ವಿವೇಕಾನಂದ ಜಯಂತಿ ಅಂಗವಾಗಿ ಯುವ ದಿನಾಚರಣೆ
Team Udayavani, Jan 20, 2018, 12:22 PM IST
ಮಹಾನಗರ: ಸ್ವಾಮಿ ವಿವೇಕಾನಂದರು ಯಾವುದೇ ವರ್ಗಕ್ಕೆ ಸೀಮಿತವಾಗದೆ ಇಡೀ ಜಗತ್ತಿನ ಆಸ್ತಿಯಾಗಿದ್ದಾರೆ. ಅವರ ಅಧ್ಯಯನದಿಂದ ಮತೀಯತೆ ದೂರವಾಗಲಿದ್ದು, ಅದು ಪ್ರಸ್ತುತ ಭಾರತದ ಅನಿವಾರ್ಯತೆಯಾಗಿದೆ ಎಂದು ರಾಮಕೃಷ್ಣ ಮಿಷನ್ನ ಸ್ವತ್ಛತಾ ಅಭಿಯಾನದ ಪುತ್ತೂರಿನ ಮುಖ್ಯಸಂಯೋಜಕ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ಶುಕ್ರವಾರ ನಗರದ ಕೊಡಿಯಾಲ್ಬೈಲ್ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ದ.ಕ. ಜಿಲ್ಲಾಡಳಿತ, ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ದ.ಕ.ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ವಿವೇಕಾನಂದರ 155ನೇ ಜಯಂತಿಯ ಪ್ರಯುಕ್ತ ನಡೆದ ಯುವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಅಧ್ಯಯನ ಅಗತ್ಯ
ನಾವು ವಿವೇಕಾನಂದರ ಕುರಿತು ಅಧ್ಯಯನ ಮಾಡಿದರೆ ಮಾತ್ರ ಭಾರತದ ಅಧ್ಯಯನ ಸಾಧ್ಯವಾಗುತ್ತದೆ. ವಿವೇಕಾನಂದರು ಬದುಕಿದ್ದು 39 ವರ್ಷವಾದರೂ, ಅವರ ಹೆಸರಿನಲ್ಲಿ ಇಂದು ಒಂದು ಲಕ್ಷಕ್ಕೂ ಅಧಿಕ ಸಂಘಟನೆಗಳು ಕೆಲಸ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಆದರ್ಶ ಪಾಲಿಸಿ
ಬೆಸೆಂಟ್ ಕಾಲೇಜಿನ ಸಂಚಾಲಕ ದೇವಾನಂದ ಪೈ ಮಾತನಾಡಿ, ವಿವೇಕಾನಂದರ ಆದರ್ಶಗಳನ್ನು ಪಾಲಿಸಿದಾಗ
ಮಾತ್ರ ನಾವು ಅವರಿಗೆ ಗೌರವ ಕೊಟ್ಟಂತಾಗುತ್ತದೆ. ಯುವಜನಾಂಗ ಇದಕ್ಕೆ ಹೆಚ್ಚಿನ ಮಹತ್ವ ಕೊಟ್ಟಾಗ ಜೀವನ
ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಕಲ್ಪ ಮಾಡಬೇಕಿದೆ ಎಂದರು.
ಜಿಲ್ಲಾ ರೆಡ್ಕ್ರಾಸ್ನ ಚೇರ್ಮನ್ ಶಾಂತಾರಾಮ ಶೆಟ್ಟಿ, ರಥಬೀದಿ ಕಾಲೇಜಿನ ಪ್ರಾಧ್ಯಾಪಕರಾದ ನವೀನ್ ಕೋಣಾಜೆ,
ಡಾ| ಜಯಕರ್ ಭಂಡಾರಿ, ಡಾ| ಪ್ರವೀಣ್ ಕೆ.ಸಿ., ಪ್ರೊ| ಸೈಯದ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ರಥಬೀದಿ ಕಾಲೇಜಿನ ಪ್ರಾಂಶುಪಾಲ ಪ್ರೊ| ರಾಜಶೇಖರ್ ಹೆಬ್ಟಾರ್ ಪ್ರಸ್ತಾವನೆಗೈದರು. ಬೆಸೆಂಟ್ ಪ್ರಾಂಶುಪಾಲ ಡಾ| ಸತೀಶ್ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ| ಮೀನಾಕ್ಷಿ ನಿರ್ವಹಿಸಿದರು.