ತೋಡಿನ ಕಿಂಡಿ ಅಣೆಕಟ್ಟಿಗೆ ಕಟ್ಟ; ಸಮೃದ್ಧ ಜಲರಾಶಿ!
ಅಜೆಕ್ಕಲದಲ್ಲಿ ಸ್ಥಳೀಯರ ಪರಿಶ್ರಮಕ್ಕೆ ಫಲ
Team Udayavani, Jan 7, 2020, 5:47 AM IST
ಬಂಟ್ವಾಳ: ಗ್ರಾಮೀಣ ಭಾಗಗಳಲ್ಲಿ ಪ್ರಸ್ತುತ ಕೃಷಿ ಉಪಯೋಗ ಹಾಗೂ ಅಂತರ್ಜಲ ವೃದ್ಧಿಯ ಉದ್ದೇಶದಿಂದ ತೋಡುಗಳಿಗೆ ಕಟ್ಟ ಹಾಕುವ ಕಾರ್ಯ ನಡೆಯುತ್ತಿದೆ. ಬಂಟ್ವಾಳ ನಗರ ವ್ಯಾಪ್ತಿಯಲ್ಲೇ ಅಂದರೆ ಪುರಸಭೆ ಹಾಗೂ ಅಮಾrಡಿ ಗ್ರಾ.ಪಂ.ನ ಗಡಿ ಭಾಗದಲ್ಲಿ ತೋಡಿಗೆ ಕಟ್ಟ ಹಾಕಲಾಗಿದ್ದು, ಸಮೃದ್ಧ ಜಲರಾಶಿ ಇದೆ.
ಬಂಟ್ವಾಳ ಬೈಪಾಸ್ ಅಜೆಕ್ಕಲದಲ್ಲಿನ ಅತ್ಯಂತ ಹಳೆಯದಾದ ವೆಂಟೆಡ್ ಡ್ಯಾಮ್ ಒಂದಿದ್ದು, ಅದು ನಾದುರಸ್ತಿಯಲ್ಲಿದ್ದ ಕಾರಣ ಕಟ್ಟ ಹಾಕುತ್ತಿರಲಿಲ್ಲ. ಆದರೆ 4 ವರ್ಷಗಳ ಹಿಂದೆ ಈ ವೆಂಟೆಡ್ ಡ್ಯಾಂ ದುರಸ್ತಿ ಪಡಿಸ ಲಾಗಿದ್ದು, ಪ್ರಸ್ತುತ ಪ್ರತಿ ವರ್ಷವೂ ಕಟ್ಟಹಾಕಿ ನದಿಗೆ ಹರಿದು ಹೋಗುವ ನೀರನ್ನು ತಡೆಯಲಾಗುತ್ತಿದೆ.
ಬಂಟ್ವಾಳ ಪುರಸಭೆ ಹಾಗೂ ಅಮಾrಡಿ ಗ್ರಾ.ಪಂ.ನ ಗಡಿ ಭಾಗದಲ್ಲಿ ಈ ಡ್ಯಾಂ ಇದ್ದು, ಇದರ ಹಿನ್ನೀರಿನಿಂದ ಕಿನ್ನಿಬೆಟ್ಟು, ಕಲಾಯಿ, ಮೈರ ಮೊದಲಾದ ಭಾಗಗಳ ಕೃಷಿಕರಿಗೆ ಅನುಕೂಲವಾಗುತ್ತದೆ. ಅಕ್ಕಪಕ್ಕದ ಬಾವಿಗಳಲ್ಲೂ ಅಂತರ್ಜಲ ಮಟ್ಟ ವೃದ್ಧಿಸಿದೆ.
ಸ್ಥಳೀಯರಿಂದಲೇ ಕಟ್ಟ
ಬಿ.ಸಿ. ರೋಡ್ – ಕಡೂರು ಹೆದ್ದಾರಿಯ ಪಕ್ಕದಲ್ಲೇ ಈ ವೆಂಟೆಡ್ ಡ್ಯಾಂ ಇದ್ದು, ಸ್ಥಳೀಯ ಫಲಾನುಭವಿಗಳೇ ಸೇರಿ ಇದಕ್ಕೆ ಕಟ್ಟ ಹಾಕುತ್ತಿದ್ದಾರೆ. ಮೂರು ಲೋಡ್ ಮಣ್ಣನ್ನು ಅಮಾrಡಿ ಗ್ರಾ.ಪಂ.ನಿಂದ ನೀಡಿ ಉಳಿದ ಲೇಬರ್ ಮೊತ್ತವನ್ನು ಸ್ಥಳೀಯರೇ ಶೇರ್ ಹಾಕಿಕೊಂಡು ಮಾಡುತ್ತಾರೆ.
