ಹೊಸ ಮನೆಗಳಲ್ಲಿ ಮಳೆಕೊಯ್ಲು, ಜಲ ಮರುಪೂರಣ
Team Udayavani, Jun 27, 2018, 2:50 AM IST
ಸವಣೂರು: ನೂತನವಾಗಿ ನಿರ್ಮಾಣ ಮಾಡುವ ಮನೆಗಳಲ್ಲಿ ಮಳೆ ಕೊಯ್ಲು ಅಥವಾ ಜಲ ಮರುಪೂರಣ ಘಟಕ ನಿರ್ಮಾಣಕ್ಕೆ ಸೂಚಿಸಬೇಕು. ಇದು ಅಂತರ್ಜಲ ಹೆಚ್ಚಳಕ್ಕೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ನೂತನವಾಗಿ ಮನೆ ಕಟ್ಟಲು ನಿರಾಕ್ಷೇಪಣ ಪತ್ರದ ಜತೆಗೆ ಈ ರೀತಿಯ ಸೂಚನೆ ನೀಡುವಂತೆ ಸವಣೂರು ಗ್ರಾ.ಪಂ.ನ ಮುಂದೆ ಗ್ರಾ.ಪಂ. ಹಿರಿಯ ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆ ಇಟ್ಟಿದ್ದಾರೆ. ಈ ಪ್ರಸ್ತಾವನೆಯನ್ನು ಗ್ರಾ.ಪಂ. ಅನುಷ್ಠಾನಕ್ಕೆ ತಂದರೆ ಮಾದರಿ ಯೋಜನೆಯಾಗಿ ರೂಪುಗೊಳ್ಳಲು ಸಾಧ್ಯ. ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿಯೂ ಇದು ಸಹಕಾರಿಯಾಗಲಿದೆ. ಭೂಮಿಯಲ್ಲಿ ತೇವಾಂಶ ನಿಲ್ಲುವ ಜತೆಗೆ ವ್ಯರ್ಥವಾಗಿ ಹರಿದು ಹೋಗುವ ನೀರು ನಮ್ಮ ಭೂಮಿಯಲ್ಲೇ ಇಂಗುತ್ತದೆ.
ಭವಿಷ್ಯಕ್ಕೆ ಪ್ರಯೋಜನ
ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ಭೂಮಿಯೊಳಗೆ ಇಂಗಿದ ನೀರು ಭವಿಷ್ಯಕ್ಕೆ ಎನ್ನುತ್ತಾರೆ ಹಿರಿಯರು. ಹಿಂದೆ ಎಂತಹ ಬೇಸಗೆಯಲ್ಲೂ ಕುಡಿಯುವ ನೀರಿಗೆ, ಕೃಷಿಗೆ ನೀರಿನ ತಾಪತ್ರಯ ಅಷ್ಟೊಂದು ಇರಲಿಲ್ಲ. ಮಳೆಗಾಲದಲ್ಲಿ ಸುರಿಯುವ ಮಳೆ ನೀರು ಕೆರೆ, ಬಾವಿ, ಮಣ್ಣಿನ ಕಟ್ಟಗಳಲ್ಲಿ ಶೇಖರಣೆಯಾಗುತ್ತಿತ್ತು. ಆದರೆ, ಈಗ ಅವೆಲ್ಲ ಕಾಣಸಿಗುವುದೇ ವಿರಳ. ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳಿಂದ ನಮ್ಮ ಅಂತರ್ಜಲ ಮಟ್ಟ ಹೆಚ್ಚಳಗೊಂಡು ಭವಿಷ್ಯದ ದಿನಗಳಿಗೆ ಪ್ರಯೋಜನವಾಗಲಿದೆ ಎನ್ನುತ್ತಾರೆ ಹೊಸದಿಲ್ಲಿ ಐಸಿಎಆರ್ ನಿರ್ದೇಶಕ ಬಿ.ಕೆ. ರಮೇಶ್ ಅವರು.
ಸ್ವ ಪ್ರೇರಣೆಯಿಂದ ಅಳವಡಿಕೆ
ಹಲವರು ತಮ್ಮ ಮನೆಗಳಲ್ಲಿ ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳನ್ನು ನಿರ್ಮಿಸಿದ್ದಾರೆ. ಇದರಿಂದ ಅವರ ಕೊಳವೆ ಬಾವಿಯಲ್ಲಿ ಬೇಸಿಗೆಯಲ್ಲೂ ನೀರಿನ ಮಟ್ಟ ಕುಸಿತವಾಗಿಲ್ಲ. ಮಳೆಕೊಯ್ಲಿನ ಮೂಲಕ ಮಳೆ ನೀರನ್ನು ಬಾವಿಗೆ ಇಂಗಿಸಿದರಿಂದ ಬಿರು ಬೇಸಿಗೆಯಲ್ಲೂ ಸಮೃದ್ಧ ನೀರು ಪಡೆಯುತ್ತಿದ್ದಾರೆ.
