ತೆರವಾದ ಹೂಳು; ತುಂಬಿದ ಜಕ್ರಿಬೆಟ್ಟು ಜ್ಯಾಕ್ವೆಲ್: ತುಂಬೆ ಡ್ಯಾಂಗೆ ಹರಿದ ನೀರು
Team Udayavani, Jun 8, 2019, 9:34 AM IST
ಬಂಟ್ವಾಳ: ಎಂಆರ್ಪಿಎಲ್ ಡ್ಯಾಂ ಮತ್ತು ಶಂಭೂರು ಎಎಂಆರ್ ಡ್ಯಾಂ ಪಾತ್ರದಲ್ಲಿ ಹೂಳು ತೆರವು ಮಾಡಿ ದ್ದರಿಂದ ಸಾಕಷ್ಟು ನೀರು ಹರಿದು ಬಂದು ಜಕ್ರಿಬೆಟ್ಟು ಜ್ಯಾಕ್ವೆಲ್ ತುಂಬಿದೆ. ಅಲ್ಲಿಂದ ತುಂಬೆ ಡ್ಯಾಂಗೂ ಹರಿದು ನೀರಿನ ಮಟ್ಟ ಏರಿದೆ.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು, ಬಂಟ್ವಾಳ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ಮತ್ತು ಇತರರು ಜೆಸಿಬಿ, ಹಿಟಾಚಿ ಬಳಸಿ ಮರಳು ಡ್ರೆಜ್ಜಿಂಗ್ ಮೂಲಕ ತೆರವು ಮಾಡಿದ್ದರಿಂದ ಹರಿವು ಆರಂಭವಾಗಿದೆ. ಸುಮಾರು 2 ಕಿ.ಮೀ. ದೂರಕ್ಕೆ ನೀರು ಹರಿದು ಜ್ಯಾಕ್ವೆಲ್ ಸುತ್ತ ತುಂಬಿದೆ. ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿದೆ.
ನಿಜವಾದ ಉದಯವಾಣಿ ವರದಿ
ಡ್ಯಾಂ ಪಾತ್ರದಲ್ಲಿ ತುಂಬಿದ ಹೂಳು ತೆರವು ಮಾಡಿದಲ್ಲಿ ನೀರು ಸಾಕಷ್ಟು ಲಭ್ಯವಾಗುವುದಾಗಿ “ಉದಯವಾಣಿ’ ಎರಡು ತಿಂಗಳಿಂದ ಸತತ ವರದಿ ಮಾಡಿದ್ದು, ಅದೀಗ ಸತ್ಯವಾಗಿದೆ. ಜೂನ್ನಲ್ಲಿ ಎರಡು ಮಳೆ ಬಂದಿದ್ದರೂ ಮಳೆ ನೀರು ನದಿಗೆ ಹರಿದು ಬಂದಿರಲಿಲ್ಲ. ಆದರೂ ಇಷ್ಟೊಂದು ನೀರು ಹೂಳಿನಡಿ ಅಡಗಿದ್ದುದು ಅಚ್ಚರಿಗೆ ಕಾರಣವಾಗಿದೆ. ಎರಡು ವಾರ ಹಿಂದಿನ ಮಳೆಯ ಬಳಿಕ ಉಪ್ಪಿನಂಗಡಿ ನೆಕ್ಕಿಲಾಡಿ ಕಿರು ಡ್ಯಾಂನಲ್ಲಿ ನೀರು ಹೊರಹರಿದಿದ್ದರೂ ಮರಳಿನಡಿ ಇಂಗುತ್ತಿದ್ದು, ಮೇಲ್ಭಾಗದಲ್ಲಿ ಹರಿವು ಇರಲಿಲ್ಲ. ಅಧಿಕಾರಿ ವರ್ಗ ನೀರಿನ ರೇಶನಿಂಗ್ ಅನಿವಾರ್ಯವಾಗಿ ಘೋಷಿಸಿತ್ತೇ ವಿನಾ ಸರಪಾಡಿ, ಶಂಭೂರು ಡ್ಯಾಂಗಳಲ್ಲಿ ಹೂಳು ತೆರವಿಗೆ ಮುಂದಾಗಿರಲಿಲ್ಲ.
ಎಂಆರ್ಪಿಎಲ್ ಡ್ಯಾಂ ಹೂಳು ತೆರವು ಮಾಡಿ ತೂಬು ಬಿಡಿಸಿಕೊಟ್ಟದ್ದು ನೀರು ಹರಿದು ಬರಲು ಕಾರಣ ವಾಗಿದೆ. ಇದರಿಂದ ಜಕ್ರಿಬೆಟ್ಟು ಮತ್ತು ತುಂಬೆಗೆ ನೀರು ಬಂದಿದೆ.
ಲಿಂಗೇ ಗೌಡ, ಮನಪಾ ಕಾ.ನಿ. ಎಂಜಿನಿಯರ್
ನಾವು ಸುಮಾರು 2 ಕಿ.ಮೀ. ಉದ್ದಕ್ಕೆ ಡ್ರೆಜ್ಜಿಂಗ್ ಮಾಡಿಸಿದ್ದೇವೆ. ನೀರಿನ ಹರಿವಿಗೆ ಹೂಳು ಅಡಚಣೆಯಾಗಿತ್ತು. ಅದನ್ನು ತೆರವು ಮಾಡಿದಾಗ ಹರಿವು ಆರಂಭವಾಗಿದೆ.
ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಶಾಸಕರು