂಭಾಗದಲ್ಲಿ ಹೊಂಡಗುಂಡಿಗಳಿಂದ ಕೂಡಿದ್ದು ದ್ವಿಚಕ್ರವಾಹನ ಸವಾರರು ಗುಂಡಿಗೆ ಬಿದ್ದು ಗಾಯಗೊಂಡ ಘಟನೆಗಳೂ ಸಹ ನಡೆದಿವೆ.
ಜೊತೆಗೆ ಈ ಹೊಂಡಗಳ ಸಮಸ್ಯೆಯಿಂದ ಇಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗುತ್ತವೆ.
ಈ ದಿನನಿತ್ಯದ ಸಮಸ್ಯೆಯ ಬಗ್ಗೆ ಅರಿತುಕೊಂಡ ಟ್ರಾಫಿಕ್ ಪೋಲೀಸರು ಇಂದು ಸ್ವತಃ ಕೈಯಲ್ಲಿ ಹಾರೆ, ಬುಟ್ಟಿ ಹಿಡಿದು ಗುಂಡಿ ಮುಚ್ಚುವ ಕೆಲಸ ಮಾಡಿ ಇಲಾಖೆಯನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಚರಂಡಿ ವ್ಯವಸ್ಥೆ ಇಲ್ಲ
ಚತುಷ್ಪತ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಲ್ಲಲ್ಲಿ ಕಡಿದು ಅರ್ಧಕ್ಕೆ ನಿಲ್ಲಿಸಿದ ಹೋದ ಕಂಪೆನಿಯಿಂದ ಕಳೆದ ಎರಡು ವರ್ಷಗಳಿಂದ ವಾಹನ ಸವಾರರು ನರಕ ಯಾತನೆ ಅನುಭವಿಸುವಂತಾಗಿದೆ.
ರಸ್ತೆಯ ಬದಿಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹೆದ್ದಾರಿ ಮಧ್ಯೆಯೇ ಹರಿದು ಹೋಗುತ್ತಿದೆ ಮತ್ತು ಇವುಗಳಿಂದಾಗಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿದ್ದು ವಾಹನ ಸವಾರರಿಗೆ ಕಂಟಕಪ್ರಾಯವಾಗಿವೆ.