3ರಿಂದ 19 ಅಡಿಗೇರಿದ ಜಲ ಮಟ್ಟ
Team Udayavani, Feb 22, 2019, 1:00 AM IST
ಮೂಡುಬಿದಿರೆ: ಇಲ್ಲಿಗೆ ಸಮೀಪದ ಪಾಲಡ್ಕ ಎಂಬಲ್ಲಿನ ನಿವಾಸಿಯೊಬ್ಬರ ಮನೆಯ ಬಾವಿಯಲ್ಲಿ 3 ಅಡಿಗಳಷ್ಟಿದ್ದ ನೀರಿನ ಮಟ್ಟ ಬುಧವಾರ ಹಠಾತ್ 19 ಅಡಿಗಳಿಗೇರಿದೆ!
ಶ್ರೀ ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಮತ್ತು ಪಾಲಡ್ಕ ಚರ್ಚ್ ಸಮೀಪದ ಸತೂರ್ನಿ-ವೀಣಾ ಡಿ’ಸಿಲ್ವ ಅವರ ಮನೆಯ ಬಾವಿಯಲ್ಲಿ ಈ ವಿಸ್ಮಯ ಘಟಿಸಿದೆ. ದಂಪತಿ ಕೆಲವು ವರ್ಷಗಳ ಹಿಂದೆ ಜಾಗ ಖರೀದಿಸಿ, ಮನೆ ನಿರ್ಮಿಸಿದ್ದರು. ಎರಡು ವರ್ಷಗಳ ಹಿಂದೆ 40 ಅಡಿ ಆಳದ ತೆರೆದ ಬಾವಿಯನ್ನು ತೋಡಲಾಗಿತ್ತು. ಕಳೆದ ವರ್ಷ ಫೆಬ್ರವರಿಯಲ್ಲಿ ನೀರಿನ ಮಟ್ಟ 3 ರಿಂಗ್ಗಳಿಗಷ್ಟೇ ಸೀಮಿತವಾಗಿತ್ತು. ಈ ಬಾರಿಯೂ ಅಷ್ಟೇ ಇತ್ತು ಎಂದು ಸತೂರ್ನಿ ದಂಪತಿ ತಿಳಿಸಿದ್ದಾರೆ. ಸುತ್ತಮುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ. ಆದರೆ ಇದೊಂದು ಬಾವಿಯಲ್ಲಿ ಮಾತ್ರ ನೀರು ಏಕಾಏಕಿ ಏರಿಕೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕಿಂಡಿ ಅಣೆಕಟ್ಟು ಪರಿಣಾಮ?
ಈ ಬಾವಿಯಿಂದ ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿರುವ ಪುತ್ತಿಗೆ ಕಂಚಿಬೈಲು ಎರುಗುಂಡಿಯಲ್ಲಿ ಪಾಲಡ್ಕ ಚರ್ಚ್ನ ಧರ್ಮಗುರುಗಳು ಹಾಗೂ ಊರವರ ಮುತುವರ್ಜಿಯ ಫಲವಾಗಿ ಜನಪ್ರತಿನಿಧಿಗಳ ಪ್ರಯತ್ನ ದಿಂದ ರೂ. ಒಂದೂವರೆ ಕೋಟಿ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಕಿಂಡಿ ಅಣೆಕಟ್ಟಿನಿಂದಾಗಿ ಅಂತರ್ಜಲ ವೃದ್ಧಿಯಾಗಿರುವ ಪರಿಣಾಮ ಇದು ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.