ಇದರಿಂದ ಸ್ಥಳೀಯ ತೋಟಗಳಿಗೆ ಅನುಕೂಲವಾಗುವ ಜತೆಗೆ ಒಂದಷ್ಟು ಮಂದಿ ಇದೇ ನೀರಿಗೆ ಪಂಪ್ ಅಳ ವಡಿಸಿ ತೋಟಗಳಿಗೆ ನೀರು ಹಾಕುತ್ತಾರೆ. ಈ ಬಾರಿ ಕೊಂಚ ಮೊದಲೇ ಕಟ್ಟಹಾಕಲಾಗಿದ್ದು, ಸಾಮಾನ್ಯವಾಗಿ ಪ್ರತಿವರ್ಷ ಫೆಬ್ರವರಿವರೆಗೆ ಹೆಚ್ಚಿನ ಪ್ರಮಾಣ ದಲ್ಲಿ ನೀರು ಕಂಡುಬರುತ್ತದೆ ಎಂದು ಸ್ಥಳೀ ಯರು ಹೇಳುತ್ತಾರೆ. ಪ್ರಸ್ತುತ ತೋಡಿನ ನೀರು ಸ್ಥಳೀಯ ತಗ್ಗು ಪ್ರದೇಶಗಳಿಗೂ ನುಗ್ಗಿ ಸಂಗ್ರಹಗೊಳ್ಳುತ್ತಿದೆ. ತೋಡಿನ ಮರಳನ್ನು ತೆಗೆದರೆ ಇನ್ನೂ ನೀರು ಸಂಗ್ರಹವಾದೀತೆಂಬ ಅಭಿಪ್ರಾಯ ಕೇಳಿಬರುತ್ತಿದೆ.
4 ವರ್ಷಗಳ ಹಿಂದೆ ದುರಸ್ತಿ
ಬಹಳ ಹಿಂದೆ ನಿರ್ಮಾಣವಾಗಿರುವ ಈ ಡ್ಯಾಂನಲ್ಲಿ ಕಟ್ಟ ಹಾಕಿದರೂ ಲೀಕೇಜ್ನಿಂದ ನೀರು ನಿಲ್ಲದ ಪರಿಸ್ಥಿತಿ ಇತ್ತು. ಹೀಗಾಗಿ 4 ವರ್ಷಗಳ ಹಿಂದೆ 50 ಲಕ್ಷ ರೂ.ವೆಚ್ಚದಲ್ಲಿ ಡ್ಯಾಂ ದುರಸ್ತಿ ಮಾಡಲಾಗಿದ್ದು, ಬಳಿಕ ಹೇರಳ ಪ್ರಮಾಣದಲ್ಲಿ ನೀರು ನಿಲ್ಲುತ್ತಿದೆ. ಕಟ್ಟದ ಕಲ್ಲಿನ ಗೋಡೆಗಳನ್ನು ಕಾಂಕ್ರೀಟ್ ಹಾಕಿ ಗಟ್ಟಿಮಾಡಲಾಗಿದ್ದು, ತಡೆಗೋಡೆಗಳನ್ನೂ ಬಲಪಡಿಸಲಾಗಿದೆ.
ವಾರ್ಷಿಕ 15
ಸಾವಿರ ರೂ. ಖರ್ಚು
ಪ್ರಸ್ತುತ ಸ್ಥಳೀಯರೇ ಸೇರಿ ಪ್ರತಿವರ್ಷ ಕಟ್ಟ ಹಾಕುವ ಕಾರ್ಯ ಮಾಡುತ್ತಿದ್ದೇವೆ. ಬಿ. ರಮಾನಾಥ ರೈ ಸಚಿವರಾಗಿದ್ದ ಕಾಲದಲ್ಲಿ ಡ್ಯಾಂ ದುರಸ್ತಿಯಾಗಿತ್ತು. ಪ್ರಸ್ತುತ ಕಟ್ಟ ಹಾಕುವುದಕ್ಕೆ ವಾರ್ಷಿಕ ಸುಮಾರು 15 ಸಾವಿರ ರೂ.ತಗಲುತ್ತಿದ್ದು, ಸ್ಥಳೀಯರೇ ಅದನ್ನು ಹಾಕುತ್ತಾರೆ. ಮೂರು ಲೋಡ್ ಮಣ್ಣನ್ನು ಅಮಾrಡಿ ಗ್ರಾ.ಪಂ.ನಿಂದ ನೀಡುತ್ತೇವೆ.
- ಕೆ. ಸುನೀಲ್ ಕುಮಾರ್
ಸ್ಥಳೀಯ ಗ್ರಾ.ಪಂ. ಸದಸ್ಯ
ಅಂತರ್ಜಲ
ವೃದ್ಧಿಗೆ ಸಹಕಾರಿ
ನಾಲ್ಕು ವರ್ಷಗಳ ಹಿಂದೆ ನಮ್ಮ ಇಲಾಖೆಯ ಮೂಲಕವೇ ಈ ವೆಂಟೆಡ್ ಡ್ಯಾಂನ ದುರಸ್ತಿ ಕಾರ್ಯ ನಡೆದಿದೆ. ಪ್ರಸ್ತುತ ಡ್ಯಾಂನ ಕಟ್ಟದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಹಿನ್ನೀರು ಕಂಡುಬರುತ್ತಿದ್ದು, ಅಂತರ್ಜಲ ವೃದ್ಧಿಗೆ ಬಹಳ ಅನುಕೂಲವಾಗಿದೆ. ತೋಡಿನ ಎರಡೂ ಬದಿಗಳ ತೋಟಗಳಿಗೆ ಅನುಕೂಲವಾಗುವ ಜತೆಗೆ ಕೊಳವೆಬಾವಿ, ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಲಿದೆ.
-ಶಿವಪ್ರಸನ್ನ, ಸಹಾಯಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
– ಕಿರಣ್ ಸರಪಾಡಿ