ಕಡ್ಡಾಯವಾದರೆ ಜಲಸಮೃದ್ಧಿ
ಹೊಸ ಮನೆಗಳಲ್ಲಿ ಮಳೆಕೊಯ್ಲು ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಗ್ರಾ.ಪಂ. ಆಡಳಿತ ಅನುಷ್ಠಾನ ಮಾಡಿದರೆ, ಈ ವ್ಯಾಪ್ತಿಯಲ್ಲಿ ಜಲಸಮೃದ್ಧಿಗೆ ಕಾರಣ ವಾಗಲಿದೆ. ಮಳೆ ಕೊಯ್ಲಿಗೆ ಗರಿಷ್ಠ 5 ಸಾವಿರ ರೂ. ವೆಚ್ಚವಾಗಬಹುದು. ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸಲು ಸುಮಾರು 20 ಸಾವಿರ ರೂ. ಖರ್ಚಾಗಬಹುದು.
ಉದ್ಯೋಗ ಖಾತರಿಯಲ್ಲಿದೆ ಅವಕಾಶ
ಕೇಂದ್ರ ಸರಕಾರದ ಉದ್ಯೋಗ ಖಾತರಿ ಯೋಜನೆಯ ಮೂಲಕ ಕೊಳವೆ ಬಾವಿಗಳಿಗೆ ಜಲಮರುಪೂರಣ ಘಟಕ ನಿರ್ಮಿಸಿಕೊಳ್ಳಲು ಅವಕಾಶವಿದೆ. ಗ್ರಾ.ಪಂ.ನಲ್ಲಿ ಉದ್ಯೋಗ ಚೀಟಿ ಮಾಡಿಸಿ ಕೊಂಡು ಯೋಜನೆಯ ಕುರಿತಾದ ಕೆಲ ದಾಖಲೆಗಳನ್ನು ನೀಡಿ ತಮ್ಮ ಮನೆಗಳಲ್ಲೂ ಈ ಘಟಕವನ್ನು ಆರಂಭಿಸಬಹುದು.
ಸ್ವ ಪ್ರೇರಣೆಯಿಂದ ಮಾಡಿ
ಭವಿಷ್ಯದ ಹಿತದೃಷ್ಟಿಯಿಂದ ಮಳೆಕೊಯ್ಲು ಕಡ್ಡಾಯ ಯೋಜನೆಯ ಕುರಿತು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಸ್ತಾವ ಮಾಡಲಾಗಿದೆ. ಗ್ರಾ.ಪಂ. ಕಡ್ಡಾಯಗೊಳಿಸದಿದ್ದರೂ ನಾಗರಿಕರು ಸ್ವಯಂ ಪ್ರೇರಣೆಯಿಂದ ಮಳೆ ಕೊಯ್ಲು, ಜಲ ಮರುಪೂರಣ ಘಟಕಗಳನ್ನು ನಿರ್ಮಿಸಬೇಕು. ಇದರಿಂದ ಸಾಕಷ್ಟು ಪ್ರಯೋಜನವಾಗುತ್ತದೆ ಎಂಬುದನ್ನು ನಾನು ಕಂಡಿದ್ದೇನೆ. ಹೀಗಾಗಿ, ಪ್ರಸ್ತಾವವನ್ನು ಸಭೆಯ ಮುಂದೆ ಇಟ್ಟಿದ್ದೇನೆ.
– ಗಿರಿಶಂಕರ ಸುಲಾಯ, ಸವಣೂರು ಗ್ರಾ.ಪಂ. ಸದಸ್ಯ
ಮನಸ್ಸಿದ್ದರೆ ಸಾಕು
ದುಡ್ಡನ್ನು ನೀರಿನಂತೆ ಖರ್ಚು ಮಾಡಬೇಡಿ ಎಂಬ ಮಾತು ಇದೆ. ಮುಂದೆ, ನೀರನ್ನು ದುಡ್ಡಿನಂತೆ ಖರ್ಚು ಮಾಡಬೇಡಿ ಎನ್ನುವ ಕಾಲವೂ ಬಂದೀತು. ಇಂಥ ಸ್ಥಿತಿಯ ಲಕ್ಷಣಗಳು ಈಗಲೇ ಇರುವಾಗ ಎಲ್ಲವನ್ನೂ ಸರಕಾರವೇ ಮಾಡಬೇಕೆಂದು ಕೂರುವುದು ಸರಿಯಲ್ಲ. ನೀರಿನ ಸಂರಕ್ಷಣೆಗೆ ಭಗೀರಥ ಪ್ರಯತ್ನವೇನೂ ಆಗಬೇಕೆಂದಿಲ್ಲ. ಮನಸ್ಸಿದ್ದರೆ ಸಾಕು. ಪೈಪ್ ಅಳವಡಿಸಿ ಸುಲಭ ವಿಧಾನದ ಮೂಲಕ ಛಾವಣಿ ನೀರನ್ನು ನೇರವಾಗಿ ಬಾವಿಗಿಳಿಸಬಹುದು. ತನ್ನ ಮನೆಯಲ್ಲಿ ಹಲವು ವರ್ಷಗಳಿಂದ ಮಳೆ ಕೊಯ್ಲು ಮಾಡುತ್ತಿದ್ದೇನೆ. ಇದರಿಂದ ಸಾಕಷ್ಟು ಪ್ರಯೋಜನವಾಗಿದೆ.
– ಯೋಗೀಶ್ ಕಾಯರ್ಗ, ಸವಣೂರು ನಿವಾಸಿ
— ಪ್ರವೀಣ್ ಚೆನ್ನಾವರ